ಮಾ.28ರಿಂದ ಶ್ರೀಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ

KannadaprabhaNewsNetwork | Published : Mar 26, 2024 1:16 AM

ಸಾರಾಂಶ

ಮಾ.28ರಂದು ಜಾತ್ರಾ ಮಹೋತ್ಸವದ ಅಂಗವಾಗಿ ದೇಗುಲದಲ್ಲಿ ಗಣಪತಿ ಪೂಜೆ, ಗಂಗಾ ಪೂಜೆ, ರಕ್ಷಾ ಬಂಧನ, ಅಂಕುರಾರ್ಪಣ, ಧ್ವಜ ಸ್ಥಾಪನೆ, ಕಳಸರಾದನ ಹಾಗೂ ಮಹಾ ಚಂಡಿ ಹೋಮ, ಗಣ ಹೋಮ, ನವಗ್ರಹ, ಮೃತ್ಯುಂಜಯ, ನವದುರ್ಗ, ಶಾಂತಿ ಹೋಮಗಳ ಕಾರ್ಯಗಳ ನಂತರ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಲಿವೆ. ನಂತರ ಮಧ್ಯಾಹ್ನ 12 ಗಂಟೆಗೆ ಅಮೃತ ಮಣ್ಣಿನಿಂದ ಮುಚ್ಚಲಾಗಿರುವ ಚೌಡೇಶ್ವರಿ ಅಮ್ಮನವರ ಗರ್ಭಗುಡಿಯ ಬಾಗಿಲನ್ನು ತೆರೆಯುವ ಮೂಲಕ ವಿಶೇಷ ಅಭಿಷೇಕ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿವೆ.

ಕನ್ನಡಪ್ರಭ ವಾರ್ತೆ ಮದ್ದೂರುವರ್ಷದಲ್ಲಿ ಕೇವಲ 36 ಗಂಟೆಗಳ ಕಾಲ ನಿಜ ದರ್ಶನ ನೀಡುವ ತಾಲೂಕಿನ ಹೆಮ್ಮನಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ಮಾ.28 ರಿಂದ ಎರಡು ದಿನಗಳ ಕಾಲ ನಡೆಯಲಿದೆ.

ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ದೇಗುಲದ ಟ್ರಸ್ಟ್ ವತಿಯಿಂದ ಅಗತ್ಯ ಸಿದ್ಧತಾ ಕಾರ್ಯಗಳು ಆರಂಭಗೊಂಡಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀಚೌಡೇಶ್ವರಿ ಅಮ್ಮನವರಿಗೆ ನೆರೆಯ ತಮಿಳುನಾಡು ಸೇರಿದಂತೆ ಬೆಂಗಳೂರು ಮತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಪಾರ ಭಕ್ತರಿದ್ದಾರೆ.

ಮಾ.28ರಂದು ಜಾತ್ರಾ ಮಹೋತ್ಸವದ ಅಂಗವಾಗಿ ದೇಗುಲದಲ್ಲಿ ಗಣಪತಿ ಪೂಜೆ, ಗಂಗಾ ಪೂಜೆ, ರಕ್ಷಾ ಬಂಧನ, ಅಂಕುರಾರ್ಪಣ, ಧ್ವಜ ಸ್ಥಾಪನೆ, ಕಳಸರಾದನ ಹಾಗೂ ಮಹಾ ಚಂಡಿ ಹೋಮ, ಗಣ ಹೋಮ, ನವಗ್ರಹ, ಮೃತ್ಯುಂಜಯ, ನವದುರ್ಗ, ಶಾಂತಿ ಹೋಮಗಳ ಕಾರ್ಯಗಳ ನಂತರ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಲಿವೆ.

ನಂತರ ಮಧ್ಯಾಹ್ನ 12 ಗಂಟೆಗೆ ಅಮೃತ ಮಣ್ಣಿನಿಂದ ಮುಚ್ಚಲಾಗಿರುವ ಚೌಡೇಶ್ವರಿ ಅಮ್ಮನವರ ಗರ್ಭಗುಡಿಯ ಬಾಗಿಲನ್ನು ತೆರೆಯುವ ಮೂಲಕ ವಿಶೇಷ ಅಭಿಷೇಕ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿವೆ.

ಸಂಜೆ 5 ಗಂಟೆಗೆ ಚೌಡೇಶ್ವರಿ ಅಮ್ಮನವರ ಬಂಡಿ ಉತ್ಸವ ಮಹಾಭಿಷೇಕ, ರಾತ್ರಿ 11 ಗಂಟೆಗೆ ಅಮ್ಮನವರ ಕರಗ ಮಹೋತ್ಸವ ಜರುಗಲಿದೆ. ಮಾ.29 ರಂದು ಶುಕ್ರವಾರ ಬೆಳಗಿನ ಜಾವ 4.30ಕ್ಕೆ ಅಗ್ನಿಕೊಂಡ ಮಹೋತ್ಸವ. ಮಧ್ಯಾಹ್ನ 12 ಗಂಟೆಗೆ ಶ್ರೀ ಚೌಡೇಶ್ವರಿ ಅಮ್ಮನವರ ದಿವ್ಯ ಮಹಾರಥೋತ್ಸವ ನೆರವೇರಲಿದೆ.

ನಂತರ ಬಾಯಿಗೆ ಬೀಗ, ಮುಡಿಸೇವೆ ಇನ್ನಿತರ ಪೂಜಾ ಕಾರ್ಯಗಳು ಜರುಗಲಿವೆ. ರಾತ್ರಿ 10 ಗಂಟೆಗೆ ಹಿಂದಿನಿಂದ ನಡೆದು ಬಂದ ಸಂಪ್ರದಾಯದಂತೆ ಅಮ್ಮನವರ ಗರ್ಭಗುಡಿಯಲ್ಲಿ ನಂದಾದೀಪ ಬೆಳಗಿಸಿ ಅಮೃತ ಮಣ್ಣಿನಿಂದ ಮಹಾದ್ವಾರದ ಬಾಗಿಲನ್ನು ಮುಚ್ಚುವ ಮೂಲಕ ಎರಡು ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಎರಡು ದಿನಗಳ ಕಾಲ ನಡೆಯುವ ಹೆಮ್ಮನಹಳ್ಳಿ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ದೇಗುಲದ ಟ್ರಸ್ಟ್ ವತಿಯಿಂದ ಭಕ್ತಾಧಿಗಳಿಗೆ ವಸತಿ, ಶೌಚಾಲಯ, ಕುಡಿಯುವ ನೀರು ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಜಯಶಂಕರ್ ತಿಳಿಸಿದ್ದಾರೆ.

Share this article