ಕನ್ನಡಪ್ರಭ ವಾರ್ತೆ ನಾಲತವಾಡ
ಕ್ರೀಡಾಕೂಟವು ಕೇವಲ ಗೆಲುವು- ಸೋಲಿನ ಹಬ್ಬವಲ್ಲ. ಅದು ಶಿಸ್ತು, ಸಹಕಾರ, ಸಹನೆ, ಆರೋಗ್ಯ ಮತ್ತು ಸಮಯಪಾಲನೆ ಎಂಬ ಮೌಲ್ಯ ಕಲಿಸುವ ವೇದಿಕೆ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.ಸಮೀಪದ ಬಿಜ್ಜೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕುಮಟ್ಟದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಆರೋಗ್ಯವೇ ಮಹಾಭಾಗ್ಯ ಎಂಬ ನುಡಿಗಟ್ಟಿಗೆ ತಕ್ಕಂತೆ ಕ್ರೀಡೆಗಳು ಜೀವನದಲ್ಲಿ ಸಂತೋಷ, ಚೈತನ್ಯ ಹಾಗೂ ಉತ್ಸಾಹ ತುಂಬುತ್ತವೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಗೂ ಸಮಾನ ಪ್ರಾಮುಖ್ಯತೆ ನೀಡಬೇಕು. ಬಿಜ್ಜೂರ ಶಾಲೆ ತಾಲೂಕಿನಲ್ಲಿ ಅತ್ಯಂತ ಸುಂದರ ಶಾಲೆಯಾಗಿ ಹೊರಹೊಮ್ಮಿದೆ. ಮುಳಗಡೆ ಭಾಗದ ಬಡ ಮಕ್ಕಳಿಗೆ ಸಹಾಯವಾಗಲು ಬಿಜ್ಜೂರ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರಾಗಬೇಕು. ನಾನು ಕೂಡ ಶಾಸಕರಿಗೆ ಮನವಿ ಮಾಡುವೆ ಎಂದರು.
ಗ್ರಾಮ ಲೆಕ್ಕಾಧಿಕಾರಿ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಜೂಲಗುಡ್ಡ ಮಾತನಾಡಿ, ಮಕ್ಕಳು ಮೊಬೈಲ್ ಗೇಮ್ಗಳಿಗೆ ಹೆಚ್ಚು ಒಲವು ತೋರುತ್ತಿದ್ದಾರೆ, ಆದರೆ ಅದು ನಿಜವಾದ ಕ್ರೀಡೆ ಅಲ್ಲ. ನಿಜವಾದ ಕ್ರೀಡೆ ಎಂದರೆ ದೇಹವನ್ನು ಮೈದಾನದಲ್ಲಿ ಚಲನೆಗೊಳಿಸಿ, ಬೆವರೊರೆಸಿಕೊಂಡು ಮೈಮರೆಯುವ ಆಟ. ಕ್ರೀಡೆ ಮಕ್ಕಳು ದೈಹಿಕವಾಗಿ ಬಲಿಷ್ಠರಾಗಲು, ಮಾನಸಿಕವಾಗಿ ಸದೃಢರಾಗಲು ಮತ್ತು ಶಿಸ್ತಿನಿಂದ ಬದುಕಲು ಮಾರ್ಗದರ್ಶಕವಾಗುತ್ತದೆ. ಆದ್ದರಿಂದ ಪಾಲಕರು ಮಕ್ಕಳಿಗೆ ಮೊಬೈಲ್ ಗೇಮ್ಗಳ ಬದಲು ಮೈದಾನದಲ್ಲಿ ಆಡುವ ಆಟಗಳಿಗೆ ಉತ್ತೇಜನ ನೀಡಬೇಕು. ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಬೆಳೆಸುವಂತೆ ಪ್ರೋತ್ಸಾಹಿಸಬೇಕು. ಮಕ್ಕಳ ಭವಿಷ್ಯ ಉತ್ತಮವಾಗಬೇಕೆಂದರೆ ಕ್ರೀಡೆಗೆ ತಕ್ಕ ಮಟ್ಟಿನ ಮಹತ್ವ ನೀಡುವುದು ಅವಶ್ಯ ಎಂದರು.ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವೈ.ಕವಡಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಡಾ.ಎಂ.ಎಂ.ಬೆಳಗಲ್ ಮಾತನಾಡಿದರು. ಎಸ್.ಪಿ.ಔದಕ್ಕನವರ ಪ್ರಾರ್ಥನೆ ಸಲ್ಲಿಸಿದರು. ಪಪಂ ಸದಸ್ಯ ಪೃಥ್ವಿರಾಜ ನಾಡಗೌಡ ಕ್ರೀಡಾ ದ್ವಜಾರೋಹಣ ಮಾಡಿದರು. ತನುಜಾ ಹಾಗೂ ತಂಡ ಸ್ವಾಗತ ಗೀತೆ ಹಾಡಿದರು.
ಈ ವೇಳೆ ಬಿಜ್ಜೂರ ಗ್ರಾಪಂ ಅಧ್ಯಕ್ಷೆ ಶರಣಮ್ಮ ಹೊಸಮನಿ, ಉಪಾಧ್ಯಕ್ಷ ಗುರುನಾಥ ಬಡಿಗೇರ, ಎಸ್ಡಿಎಂಸಿ ಅಧ್ಯಕ್ಷ ಎಂ.ಎಸ್. ಬಿರಾದಾರ, ಉಪಾಧ್ಯಕ್ಷೆ ಶಾಂತಮ್ಮ ಪಾಟೀಲ, ಪಿಡಿಒ ಕೆ.ಎಚ್.ಕುಂಬಾರ, ಎಸ್ಸಿ-ಎಸ್ಟಿ ದೌರ್ಜನ್ಯ ನಿರ್ಮೂಲನಾ ಸಮಿತಿ ಸದಸ್ಯ ಮಲ್ಲು ತಳವಾರ, ಮುಖಂಡರು ಮಹಾಂತೇಶ ಗಂಗನಗೌಡರ, ಚಂದ್ರಶೇಖರ ಗಂಗನಗೌಡರ, ಕಾಂತು ಹಿರೇಮಠ, ಪಪಂ ಸದಸ್ಯ ರಮೇಶ ಆಲಕೊಪ್ಪರ, ತಾಪಂ ಸಹಾಯಕ ಲೆಕ್ಕಾಧಿಕಾರಿ ವೀರೇಶ ಹೂಗಾರ, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ಮುದ್ನೂರ, ಮುಖ್ಯಗುರು ಪಿ.ಎ.ಭೋವೇರ, ಬಿ.ಎಚ್.ಬಳಬಟ್ಟಿ, ಎಂ.ಎಸ್.ಇನಾಂದಾರ, ಎ.ಎಚ್.ಖಾಜಿ, ಪ್ರಥಮ ದರ್ಜೆ ಸಹಾಯಕ ವೀರೇಶ ಮಳವಳ್ಳಿ, ಗ್ರಾಪಂ ಕಲೆಕ್ಟರ್ ಶಿವಪ್ಪ ಚಲವಾದಿ, ಗುತ್ತಿಗೆದಾರ ಲಕ್ಕಪ್ಪ ಹೊಸಗೌಡ್ರ, ಮಹಾಂತೇಶ ಚಿತ್ರನಾಳ, ಶಿಕ್ಷಕಿ ಎಂ.ಬಿ. ಗಣಾಚಾರಿ ಹಾಗೂ ಇತರರಿದ್ದರು.