ಮಾನವ ಧರ್ಮ ಶ್ರೇಷ್ಠವಾದುದು. ಪ್ರತಿಯೊಬ್ಬ ಮನುಷ್ಯ ಸಮಾಜಕ್ಮೆ ಏನಾದರೂ ಕೊಡುಗೆ ನೀಡಬೇಕು. ರಕ್ತದಾನ ಶ್ರೇಷ್ಠದಾನ. ಈ ದಿನ ಮಠದ ಸದ್ಬಕ್ತರು ರಕ್ತದಾನ ಕಾರ್ಯಕ್ರಮ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಬೇಬಿ ಬೆಟ್ಟದ ಶ್ರೀರಾಮಯೋಗೇಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಅವರ 25ನೇ ವರ್ಷದ ಹುಟ್ಟುಹಬ್ಬವನ್ನು ಮಠದ ಭಕ್ತರು ಹಾಗೂ ಅಭಿಮಾನಿಗಳು ಬಹಳ ಅರ್ಥಪೂರ್ಣವಾಗಿ ಆಚರಿಸಿದರು.
ಪಟ್ಟಣದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಾಮೀಜಿ ರಕ್ತದಾನ ಹಾಗೂ ಪ್ರಸಾದ ವಿತರಿಸಿ ಪಕ್ಷತೀತ ಹಾಗೂ ಜಾತ್ಯತೀತವಾಗಿ ನಡೆಸಲಾಯಿತು.
ಸ್ವತಃ ಸ್ವಾಮೀಜಿ ಸೇರಿದಂತೆ ನೂರಾರು ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಯುವಕರಿಗೆ ಶ್ರೀಗಂಧ ಹಾಗೂ ತೇಗದ ಸಸಿ ವಿತರಿಸಲಾಯಿತು.
ಶಿಬಿರಕ್ಕೆ ಚಾಲನೆ ನೀಡಿದ ತಹಸೀಲ್ದಾರ್ ಎಸ್.ಸಂತೋಷ್ ಕುಮಾರ್ ಮಾತನಾಡಿ, ಶಿವಬಸವ ಶ್ರೀಗಳದ್ದು ಜಾತಿ ಮೀರಿದ ವ್ಯಕ್ತಿತ್ವ. ಶ್ರೀಮಠವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜೊತೆಗೆ ಎಲ್ಲಾ ಜಾತಿ ಜನರನ್ನು ಪ್ರೀತಿಸಿ ಅತ್ಯಂತ ಗೌರವದಿಂದ ನಡೆದುಕೊಳ್ಳುತ್ತಾರೆ ಎಂದರು.
ಚಿಕ್ಕ ವಯಸ್ಸಿನಲ್ಲಿಯೇ ಶ್ರೀಗಳಾಗಿರುವ ಶಿವಬಸವ ಶ್ರೀಗಳು ತಮ್ಮ ವ್ಯಕ್ತಿತ್ವದ ಮೂಲಕ ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯ ಡಾ.ಶಿವಕುಮಾರ ಶ್ರೀಗಳಾಗಿ ರೂಪುಗೊಳ್ಳುತ್ತಾರೆ ಎಂದರು.
ಶಿವಬಸವ ಸ್ವಾಮೀಜಿ ಮಾತನಾಡಿ, ಮಾನವ ಧರ್ಮ ಶ್ರೇಷ್ಠವಾದುದು. ಪ್ರತಿಯೊಬ್ಬ ಮನುಷ್ಯ ಸಮಾಜಕ್ಮೆ ಏನಾದರೂ ಕೊಡುಗೆ ನೀಡಬೇಕು. ರಕ್ತದಾನ ಶ್ರೇಷ್ಠದಾನ. ಈ ದಿನ ಮಠದ ಸದ್ಬಕ್ತರು ರಕ್ತದಾನ ಕಾರ್ಯಕ್ರಮ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ, ಕೆ.ಆರ್.ಪೇಟೆ ತಾಪಂ ಮಾಜಿ ಸದಸ್ಯ ಮಹದೇವಪ್ರಸಾದ್, ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್ ಮಾತನಾಡಿದರು. ದ್ಯಾವಪ್ಪ ಬಸವ ಗೀತೆ ಹಾಡಿದರು. ಈ ವೇಳೆ ಶ್ರೀಮಠದ ನೂರಾರು ಭಕ್ತರು ಭಾಗವಹಿಸಿದ್ದರು. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಶ್ರೀಗಳನ್ನು ಅಭಿನಂದಿಸಿದರು. ಶ್ರೀಗಳು ಶಾಸಕರಿಗೆ ಸಿಹಿ ತಿನಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.