ಎಸ್‌ಆರ್‌ಬಿ, ಆರ್‌ಸಿಬಿ ಮುಗಿತು ಇದೀಗ ಕೆವಿಬಿ

KannadaprabhaNewsNetwork | Published : Dec 18, 2024 12:47 AM

"ಕ್ರಾಂತಿವೀರ ಬ್ರಿಗೇಡ್‌ " (ಕೆವಿಬಿ) ಹುಟ್ಟು ಹಾಕಲಾಗಿದೆ. ಆದರೆ, ಇದು ತಾವು ಹುಟ್ಟುಹಾಕಿರುವ ಸಂಘಟನೆಯಲ್ಲ. ವಿವಿಧ ಸಣ್ಣ ಪುಟ್ಟ ಮಠಾಧೀಶರೆಲ್ಲರೂ ಸೇರಿಕೊಂಡು ಅಸ್ತಿತ್ವಕ್ಕೆ ತಂದಿರುವ ಸಂಘಟನೆ. ನಾನು ಇದರಲ್ಲಿ ಬರೀ ಮಾರ್ಗದರ್ಶಕ, ಸಲಹೆಗಾರ ಎಂದು ಈಶ್ವರಪ್ಪ ಹೇಳುತ್ತಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಮೊದಲಿಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ (ಎಸ್‌ಆರ್‌ಬಿ), ನಂತರ ರಾಯಣ್ಣ ಚೆನ್ನಮ್ಮ ಬ್ರಿಗೇಡ್‌(ಆರ್‌ಸಿಬಿ) ಇದೀಗ ಕ್ರಾಂತಿವೀರ ಬ್ರಿಗೇಡ್‌ (ಕೆವಿಬಿ)..!

ಇವು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಹುಟ್ಟುಹಾಕಿರುವ ಸಂಘಟನೆಯ ಹೆಸರು. ಬಿಜೆಪಿಯಲ್ಲಿದ್ದಾಗಲೇ ಅಂದರೆ ಸರಿಸುಮಾರು 10 ವರ್ಷದ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಎಂಬ ಸಂಘಟನೆ ಹುಟ್ಟುಹಾಕಿದ್ದರು. ಈ ಮೂಲಕ ಕುರುಬ ಸೇರಿದಂತೆ ವಿವಿಧ ಸಮುದಾಯಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದ್ದರು. ಕೆಲ ದಿನಗಳ ಬೇರೆ ಬೇರೆ ಕಡೆಗಳಲ್ಲಿ ಸಮಾವೇಶಗಳನ್ನು ಮಾಡಿದ್ದರು. ಆದರೆ ಆ ಬಳಿಕ ಬಿಜೆಪಿಯಲ್ಲಿದ್ದುಕೊಂಡು ಈ ರೀತಿ ಬೇರೆ ಸಂಘಟನೆ ಹುಟ್ಟುಹಾಕುವುದು ಸರಿಯಲ್ಲ. ಬೇರೆ ಸಂದೇಶ ರವಾನಿಸುತ್ತದೆ. ಈ ಸಂಘಟನೆಯನ್ನು ಕೈಬಿಡುವಂತೆ ರಾಜ್ಯದಿಂದ ದೂರು ಹೋಗಿತ್ತು. ಆಗ ಬಿಜೆಪಿ ಹೈಕಮಾಂಡ್‌ ಸಂಘಟನೆಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿತ್ತು. ಅದರಂತೆ ಆಗ ಆ ಸಂಘಟನೆ ಅಲ್ಲಿಗೆ ನಿಂತು ಹೋಗಿತ್ತು.

ಅದಾದ ಬಳಿಕ ಇತ್ತೀಚಿಗೆ ಅಂದರೆ ಲೋಕಸಭೆ ಚುನಾವಣೆಯಲ್ಲಿ ಮಗ ಕಾಂತೇಶನಿಗೆ ಟಿಕೆಟ್‌ ಸಿಗದ ಕಾರಣ ಬಿಜೆಪಿಯಿಂದ ಹೊರಬಂದ ಬಳಿಕ ಮತ್ತೊಂದು ಬ್ರಿಗೇಡ್‌ ಹುಟ್ಟುಹಾಕುವೆ. ಈ ಮೂಲಕ ನನ್ನ ಶಕ್ತಿ ಏನೆಂದು ತೋರಿಸುವೆ ಎಂದುಕೊಂಡು ರಾಜ್ಯಾದ್ಯಂತ ಪ್ರವಾಸ ನಡೆಸಿ ತಮ್ಮ ಅಭಿಮಾನಿಗಳನ್ನು ಒಟ್ಟಾಗಿಸಿದ್ದರು. ರಾಯಣ್ಣ-ಚೆನ್ನಮ್ಮ ಬ್ರಿಗೇಡ್‌ (ಆರ್‌ಸಿಬಿ) ಎಂಬ ಸಂಘಟನೆಯನ್ನು ಹುಟ್ಟುಹಾಕುವುದಾಗಿ ಘೋಷಣೆ ಕೂಡ ಮಾಡಿದ್ದರು. ಅದರ ಪದಾಧಿಕಾರಿಗಳ ನೇಮಕ, ಸಂಘಟನೆಯನ್ನೂ ನಡೆಸಿದ್ದರು. ಇದು ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು. ಇನ್ನೇನು ಉದ್ಘಾಟನೆ ಆಗುತ್ತದೆ ಎನ್ನುವಷ್ಟರಲ್ಲೇ ಅದು ಕೂಡ ಶಾಂತವಾಗಿತ್ತು. ಅದಾದ ಬಳಿಕ ಇದೀಗ ಏಕಾಏಕಿ ಕಳೆದ ಎರಡು ದಿನಗಳಿಂದ ಹುಬ್ಬಳ್ಳಿಯಲ್ಲಿ ವಿವಿಧ ಮಠಾಧೀಶರ ಸಭೆ ನಡೆಸಿದ ಈಶ್ವರಪ್ಪ,

"ಕ್ರಾಂತಿವೀರ ಬ್ರಿಗೇಡ್‌ " (ಕೆವಿಬಿ) ಎಂಬ ಸಂಘಟನೆಯನ್ನು ಹುಟ್ಟು ಹಾಕಿದ್ದಾರೆ. ಆದರೆ, ಇದು ತಾವು ಹುಟ್ಟುಹಾಕಿರುವ ಸಂಘಟನೆಯಲ್ಲ. ವಿವಿಧ ಸಣ್ಣ ಪುಟ್ಟ ಮಠಾಧೀಶರೆಲ್ಲರೂ ಸೇರಿಕೊಂಡು ಅಸ್ತಿತ್ವಕ್ಕೆ ತಂದಿರುವ ಸಂಘಟನೆ. ನಾನು ಇದರಲ್ಲಿ ಬರೀ ಮಾರ್ಗದರ್ಶಕ, ಸಲಹೆಗಾರ ಎಂದು ಈಶ್ವರಪ್ಪ ಹೇಳುತ್ತಾರೆ. ಆದರೆ ಎಲ್ಲೆಡೆ ಪ್ರವಾಸ ನಡೆಸಿ ಸಂಘಟನೆ ಮಾಡುತ್ತಿರುವುದು ಮಾತ್ರ ಇವರೇ. ಮಠಾಧೀಶರ ಸಂಘಟನೆಯಾದರೆ ಪ್ರವಾಸ ಮಾಡಿ ಸಂಘಟನೆ ಮಾಡುವ ಅವಶ್ಯಕತೆಯಿದೆಯಾ? ಇವರದೇ ನೇತೃತ್ವವಾಗಿದ್ದರಿಂದಲೇ ಪ್ರವಾಸ ಮಾಡಿ ಸಂಘಟನೆ ಮಾಡುತ್ತಿದ್ದಾರೆ ಎಂಬುದು ಅವರ ಅಭಿಮಾನಿಗಳ ಅಂಬೋಣ. ಮಠಾಧೀಶರನ್ನು ಮುಂದಿಟ್ಟುಕೊಂಡು ಹುಟ್ಟುಹಾಕಿರುವ ಸಂಘಟನೆ ಇದು ಎಂದು ಹೇಳಲಾಗುತ್ತಿದೆ.

ಫೆ. 4ರಂದು ಬಸವನಬಾಗೇವಾಡಿಯಲ್ಲಿ ಇದರ ಉದ್ಘಾಟನೆ ನಡೆಯಲಿದೆ. ಅಂದು 1008 ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಅವರೆಲ್ಲರ ಪಾದಪೂಜೆ ಮಾಡುವ ಮೂಲಕ ಸಂಘಟನೆಗೆ ಚಾಲನೆ ನೀಡಲಾಗುವುದು. ಇದು ಹಿಂದೂಗಳ ರಕ್ಷಣೆ, ಮಠ ಮಾನ್ಯಗಳ ಹಿತಕ್ಕಾಗಿ ಹುಟ್ಟುಹಾಕಿರುವ ಸಂಘಟನೆಯಿದು. ವಕ್ಫ್‌ ಸೇರಿದಂತೆ ಮತ್ತಿತರರ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಿದೆ ಎಂದು ತಿಳಿಸುತ್ತಾರೆ ಸಂಘಟನೆಯ ರಾಜ್ಯಾಧ್ಯಕ್ಷ ಸೋಮೇಶ್ವರ ಶ್ರೀ.

ಒಟ್ಟಿನಲ್ಲಿ ತಮ್ಮದೇನು ಪಾತ್ರವಿಲ್ಲ ಎನ್ನುತ್ತಲೇ ಸಭೆಗಳನ್ನು ತಾವೇ ನೇತೃತ್ವ ವಹಿಸಿಕೊಂಡು ನಡೆಸುವ ಮೂಲಕ ಕೆವಿಬಿ ಕೂಡ ತಮ್ಮದೇ ಬ್ರಿಗೇಡ್‌ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ ಈಶ್ವರಪ್ಪ. ಜತೆಗೆ ತಮ್ಮ ವಿರೋಧಿಗಳಿಗೆ ತಮ್ಮ ಶಕ್ತಿ ತೋರಿಸುವ ತಯಾರಿ ನಡೆಸಿದ್ದಾರೆಂಬುದು ಅಷ್ಟೇ ಸತ್ಯ. ಹಿಂದೆ ರಾಯಣ್ಣ- ಚೆನ್ನಮ್ಮ ಬ್ರಿಗೇಡ್‌ ಹಾಕುವಾಗಲೂ ಹಲವು ಮಠಾಧೀಶರು ಇವರ ಹಿಂದೆ ಇದ್ದರು. ಈಗಲೂ ಕ್ರಾಂತಿವೀರ ಬ್ರಿಗೇಡ್‌ನಲ್ಲೂ ಹಲವು ಮಠಾಧೀಶರು ಈಶ್ವರಪ್ಪ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ಈ ಕ್ರಾಂತಿವೀರ ಬ್ರಿಗೇಡ್‌ ಎಷ್ಟರಮಟ್ಟಿಗೆ ರಾಜ್ಯದಲ್ಲಿ ಕ್ರಾಂತಿ ಮಾಡುತ್ತದೆ ಎಂಬ ಕುತೂಹಲ ರಾಜ್ಯದ ಜನತೆಯಲ್ಲಿ ಮನೆ ಮಾಡಿದೆ.

ಒಟ್ಟಿನಲ್ಲಿ ಕ್ರಾಂತಿವೀರ ಬ್ರಿಗೇಡ್‌ ಬಗ್ಗೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವನ್ನುಂಟು ಮಾಡಿರುವುದಂತೂ ಸತ್ಯ.ಹಿಂದೆ ಹೈಕಮಾಂಡ್‌ ಬೇಡ ಎಂದು ಸೂಚಿಸಿದ್ದರಿಂದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಕೈಬಿಟ್ಟಿದ್ದೆ. ಇದೀಗ ಕ್ರಾಂತಿವೀರ ಬ್ರಿಗೇಡ್‌ನ್ನು ಮಠಾಧೀಶರೇ ಸೇರಿಕೊಂಡು ಹುಟ್ಟುಹಾಕಿದ್ದಾರೆ. ಹೀಗಾಗಿ ನಿಲ್ಲುವುದಿಲ್ಲ. ನಿರಂತರವಾಗಿ ಮುಂದುವರಿಯುತ್ತದೆ. ಇದರಲ್ಲಿ ನಾನು ಜೊತೆಯಾಗಿರುತ್ತೇನೆ ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಹೇಳಿದರು.