- ಶಿಕ್ಷಣ ಶಿಲ್ಪಿ ಡಾ. ಎಂಎಸ್ಎಸ್ ಪ್ರಶಸ್ತಿ, ಎಸ್ಎಸ್ಎಸ್ ಕ್ವಿಝ್ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಸಮಾರಂಭ: ಜಸ್ಟಿನ್ ಡಿಸೌಜ - - -
ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ 56ನೇ ವಾರ್ಷಿಕ ಸಂಭ್ರಮ 25-26, ಶಿಕ್ಷಣ ಶಿಲ್ಪಿ ಡಾ. ಎಂ.ಎಸ್.ಎಸ್. ಪ್ರಶಸ್ತಿ- 2025 ಪ್ರದಾನ, ಎಸ್ಎಸ್ಎಸ್ ಕ್ವಿಝ್-2025 ಬಹುಮಾನ ವಿತರಣೆ, ಸಿದ್ಧಗಂಗಾ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಸಂಭ್ರಮ ಜ.3ರಿಂದ ನಾಲ್ಕು ದಿನಗಳ ಕಾಲ ಶಾಲೆ ಆವರಣದಲ್ಲಿ ನಡೆಯಲಿದೆ ಎಂದು ಶ್ರೀ ವಿದ್ಯಾಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿಸೌಜ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.3ರಂದು ಸಂಜೆ 5 ಗಂಟೆಗೆ ಶ್ರೀ ಸಿದ್ಧಗಂಗಾ ಪಿಯು ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ ಅಧ್ಯಕ್ಷತೆಯಲ್ಲಿ ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ಸಮಾರಂಭ ಉದ್ಘಾಟಿಸಿ, ಸಿದ್ಧಗಂಗಾ ಪ್ರತಿಭಾ ಪುರಸ್ಕಾರ, ದ್ವಿತೀಯ ಪಿಯುಸಿ-2025, ಎಂಎಸ್ಎಸ್ ಕ್ವಿಝ್ 2025 ವಿಜೇತರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ ಎಂದರು.ಕಾಲೇಜಿನ ಬೋಧಕರಾದ ಕಮಟಂ ಶ್ರೀನಿವಾಸಲು, ಬಿ.ಎಂ. ವಿನಾಯಕ, ಬಿ.ಎನ್.ಧನಂಜಯಪ್ಪ, ಕೆ.ನಿಂಗಮ್ಮ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಗೌರವ ಉಪಸ್ಥಿತರಿರುತ್ತಾರೆ. ವೇದಿಕೆ ಕಾರ್ಯಕ್ರಮದ ಮುನ್ನ ಸಂಜೆ 5 ಗಂಟೆಗೆ ಜಿ.ಬಿ.ಸಾನ್ವಿ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಶ್ರೀ ಸಿದ್ಧಗಂಗಾ ಕಾಂಪೋಜಿಟ್ ಶಾಲೆ ಮುಖ್ಯ ಶಿಕ್ಷಕಿ ಕೆ.ಎಸ್.ರೇಖಾರಾಣಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಹೇಳಿದರು.
ದಿ.5ರಂದು ಸಂಜೆ 5 ಗಂಟೆಗೆ ಶ್ರೀ ಸಿದ್ಧಗಂಗಾ ಸ್ಕೂಲ್ (ಸಿಬಿಎಸ್ಇ) ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಣ್ ಅಧ್ಯಕ್ಷತೆಯಲ್ಲಿ ಸಂಪ್ರದಾಯ ಟ್ರಸ್ಟ್ ಸಹ ಸಂಸ್ಥಾಪಕ, ಶೈಕ್ಷಣಿಕ ಸಲಹೆಗಾರ ಡಿ.ಪಿ. ಚೇತನ್ ಸಮಾರಂಭ ಉದ್ಘಾಟಿಸುವರು. 10ನೇ ತರಗತಿ ಸಿಬಿಎಸ್ಇ ಸಾಧಕ ಮಕ್ಕಳಿಗೆ ಸಿದ್ಧಗಂಗಾ ಪ್ರತಿಭಾ ಪುರಸ್ಕಾರ ನೀಡಲಾಗುವುದು. ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಆರ್.ವಾಗ್ದೇವಿ ಅವರಿಗೆ ಡಾ. ಎಂ.ಎಸ್. ಶಿವಣ್ಣ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶಾಲೆಯ ಸಹ ಶಿಕ್ಷಕರಾದ ಎಸ್.ಆಶಾ, ಡಿ.ಹರಿಣಿ, ಫಾರುಕ್ ಉಸ್ಮಾನಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಗೌರವ ಉಪಸ್ಥಿತರಿರುವರು. ಮುಖ್ಯ ಶಿಕ್ಷಕಿ ಕೆ.ಎಸ್.ರೇಖಾರಾಣಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಎಸ್.ಎಸ್.ಅನುಶ್ರೀ ಮತ್ತು ತಂಡದಿಂದ ಸುಗಮ ಸಂಗೀತವಿದೆ ಎಂದು ವಿವರಿಸಿದರು.
ಶ್ರೀ ಸಿದ್ಧಗಂಗಾ ಕಾಲೇಜಿನ ನಿರ್ದೇಶಕ ಡಾ. ಡಿ.ಎಸ್. ಜಯಂತ್ ಮಾತನಾಡಿ, ಜ.3ರಂದು ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ರಾಜ್ಯದ ಪ್ರತಿಷ್ಟಿತ ಎಂಎಸ್ಎಸ್ ಕ್ವಿಝ್-2025 ವಿಜೇತ 30 ಮಕ್ಕಳಿಗೆ ಬಹುಮಾನ ನೀಡಲಾಗುವುದು. ಬಿ.ವೈ. ಅರುಣೋದಯ, ಕೆ.ಸಿ.ದರ್ಶನ್ ಇಬ್ಬರೂ ಮೊದಲ ಸ್ಥಾನ ಪಡೆದಿದ್ದು, ಇಬ್ಬರಿಗೂ ತಲಾ ₹50 ಸಾವಿರ ನಗದು ಬಹುಮಾನ ನೀಡುತ್ತಿದ್ದೇವೆ. ಬಿ.ಸಿ.ಸಿರಿ ದ್ವಿತೀಯ ಸ್ಥಾನಕ್ಕೆ ₹25 ಸಾವಿರ, ತೃತೀಯ ಬಹುಮಾನ 9 ಮಕ್ಕಳಿಗೆ ತಲಾ ₹10 ಸಾವಿರ ನೀಡಲಾಗುವುದು. 18 ಮಕ್ಕಳಿಗೆ ಸಮಾಧಾನಕರ ಬಹುಮಾನವಾಗಿ ತಲಾ ₹1 ಸಾವಿರ ನೀಡಲಾಗುತ್ತಿದೆ. ದ್ವಿತೀಯ ಪಿಯುಸಿನಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ 146 ಮಕ್ಕಳಿಗೆ ಸಿದ್ಧಗಂಗಾ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದರು.
ಈ ನಾಲ್ಕೂ ದಿನ ಸಂಜೆ 5ರಿಂದ 5.30ರವರೆಗೆ ಸಂಸ್ಥೆಯ ಸಾನ್ವಿ, ಜೀವಾಕ್ಷರಿ, ಅನುಶ್ರೀ, ಐಸಿರಿ, ಪ್ರಿಯಾಂಕ ಮತ್ತು ತಂಡದಿಂದ ಸುಗಮ ಸಂಗೀತ ಇರಲಿದೆ. ಕ್ರೀಡೋತ್ಸವ, ಸಾಂಸ್ಕೃತಿಕ ಸ್ಪರ್ಧೆ ವಿಜೇತ 2500ಕ್ಕೂ ಹೆಚ್ಚು ಮಕ್ಕಳಿಗೆ ಬಹುಮಾನ ವಿತರಿಸಲಾಗುವುದು. ವಾರ್ಷಿಕ ಸಂಭ್ರಮಾಚರಣೆಯಲ್ಲಿ ನಿತ್ಯವೂ ಪ್ರತಿಭಾ ಪುರಸ್ಕಾರ ಪ್ರದಾನ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, 100ಕ್ಕೂ ಹೆಚ್ಚು ನೃತ್ಯಗಳಲ್ಲಿ ಮಕ್ಕಳು ಭಾಗವಹಿಸುವರು ಎಂದು ವಿವರಿಸಿದರು.
- - -
- ಜಸ್ಟಿನ್ ಡಿಸೌಜ, ಮುಖ್ಯಸ್ಥರು, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ
-2ಕೆಡಿವಿಜಿ5:
ದಾವಣಗೆರೆಯಲ್ಲಿ ಶುಕ್ರವಾರ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಜಸ್ಟಿನ್ ಡಿಸೌಜ ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ 56ನೇ ವಾರ್ಷಿಕ ಸಮಾರಂಭದ ಮಾಹಿತಿ ನೀಡಿದರು.