
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯ ವಿವಿಧೆಡೆಗಳಿಂದ ಕೊಡವ ಭಾಷೆ ಮಾತನಾಡುವ, ಕೊಡವ ಸಂಸ್ಕೃತಿ ಪಾಲಿಸುವ ವಿವಿಧ 21 ಜನಾಂಗದವರು ಒಗ್ಗೂಡಿ ಕ್ರೀಡೋತ್ಸವಕ್ಕೆ ಮೆರುಗು ತಂದರು. 21 ಭಾಷಿಕ ಜನಾಂಗವನ್ನು ಪ್ರತಿನಿಧಿಸುವ ಅಧ್ಯಕ್ಷರು, ಪ್ರಮುಖರು ಕ್ರೀಡೋತ್ಸವದ ಟ್ರೋಫಿಗಳನ್ನು ಹಿಡಿದು ಮೈದಾನ ಪ್ರವೇಶ ದ್ವಾರದಿಂದ, ಮೈದಾನದ ಸುತ್ತಲೂ ಮೆರವಣಿಗೆ ನಡೆಸಿ ಒಗ್ಗಟ್ಟಿನ ಪ್ರದರ್ಶನ ಮಾಡಿದರು.
21 ಭಾಷಿಕ ಜನಾಂಗದ ನಡುವೆ ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಪಂದ್ಯಾಟವನ್ನು ನಡೆಸಲಾಗುತ್ತಿದ್ದು, ಮೊದಲ ದಿನದ ಕ್ರೀಡೋತ್ಸವ ವಿಧ್ಯುಕ್ತವಾಗಿ ಆರಂಭಗೊಂಡಿತು. ಪಂದ್ಯಾಟಕ್ಕೂ ಮುನ್ನ 21 ಭಾಷಿಕ ಜನಾಂಗದ ಪ್ರಮುಖರು ಪಂದ್ಯಾವಳಿ ಯಶಸ್ವಿಯಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡವ ಭಾಷಿಕ ಸಮುದಾಯ ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ, ಕೊಡಗಿನ ಸಂಸ್ಕೃತಿ, ಪರಂಪರೆಯನ್ನು ಕೊಡವ ಭಾಷಿಕ ಜನಾಂಗದವರು ಉಳಿಸಿ, ಬೆಳೆಸುತ್ತಿದ್ದು, ಎಲ್ಲರೂ ಒಗ್ಗೂಡಿ ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಪರಸ್ಪರ ಸಮನ್ವಯತೆಯೊಂದಿಗೆ ಬಾಂಧವ್ಯದೊಂದಿಗೆ ಮುಂದುವರೆದು ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು. ಒಗ್ಗಟ್ಟು ಮೂಡಿಸಲು ಕ್ರೀಡೆ ಸಹಕಾರಿಯಾಗಿದೆ. ಸಮುದಾಯದ ಅಭಿವೃದ್ಧಿ ಸರ್ಕಾರ ಚಿಂತನೆ ನಡೆಸಬೇಕು. ಕ್ರೀಡಾಕೂಟಕ್ಕೂ ಅನುದಾನ ನೀಡುವಂತಾಗಬೇಕೆಂದರು.
ಹೆಗ್ಗಡೆ ಸಮಾಜ ಉಪಾಧ್ಯಕ್ಷ ಚರ್ಮಂಡ ಅಪ್ಪುಣು ಪೂವಯ್ಯ, ಅಮ್ಮ ಕೊಡವ ಸಮಾಜದ ಉಮಾಪ್ರಭು, ಕೋಲೆಯ ಸಮಾಜ ಅಧ್ಯಕ್ಷ ಕೋಲೆಯಂಡ ಗಿರೀಶ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ನಿರ್ದೇಶಕ ಪೊನ್ನೀರ ಗಗನ್, ಕುಡಿಯ ಸಮಾಜದ ಅಧ್ಯಕ್ಷ ಕುಡಿಯರ ಬೋಪಯ್ಯ, ಕೋಯವ ಸಮಾಜದ ಅಧ್ಯಕ್ಷ ಜಿಲ್ಲಂಡ ದಾದು ಮಾದಪ್ಪ, ಕೆಂಬಟ್ಟಿ ಸಮಾಜದ ಅಧ್ಯಕ್ಷ ಬಿಲ್ಲೇರಿಕುಟ್ಟಡ ಪ್ರಭು ಅಯ್ಯಪ್ಪ, ಅಹಿಂದ ಒಕ್ಕೂಟದ ಸಂಚಾಲಕ ತೋರೆರ ಮುದ್ದಯ್ಯ, ಹಿರಿಯ ವೈದ್ಯರಾದ ಡಾ. ಮೋಹನ್ ಅಪ್ಪಾಜಿ ಸೇರಿದಂತೆ ವಿವಿಧ ಸಮಾಜಗಳ ಅಧ್ಯಕ್ಷರು, ಪ್ರಮುಖರು, ಕೂಟದ ಪದಾಧಿಕಾರಿಗಳು ಹಾಜರಿದ್ದರು.
ಪ್ರದರ್ಶನ ಪಂದ್ಯ: ಪಂದ್ಯಾಟದ ಅಂಗವಾಗಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡವ ಭಾಷಿಕ ಸಮುದಾಯಗಳ ಕೂಟದ ನಡುವೆ ಕ್ರಿಕೆಟ್ ಪ್ರದರ್ಶನ ನಡೆಯಿತು.