ಹಾವೇರಿ: ಸಂವಿಧಾನದ 48ನೇ ವಿಧಿಗೆ ಅಗತ್ಯ ತಿದ್ದುಪಡಿ ತಂದು ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಹಾಗೂ ರಾಜ್ಯದಲ್ಲಿರುವ ಗೋವುಗಳ ತಳಿಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಕಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶ್ರೀರಾಮ ಸೇನೆ ವತಿಯಿಂದ ತಹಸೀಲ್ದಾರ ಮೂಲಕ ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ ವಿನಾಯಕ ಇಚ್ಚಂಗಿ ಮಾತನಾಡಿ, ಗೋವುಗಳು ಕೇವಲ ಜಾನುವಾರಗಳಲ್ಲ, ಅವು ನಮ್ಮ ಸಂಸ್ಕೃತಿ, ಸಂಸ್ಕಾರಗಳ ಪ್ರತೀಕ. ಗ್ರಾಮೀಣ ಸಂಸ್ಕೃತಿ ಮತ್ತು ಸಹಜವಾದ ಒಲವುಗಳಿಗೆ ಗೋವುಗಳು ಕಾರಣವಾಗಿವೆ. ಕೇವಲ ನಮ್ಮ ಶ್ರದ್ಧಾ ಕೇಂದ್ರಗಳಾಗಿರದೇ ಗ್ರಾಮೀಣ ಸಹಜೀವನ, ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿವೆ. ರಾಜ್ಯಮಟ್ಟದ ತಳಿಗಳ ಸಂರಕ್ಷಣೆ ಮತ್ತು ಗೋಹತ್ಯೆ ತಡೆಗೆ ಕಾನೂನಾತ್ಮಕ ಕ್ರಮಕ್ಕೆ ಮುಂದಾಗಬೇಕು. ಗೋವುಗಳ ಕಳ್ಳಸಾಗಣೆ ಮತ್ತು ಹತ್ಯೆಯನ್ನು ಜಾಮೀನುರಹಿತ ಅಪರಾಧ ಎಂದು ಪರಿಗಣಿಸಿ, ಆಜೀವ ಕಾರಾಗೃಹ ಶಿಕ್ಷೆ ಹಾಗೂ ತಪ್ಪಿತಸ್ಥರ ಆಸ್ತಿ ಮುಟ್ಟುಗೋಲಿಗೆ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.ಆರ್ಥಿಕ ಸ್ವಾವಲಂಬನೆಯ ಅಡಿಯಲ್ಲಿ ಪಂಚಗವ್ಯ ಸಂಶೋಧನೆಯನ್ನು ಪ್ರೋತ್ಸಾಹಿಸಬೇಕು, ಶಾಲೆಗಳ ಮಧ್ಯಾಹ್ನದ ಊಟ ಮತ್ತು ದೇವಸ್ಥಾನಗಳ ಪ್ರಸಾದದಲ್ಲಿ ಗೋವುಗಳ ಹಾಲು ಮತ್ತು ಅದರ ಉಪಉತ್ಪನ್ನಗಳ ಬಳಕೆ ಕಡ್ಡಾಯಗೊಳಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೋವುಗಳ ಸಂರಕ್ಷಣೆಗೆ ನಂದಿಶಾಲೆ ಹಾಗೂ ಜಿಲ್ಲಾ ಮಟ್ಟದಲ್ಲಿ ಮಾದರಿ ಗೋ ಅಭಯಾರಣ್ಯ ಸ್ಥಾಪಿಸಿ ಅವುಗಳ ಸಂಕುಲದ ಉಳಿವಿಗೆ ಕ್ರಮಕ್ಕೆ ಮುಂದಾಗಬೇಕು. ಪ್ರತಿ 50-100 ಕಿಮೀ ಅಂತರದಲ್ಲಿ ಗೋ-ವಾಹಿನಿ ಅಂಬ್ಯುಲೆನ್ಸ್ ಮತ್ತು ಟ್ರಾಮಾ ಸೆಂಟರ್ ಆರಂಭದ ಮೂಲಕ ಗೋವುಗಳ ವಂಶ ಉಳಿವಿಗೆ ಅಗತ್ಯ ಕ್ರಮಕ್ಕೆ ಮುಂದಾಗಬೇಕೆಂದು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ಈ ವೇಳೆ ಸಂಘಟನೆಯ ಸೋಮು ರಾಠೋಡ, ಕಲ್ಮೇಶ ಹತ್ತಿಮತ್ತೂರ, ಮಹಾಂತೇಶ ಕೂರಗುಂದ, ಪರಮೇಶ ಕೂರಗುಂದ ಸೇರಿದಂತೆ ಇತರರು ಇದ್ದರು.