ಕನ್ನಡಪ್ರಭ ವಾರ್ತೆ ಹುಣಸಗಿ
ಪಟ್ಟಣದ ಹಲವು ವಾರ್ಡ್ ಗಳಲ್ಲಿ ಶ್ರೀರಾಮನ ಭವ್ಯ ಶೋಭಯಾತ್ರೆಗೆ ಸ್ವಾಗತಿಸಲು ಮನೆಯ ಅಂಗಳದಲ್ಲಿ ರಂಗೋಲಿ, ಪಟ್ಟಣದ ಪ್ರಮುಖ ಬೀದಿಯ ವಿದ್ಯುತ ಕಂಬಕ್ಕೆ ಕೇಸರಿ ದ್ವಜ ಹಾಗೂ ಮುಖಂಡರ ಶುಭಾಶಯ ಕೋರುವ ಪ್ಲೆಕ್ಸ್ ಹಾಕಿ ಸ್ವಾಗತ ಕೋರಿದರು. ಭವ್ಯ ಶೋಭಯಾತ್ರೆಯಲ್ಲಿ ಶ್ರೀರಾಮ, ಜೈ ಶ್ರೀರಾಮ ಘೋಷಣೆಗಳು ಮೊಳಗಿದವು. ಕೈಯಲ್ಲಿ ಕೇಸರಿ ಧ್ವಜ ಹಿಡಿದುಕೊಂಡು ಶ್ರೀರಾಮನನ್ನು ಸ್ಮರಿಸಿದರು.
ಮೆರವಣಿಗೆಯಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣ, ದಶರಥ ಹೀಗೇ ವಿವಿಧ ಮಹನೀಯರ ಛದ್ಮವೇಷ ಧರಿಸಿದ ಮಕ್ಕಳು ನೋಡುಗರ ಕಣ್ಮನ ಸೆಳೆಯಿತು. ನಂತರ ಹಳ್ಳದ ಹನುಮಾನ ದೇವಸ್ಥಾನಕ್ಕೆ ತಲುಪಿದ ಮೆರವಣಿಗೆಯು ಮಂದಿರದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಆಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ನೇರಪ್ರಸಾರವನ್ನು ಎಲ್ ಇಡಿ ಪರದೆಯಲ್ಲಿ ವೀಕ್ಷಿಸಲಾಯಿತು. ಶ್ರೀರಾಮನ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಪಟ್ಟಣದ(ಒಂದನೇ ವಾರ್ಡ್) ಜೋತಿ ಹೇಮರಡ್ಡಿ ಪೀರಾಪುರ ಅವರು ಗೆಳೆಯರ ಸಹಯೋಗದಲ್ಲಿ ರಂಗೋಲಿ ಮೂಲಕ ಶೀರಾಮನ ಚಿತ್ರಬಿಡಿಸಿ ಭಕ್ತಿ ಮೆರೆದರು. ತಾಲೂಕಿನ ಕುಪ್ಪಿ, ದ್ಯಾಮನಾಳ, ಹನುಮನಗರ, ಕಾಮನಟಗಿ ಸೇರಿ ವಿವಿಧ ಗ್ರಾಮಗಳಲ್ಲಿ ಜನರು ಶ್ರೀರಾಮನನ್ನು ಆರಾಧಿಸಿದರು. ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಶ್ರೀರಾಮನ ಮಂದಿರ ಲೋಕಾರ್ಪಣೆ ನಿಮಿತ್ತ ಸಿಹಿ ಮಾಡಿ ಊರ ಆಂಜನೇಯ, ಶ್ರೀರಾಮನಿಗೆ ಕಾಯಿ ಕರ್ಪೂರ ಅರ್ಪಿಸಿ ಭಕ್ತಿ ಸಲ್ಲಿಸಿದರು.