ವೀರಶೈವ ಪರಂಪರೆಗೆ ಶ್ರೀರೇಣುಕಾಚಾರ್ಯರ ಪಾತ್ರ ಮಹತ್ತರ: ಆರ್.ಐಶ್ವರ್ಯ

KannadaprabhaNewsNetwork | Published : Mar 14, 2025 12:37 AM

ಸಾರಾಂಶ

ವೀರಶೈವ ಪರಂಪರೆಯನ್ನು ಪಸರಿಸುವಲ್ಲಿ ಶ್ರೀ ರೇಣುಕಾಚಾರ್ಯರ ಪಾತ್ರ ಮಹತ್ತರವಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವೀರಶೈವ ಪರಂಪರೆಯನ್ನು ಪಸರಿಸುವಲ್ಲಿ ಶ್ರೀ ರೇಣುಕಾಚಾರ್ಯರ ಪಾತ್ರ ಮಹತ್ತರವಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಶ್ರೀ ನಗರದ ಗಾಂಧಿ ಭವನದಲ್ಲಿ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಾತಿ, ಮತ, ಭಾಷೆ, ಪ್ರದೇಶ ಎಂಬ ಸಂಕುಚಿತ ಸಂಕೋಲೆಗಳನ್ನು ಮೀರಿ ಮಾನವ ಧರ್ಮದ ಉನ್ನತಿಗೆ ರೇಣುಕಾಚಾರ್ಯರು ಶ್ರಮಿಸಿದ್ದಾರೆ ಎಂದು ಪ್ರತಿಪಾದಿಸಿದರು.

ಯಾವುದೇ ಜಾತಿ ಜನಾಂಗದಲ್ಲಿ ಹುಟ್ಟಿದ ವ್ಯಕ್ತಿ ತನ್ನ ಸತ್ಯ, ಶುದ್ಧ ಆಚರಣೆಯಿಂದ ಸದ್ಗುರುವಿಗೆ ಶರಣಾತಿ ಗುರು ನೀಡಿದ ಬೋಧಾಮೃತವನ್ನು ಅಳವಡಿಸಿಕೊಂಡು ಜೀವನದಲ್ಲಿ ಉನ್ನತಕ್ಕೆ ಏರಲು ಸಾಧ್ಯ ಎಂದು ರೇಣುಕಾಚಾರ್ಯರು ತಿಳಿಸಿದ್ದಾರೆ ಎಂದರು.

ಆಧುನಿಕತೆ, ವಿಜ್ಞಾನ, ಪರಿವರ್ತನೆ ಯುಗದಲ್ಲಿ ಸಾಕಷ್ಟು ಬದಲಾವಣೆ ಮತ್ತು ಸುಧಾರಣೆಗಳಾಗುತ್ತಿದ್ದು, ಮನುಷ್ಯನ ಆತ್ಮ ಜ್ಞಾನವನ್ನು ಹೆಚ್ಚಿಸುವುದಕ್ಕೆ ಹಲವು ಮಾರ್ಗದರ್ಶನ ಇವೆ. ಅಂತಹ ದಾರ್ಶನಿಕರ ಜಗತ್ತಿನಲ್ಲಿ ಬಹು ಪ್ರಾಚೀನ ಕಾಲದಿಂದ ಜೀವಾತ್ಮ, ಪರಮಾತ್ಮ, ಜಗತ್ತು. ಬಂಧ ಮತ್ತು ಮೋಕ್ಷ ಎಂಬ ಪಂಚ ವಿಷಯಗಳ ಕುರಿತು ಚಿಂತನೆಗಳು ನಡೆಯುತ್ತವೆ ಎಂದರು.

ಶ್ರೀ ಜಗದ್ಗರು ರೇಣುಕಾಚಾರ್ಯರು ಹತ್ತಿರದ ತೆಲಂಗಾಣ ರಾಜ್ಯದ ನಲಗೊಂಡ ಜಿಲ್ಲೆಯ ಕೊಲ್ಲಿ ಪಾಕೀಯ ಸ್ವಯಂಭೂ ಸೋಮೇಶ್ವರ ಲಿಂಗದಿಂದ ಪಾಲ್ಗುಣ ಶುದ್ಧ ತ್ರಯೋದಶಿಯಂದು ಅವತರಿಸಿದ್ದಾರೆ. ಆ ದಿನವನ್ನೇ ಪ್ರತೀ ವರ್ಷ ಎಲ್ಲೆಡೆ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವವಾಗಿ ಆಚರಿಸಲಾಗುತ್ತದೆ ಎಂದರು.

ಯುಗ ಯುಗಗಳ ನಂಟು ಬೆಸೆದುಕೊಂಡಿರುವ ಪಂಚ ಆಚಾರ್ಯರ ಪರಂಪರೆಯಲ್ಲಿ ಜಗದ್ಗುರು ರೇಣುಕಾಚಾರ್ಯರು ಪ್ರಾಚೀನ ಕಾಲದಲ್ಲಿ ಅಸ್ಪೃಶ್ಯತೆಯನ್ನು ತೊಡೆದು ಸರ್ವಜನಾಂಗಕ್ಕೂ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಕ್ರಾಂತಿ ಪುರುಷ ಎಂದು ಆರ್.ಐಶ್ವರ್ಯ ಅವರು ಹೇಳಿದರು.

ನಿವೃತ್ತ ಶಿಕ್ಷಕರಾದ ಬಿ.ಸಿ.ಶಂಕರಯ್ಯ ಮಾತನಾಡಿ ಮಲಯಾಚಲದಲ್ಲಿದ್ದ ಅಗಸ್ತ್ಯಮುನಿಗೆ ಸಿದ್ಧಾಂತ ಉಪದೇಶಿಸಿ, ಭದ್ರಾನದಿ ತೀರದಲ್ಲಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ ಸಂಸ್ಥಾಪಿಸಿದ ಜಗದ್ಗುರು ರೇಣುಕಾಚಾರ್ಯರು ಭೂಗರ್ಭ ಸಂಜಾತ ಶ್ರೀರುದ್ರಮುನಿದೇವರಿಗೆ ಉತ್ತರಾಧಿಕಾರ ದಯಪಾಲಿಸಿದ ನಂತರ ಈವರೆಗೆ ಬಾಳೆಹೊನ್ನೂರಿನ ಶ್ರೀರಂಭಾಪುರಿ ಪೀಠದಲ್ಲಿ 120 ಜಗದ್ಗುರುಗಳು ವೀರ ಸಂಹಾಸನವನ್ನು ಆರೋಹಣ ಮಾಡಿದ್ದಾರೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಇತರರು ಇದ್ದರು.

Share this article