ಕನ್ನಡಪ್ರಭ ವಾರ್ತೆ ಅರಕಲಗೂಡು
ಕೊಣನೂರು ಹೋಬಳಿಯ ಚಿಕ್ಕಬೊಮ್ಮನಹಳ್ಳಿಯ ಶ್ರೀ ರಂಗನಾಥಸ್ವಾಮಿ ಮಹಾ ರಥೋತ್ಸವದ ಅಂಗವಾಗಿ ದೇಗುಲದ ಆವರಣದಲ್ಲಿ ವಿವಿಧ ಹೋಮಹವನ, ಅಭಿಷೇಕ, ಧಾರ್ಮಿಕ ವಿಧಿವಿದಾನಗಳು ಜರುಗಿದವು.
ದೇವಾಲಯದಲ್ಲಿ ಪೂಜೆಯನ್ನು ಪೂರ್ಣಗೊಳಿಸಿದ ನಂತರ ವಿವಿಧ ಬಗೆಯ ಪುಷ್ಪಗಳಿಂದ ಸರ್ವಾಲಂಕೃತಗೊಂಡ ಸ್ವಾಮಿಯ ಉತ್ಸವ ಮೂತಿಯನ್ನು ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಶ್ರೀ ಶಂಭುನಾಥ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ ಕದಲಿ ಕಡಿಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಸ್ವಾಮಿಯ ಹರ್ಷೋಧ್ಘಾರ ಮಾಡುತ್ತಾ ವಿವಿಧೆಡೆಗಳಿಂದ ಆಗಮಿಸಿದ ಭಕ್ತರು ರಥ ಎಳೆದು, ರಥವನ್ನು ದೇವಾಲಯದ ಬಳಿಯಿಂದ ಚಾಮುಂಡೇಶ್ವರಿ ದೇವಾಲಯದವರೆಗೆ ಎಳೆದು ನಂತರ ದೇಗುಲದ ಬಳಿಗೆ ತಂದು ನಿಲ್ಲಿಸಲಾಯಿತು. ರಥದ ಮುಂದೆ ಸಾಗಿದ ಪೂಜಾ ಕುಣಿತ, ವೀರಗಾಸೆ ಕುಣಿತಗಳು ಮನಸೆಳೆದವು.ಶ್ರೀ ರಂಗನಾಥಸ್ವಾಮಿ, ಆಂಜನೇಯ, ಲಕ್ಮೀ, ಗಣಪತಿ ವಿಗ್ರಹಗಳಿಗೆ ಮಾಡಿದ್ದ ವಿಶೇಷ ಹೂವಿನ ಅಲಂಕಾರ ಭಕ್ತರ ಮನಸೆಳೆಯಿತು. ನಂತರ ನೆರೆದಿದ್ದ ಭಕ್ತ ಸಮೂಹ ದೇವಾಲಯಕ್ಕೆ ತೆರಳಿ ಶ್ರೀ ರಂಗನಾಥ ಸ್ವಾಮಿಯ ದರ್ಶನ ಪಡೆದರು. ರಥೋತ್ಸವದ ವೇಳೆ ಹಾಸನದ ಬಿಜಿಎಸ್ ಮಹಿಳಾ ಭಜನಾ ಮಂಡಳಿಯ ಮಹಿಳೆಯರು ಮಾಡಿದ ಭಜನೆಯು ರಥೋತ್ಸವಕ್ಕೆ ಮೆರುಗು ತಂದಿತು.
ಕಬ್ಬಳಿಮಠದ ಶಿವಪುತ್ರನಾಥ ಸ್ವಾಮೀಜಿ, ಮಾಳೇನಹಳ್ಳಿ ಅಣ್ಣೆಗೌಡ, ಬನ್ನೂರು ಅಣ್ಣಯ್ಯ, ಬೊಮ್ಮನಹಳ್ಳಿ ಕೋಡಿಗೌಡ್ರು, ಜಿ ಪಂ ಮಾಜಿ ಸದಸ್ಯ ಅಪ್ಪಣ್ಣ, ಹೆಚ್.ಎಸ್. ಶಂಕರ್, ಬೊಮ್ಮನಹಳ್ಳಿ ಕೃಷ್ಣ, ಬೆಟ್ಟಗಳಲೆ ಮಾಧವ, ಆರಕ್ಷಕ ಉಪ ನಿರೀಕ್ಷಿತ ಗಿರೀಶ್, ಪ್ರಾಂಶುಪಾಲ ಹೊಡೆನೂರು ಮಹೇಶ್ ಮತ್ತು ವಿವಿಧೆಡೆಗಳಿಂದ ಆಗಮಿಸಿದ ಭಕ್ತರು ಇದ್ದರು.