ಹಾವೇರಿ: ಸಮಾಜದ ನೆಮ್ಮದಿಗಾಗಿ ಹಗಲಿರುಳು ಕೆಲಸ ಮಾಡುವ ಪೊಲೀಸರು ದೈಹಿಕ ಮತ್ತು ಮಾನಸಿಕ ಸದೃಢತೆ ಕಾಯ್ದುಕೊಳ್ಳುವುದು ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಹೇಳಿದರು.
ಸಮೀಪದ ಕೆರೆಮತ್ತಿಹಳ್ಳಿ ಡಿಎಆರ್ ಕವಾಯತ್ ಮೈದಾನದಲ್ಲಿ ಶುಕ್ರವಾರ ನಾಲ್ಕು ದಿನಗಳ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಪಾರಿವಾಳ ಹಾರಿಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಒಂದು ಸಂಶೋಧನೆ ಪ್ರಕಾರ ಭಾರತದಲ್ಲಿ ಮಧ್ಯಮ ವಯಸ್ಕರರಲ್ಲಿ ಡಯಾಬಿಟಿಸ್ ಹಾಗೂ ಮಧುಮೇಹ ಹೆಚ್ಚಾಗಿ ಕಂಡುಬರುತ್ತಿದೆ. ಬಿಡುವಿಲ್ಲದ ಕಚೇರಿ ಕೆಲಸ ಕಾರ್ಯಗಳಿಂದ ಹಾಗೂ ಒತ್ತಡದಿಂದಾಗಿ ನಾವು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಗಮನ ನೀಡುತ್ತಿಲ್ಲ. ಇದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರುಗಳು ಉಂಟಾಗುತ್ತಿವೆ. ಬಿಡುವಿನ ವೇಳೆಯಲ್ಲಿ ನಾವೆಲ್ಲರೂ ಆದಷ್ಟು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಅದರಲ್ಲೂ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾಗಿರುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡಾ ಚಟುವಟಿಕೆ ಸಹಕಾರಿಯಾಗಿದೆ. ನಾಲ್ಕು ದಿನಗಳ ಈ ಕ್ರೀಡಾಕೂಟದಲ್ಲಿ ಅತ್ಯಂತ ಉತ್ಸಾಹ ಹಾಗೂ ಸಂತೋಷದಿಂದ ಭಾಗವಹಿಸಿ ಎಂದು ಶುಭ ಕೋರಿದರು.ಆಕರ್ಷಕ ಪಥಸಂಚಲನ: ಪೊಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹಾವೇರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ರಾಣಿಬೆನ್ನೂರು, ಶಿಗ್ಗಾಂವಿ ಉಪವಿಭಾಗಗಳ ತಂಡ ಹಾಗೂ ಮಹಿಳಾ ಪೊಲೀಸ್ ಕ್ರೀಡಾ ತಂಡಗಳು ಗುಲಾಬಿ, ಕೇಸರಿ, ನೀಲಿ, ಕೆಂಗಂದು ಹಾಗೂ ಕ್ರೀಮ್ ಕಲರ್ ಟೀ ಶರ್ಟ್ ಧರಿಸಿ ಶಿಸ್ತುಬದ್ಧ ಪಥಸಂಚಲನ ನಡೆಸಿದರು.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಚನ್ನಪ್ಪ ಪೂಜಾರ, ನಾಗರಿಕ ಪೊಲೀಸ್ ಉಪ ವಿಭಾಗದ ಮಂಜುನಾಥ್, ರಾಣಿಬೆನ್ನೂರ ಉಪವಿಭಾಗದಿಂದ ಪಿಎಸ್ಐ ಕೃಷ್ಣಪ್ಪ, ಮಹಿಳಾ ಪೊಲೀಸ್ ಶ್ರೀಮತಿ ಸುಜಾತಾ ಪಾಟೀಲ, ಶಿಗ್ಗಾಂವಿ ಉಪ ವಿಭಾಗದ ಸಂತೋಷಕುಮಾರ ಆಡೂರ ಅವರ ನೇತೃತ್ವದಲ್ಲಿ ನಡೆದ ಪಥಸಂಚಲನ ಅತ್ಯಂತ ಆಕರ್ಷಕವಾಗಿತ್ತು. ಆರ್ಎಸ್ಐ ಶಂಕರಗೌಡ ಪಾಟೀಲ ಅವರು ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು.ಕ್ರೀಡಾಜ್ಯೋತಿ: ಕ್ರೀಡಾಕೂಟದ ಅಂಗವಾಗಿ ಕ್ರೀಡಾಜ್ಯೋತಿಯನ್ನು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಬೆಳಗಿಸಿದರು. ಕಳೆದ ಏಳು ವರ್ಷಗಳಿಂದ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪುರಸ್ಕೃತ ಪೊಲೀಸ್ ಕ್ರೀಡಾಪಟು ಸಂತೋಷ ನಾಯಕ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನ್ಶುಕುಮಾರ್ ಸ್ವಾಗತಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಸಿ. ವಂದಿಸಿದರು.