ಕಾರ್ಕಳ: ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಕೆಮ್ಮಣ್ಣು–ನಿಟ್ಟೆ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಿಟ್ಟೆಯ ಕೆಮ್ಮಣ್ಣು ಕಮಲಗುಡ್ಡ ಶೆಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕಳೆದು ಹೋದ ದಿನಗಳು ಮತ್ತೆ ಜೀವಂತವಾಗುವ, ಬಾಡಿದ ಸ್ನೇಹ ಮತ್ತೆ ಚಿಗುರುವ ಹಾಗೂ ಹಳೆಯ ದಿನಗಳನ್ನು ನೆನೆದು ಮತ್ತೆ ಕ್ರಿಯಾಶೀಲರಾಗುವ ಎಂಬ ಅರ್ಥಪೂರ್ಣ ಶೀರ್ಷಿಕೆಯಡಿ ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಿ, ಅಧಿಕಾರ ಹಸ್ತಾಂತರ ಕಾರ್ಯಕ್ರಮ ನೆರವೇರಿಸಲಾಯಿತು.ಕಳೆದ ಸಾಲಿನ ಅಧ್ಯಕ್ಷ ಡಾ. ಪ್ರಶಾಂತ್ ಕುಮಾರ್ ಕೆ. ಅವರು ಸ್ವಾಗತಿಸಿ, ತಮ್ಮ ಅಧ್ಯಕ್ಷೀಯ ಅವಧಿಯ ಅನುಭವಗಳನ್ನು ಹಂಚಿಕೊಂಡರು. ಸಂಘದ ಬೆಳವಣಿಗೆಗೆ ಸದಸ್ಯರ ಏಕತೆ ಮತ್ತು ಸಹಕಾರವೇ ಪ್ರಮುಖ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳೀಯ ಪಂಚಾಯಿತಿ ಪ್ರತಿನಿಧಿ ಸಂತೋಷ್ ಶೆಟ್ಟಿ (ಪೊರ್ಕಳಗುತ್ತು) ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು, ಸಂಘದ ಅಭಿವೃದ್ಧಿಗಾಗಿ ಹಲವು ಹೊಸ ಯೋಜನೆಗಳನ್ನು ರೂಪಿಸಿರುವುದಾಗಿ ತಿಳಿಸಿದರು. ಎಲ್ಲ ಸದಸ್ಯರ ಸಹಕಾರದೊಂದಿಗೆ ಈ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಸಂಘದ ಸ್ಥಾಪಕಾಧ್ಯಕ್ಷ ಡಾ. ದಿಲೀಪ್ ಕುಮಾರ್, ಪೂರ್ವಾಧ್ಯಕ್ಷ ಡಾ. ರಘುನಂದನ್ ಕೆ.ಆರ್., ಶ್ರೀ ಸುರೇಶ್ ಆಚಾರ್ಯ, ಡಾ. ಪ್ರಶಾಂತ್ ಕುಮಾರ್ ಹಾಗೂ ಹಿಂದಿನ ಸಾಲಿನ ಕಾರ್ಯದರ್ಶಿಗಳಾದ ಶ್ರೀ ಸುಧಾಕರ್ ಮಡಿವಾಳ ಮತ್ತು ಶ್ರೀ ಕೃಷ್ಣಾನಂದ ರಾವ್ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ಹಿರಿಯ ಸದಸ್ಯ ಸತೀಶ್ ಶೆಟ್ಟಿ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಪ್ರಕಾಶ್ ಸಾಲ್ಯಾನ್, ಕ್ರೀಡಾ ಕಾರ್ಯದರ್ಶಿ ಸಾಹಿಲ್ ಎಸ್. ಪೂಜಾರಿ, ಕೋಶಾಧಿಕಾರಿ ವಿಠಲ್ ಆಚಾರ್ಯ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.