ಮೈಸೂರು-ಕುಶಾಲನಗರ ಹೆದ್ದಾರಿ ಕಾಮಗಾರಿ ವರ್ಷದಲ್ಲಿ ಪೂರ್ಣ: ಪ್ರತಾಪ್‌ಸಿಂಹ

KannadaprabhaNewsNetwork | Published : Nov 25, 2023 1:15 AM

ಸಾರಾಂಶ

ಮೈಸೂರಿನಿಂದ ಕುಶಾಲನಗರ ತನಕ ನಡೆಯಲಿರುವ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಈಗಾಗಲೇ ಕೆಲವು ಕೇಂದ್ರಗಳಲ್ಲಿ ಕಾಮಗಾರಿಗೆ ಅವಶ್ಯಕತೆ ಇರುವ ಯಂತ್ರೋಪಕರಣಗಳು ಬೀಡು ಬಿಟ್ಟಿದ್ದು, ಪ್ರಾಥಮಿಕ ಕಾಮಗಾರಿಗಳು ನಡೆಯುತ್ತಿವೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಬಾಕಿ ಇದ್ದು, ಸದ್ಯದಲ್ಲಿಯೇ ಹುಣಸೂರಿನಲ್ಲಿ ಈ ಸಂಬಂಧ ಸಭೆ ನಡೆಯಲಿದೆ. ಹೆದ್ದಾರಿ ನಿರ್ಮಾಣ ನಂತರ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಲವು ಪ್ರದೇಶಗಳು ಅಭಿವೃದ್ಧಿಗೊಳ್ಳಲಿವೆ

ಕನ್ನಡಪ್ರಭ ವಾರ್ತೆ ಕುಶಾಲನಗರಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ಹಾಗೂ ಆರು ಪಥಗಳ ರಸ್ತೆ ಅಗಲೀಕರಣ ಅಭಿವೃದ್ಧಿ ಕಾಮಗಾರಿ 2024ರ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಅವರು ಕುಶಾಲನಗರ ಸಮೀಪದ ಹೇರೂರು ಹಾದ್ರೆ ಗ್ರಾಮದಲ್ಲಿ ಬಿಎಸ್ಎನ್ಎಲ್ 4ಜಿ ಗೋಪುರಕ್ಕೆ ಗುದ್ದಲಿ ಪೂಜೆ ನೆರವೇರಿಸಿ ನಂತರ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೈಸೂರಿನಿಂದ ಕುಶಾಲನಗರ ತನಕ ನಡೆಯಲಿರುವ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಈಗಾಗಲೇ ಕೆಲವು ಕೇಂದ್ರಗಳಲ್ಲಿ ಕಾಮಗಾರಿಗೆ ಅವಶ್ಯಕತೆ ಇರುವ ಯಂತ್ರೋಪಕರಣಗಳು ಬೀಡು ಬಿಟ್ಟಿದ್ದು, ಪ್ರಾಥಮಿಕ ಕಾಮಗಾರಿಗಳು ನಡೆಯುತ್ತಿವೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಬಾಕಿ ಇದ್ದು, ಸದ್ಯದಲ್ಲಿಯೇ ಹುಣಸೂರಿನಲ್ಲಿ ಈ ಸಂಬಂಧ ಸಭೆ ನಡೆಯಲಿದೆ. ಹೆದ್ದಾರಿ ನಿರ್ಮಾಣ ನಂತರ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಲವು ಪ್ರದೇಶಗಳು ಅಭಿವೃದ್ಧಿಗೊಳ್ಳಲಿವೆ ಎಂದರು.

ಸಂಪರ್ಕ ವ್ಯವಸ್ಥೆ ಮೂಲಕ ಹೆಚ್ಚಿನ ಕೈಗಾರಿಕೋದ್ಯಮಗಳು ಸ್ಥಾಪನೆಗೊಳ್ಳಲು ಹೇರಳವಾಗಿ ಅವಕಾಶ ಲಭ್ಯವಾಗಲಿದೆ ಎಂದ ಅವರು, ಇದರೊಂದಿಗೆ ಕೊಡಗು ಜಿಲ್ಲೆಯಲ್ಲಿ ದೂರಸಂಪರ್ಕ ವ್ಯವಸ್ಥೆ ಇನ್ನಷ್ಟು ಮೇಲ್ದರ್ಜೆಗೇರಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 63 ನೂತನ ಬಿಎಸ್ಎನ್ಎಲ್ ಮೊಬೈಲ್ ಟವರ್‌ಗಳು ನಿರ್ಮಾಣಗೊಳ್ಳಲಿವೆ ಎಂದು ಮಾಹಿತಿ ನೀಡಿದರು.1954 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳಲಿರುವ ಮೈಸೂರು- ಕುಶಾಲನಗರ ರೈಲ್ವೆ ಯೋಜನೆ ಚಾಲನೆಯಲ್ಲಿದ್ದು, ರಾಜ್ಯ ಸರ್ಕಾರದ ಅಸಹಕಾರ ಧೋರಣೆ ವಿಳಂಬಕ್ಕೆ ಕಾರಣವಾಗಿದೆ ಎಂದರು.

ರಾಜ್ಯ ಸರ್ಕಾರದ ಬಹುತೇಕ ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನಗೊಳ್ಳುವಲ್ಲಿ ವಿಫಲಗೊಳ್ಳುತ್ತಿದ್ದು, ಸಾವಿರಾರು ಕೋಟಿ ರು.ಗಳ ಯೋಜನೆಗಳು ನೆರೆಯ ತೆಲಂಗಾಣ ರಾಜ್ಯಕ್ಕೆ ವರ್ಗಾವಣೆ ಆಗಿರೋ ಬಗ್ಗೆ ಮಾಹಿತಿ ಒದಗಿಸಿದರು.

ದೇಶದ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಬೇಕಿದೆ ಎಂದ ಪ್ರತಾಪ್‌, ರಾಜ್ಯದಲ್ಲಿ ಈ ಬಾರಿ ಮಾಡಿದ ತಪ್ಪನ್ನು ಮತ್ತೆ ಮಾಡಬಾರದು ಎಂದು ಕೋರಿದರು.

63 ಬಿಎಸ್‌ಎನ್‌ಎಲ್‌ 4ಜಿ ಗೋಪುರ ನಿರ್ಮಾಣ: ಕೊಡಗು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ 63 ಬಿಎಸ್ಎನ್ಎಲ್ 4ಜಿ ನೂತನ ಗೋಪುರಗಳು ನಿರ್ಮಾಣಗೊಳ್ಳಲಿವೆ ಎಂದು ಭಾರತ ಸಂಚಾರ ನಿಗಮ ಲಿಮಿಟೆಡ್ ಕೊಡಗು ಜಿಲ್ಲೆಯ ಟೆಲಿಕಾಂ ಡಿಸ್ಟ್ರಿಕ್ಟ್ ಮ್ಯಾನೇಜರ್ ಪ್ರದೀಪ್ ತಿಳಿಸಿದ್ದಾರೆ.ಕುಶಾಲನಗರ ಸಮೀಪದ ಹಾದ್ರೆ, ಶಿರಂಗಳ್ಳಿ, ಸಂಪಿಗೆದಾಳು, ಕಾರೆಕೊಪ್ಪ ಮತ್ತು ಯಡವನಾಡು ಗ್ರಾಮಗಳು ಸೇರಿದಂತೆ ಒಟ್ಟು 63 ನೂತನ ಟವರ್‌ಗಳು ನಿರ್ಮಾಣಗಳಲ್ಲಿವೆ. 2024ರ ಮಾರ್ಚ್ ಅಂತ್ಯದೊಳಗೆ ಬಹುತೇಕ ಟವರ್‌ಗಳು ಲೋಕಾರ್ಪಣೆಗೊಳ್ಳಲಿವೆ ಎಂದು ತಿಳಿಸಿದರು.ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚುರಂಜನ್, ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಬಿನ್ ದೇವಯ್ಯ, ಬಿ.ಬಿ. ಭಾರತೀಶ್, ಮನು ಕುಮಾರ್ ರೈ, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗನ್ನಾಥ್, ಉಪಾಧ್ಯಕ್ಷ ಬಿಇ ಸತೀಶ್, ಅರುಣ ಕುಮಾರಿ, ತೆಕ್ಕಡೆ ಸಂಜು, ಚರಣ್, ಅಂಬೆಕಲ್ ಚಂದ್ರು, ಬಿಎಸ್ಎನ್ಎಲ್ ಅಧಿಕಾರಿಗಳಾದ ವಾಸುದೇವನ್, ಪಂಚಾಕ್ಷರಿ, ಲೀಲಾ ದಯಾನಂದ ಬಿಜು ಮತ್ತಿತರರು ಇದ್ದರು.

Share this article