ಕನ್ನಡಪ್ರಭ ವಾರ್ತೆ ಪುತ್ತೂರು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಕಷ್ಟದಲ್ಲಿರುವ ಇಬ್ಬರು ಸದಸ್ಯರ ಸಾಲವನ್ನು ಮನ್ನಾ ಮಾಡಲಾಗಿದೆ.ಸಂಘದ ಸದಸ್ಯೆ ಲಲಿತ ಅವರ ಪತಿ ಆನಂದ ಎಂಬವರು ಅನಾರೋಗ್ಯದಿಂದ ನಿಧನರಾಗಿದ್ದು, ಇದರಿಂದಾಗಿ ಕಷ್ಟದಲ್ಲಿರುವ ಅವರು ಸಂಘದ ಮೂಲಕ ಪಡೆದಿರುವ ಸಾಲವನ್ನು ಹಾಗೂ ಇನ್ನೊಂದು ಸ್ವಸಹಾಯ ಸಂಘದ ಸದಸ್ಯೆ ಕುಸುಮ ಅವರು ಪಡೆದಿರುವ ಸಾಲಕ್ಕೆ ನಾಮಿನಿಯಾಗಿದ್ದ ಯಶೋಧರ ಎಂಬವರು ನಿಧನರಾದ ಕಾರಣ ಅವರು ಸಂಘದ ಮೂಲಕ ಪಡೆದಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಯಿತು.ಲಲಿತ ಅವರು ಸಂಘದಿಂದ ೪ ಲಕ್ಷ ರು. ಸಾಲವನ್ನು ಪಡೆದಿದ್ದು, ಈ ಪೈಕಿ ೩ ಲಕ್ಷ ೮೨ ಸಾವಿರ ರು. ಸಾಲದ ಮೊತ್ತ ಬಾಕಿ ಉಳಿಕೆಯಾಗಿತ್ತು. ಈ ಎಲ್ಲ ಮೊತ್ತವನ್ನು ಮನ್ನಾ ಮಾಡಲಾಯಿತು. ಇದರ ಮಂಜೂರಾತಿ ಪತ್ರವನ್ನು ಕೆಮ್ಮಿಂಜೆ ಚಾಮುಂಡೇಶ್ವರಿ ದೇವಸ್ಥಾನದ ಅಧ್ಯಕ್ಷ ರಾಮ ಶೆಟ್ಟಿ ಹಾಗೂ ಸಮಿತಿಯ ಕಾರ್ಯದರ್ಶಿ ಶೇಖರ್ ಆಚಾರ್ಯ ಹಾಗೂ ಒಕ್ಕೂಟ ಅಧ್ಯಕ್ಷ ಚೇತನ್ ಸಮ್ಮುಖದಲ್ಲಿ ಲಲಿತ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟ ಪದಾಧಿಕಾರಿಗಳು ದಾಖಲಾತಿ ಸಮಿತಿ ಸದಸ್ಯರು ಒಕ್ಕೂಟದಲ್ಲಿ ೨೬ ಸಂಘದ ಸದಸ್ಯರು, ವಲಯ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು.ಅದೇ ರೀತಿ ಓಂ ಶ್ರೀ ಮಂಜುನಾಥ ಸಂಘದ ಸದಸ್ಯರಾದ ಕುಸುಮ ಒಂದೂವರೆ ಲಕ್ಷ ರು. ಸಾಲವನ್ನು ಪಡೆದಿದ್ದು, ಅವರಿಗೆ ನಾಮಿನಿಯಾದ ಯಶೋಧರ ಎಂಬವರು ಅನಾರೋಗ್ಯದಿಂದ ನಿಧನರಾದರು. ಅವರು ಮರಣ ಹೊಂದಿದ ಸಂದರ್ಭದಲ್ಲಿ ಕುಸುಮಾ ಅವರ ಸಾಲ ೭೯ ಸಾವಿರ ರು. ಬಾಕಿ ಇದ್ದು, ಈ ಎಲ್ಲ ಮೊತ್ತವನ್ನು ಮನ್ನ ಮಾಡಲಾಯಿತು. ಇದರ ಮಂಜುರಾತಿ ಪತ್ರವನ್ನು ಕುಸುಮರವರಿಗೆ ಹಸ್ತಾಂತರಿಸಲಾಯಿತು.