ಮತ್ತೆ ತುಂಬಿ ಹರಿಯುತ್ತಿರವ ತುಂಗೆ । ವಿದ್ಯುತ್,ಮೊಬೈಲ್ ನೆಟ್ ವರ್ಕ್ ವ್ಯತ್ಯಯ ಜನರ ಪರದಾಟ
ತಾಲೂಕಿನಾದ್ಯಂತ ನಾಲ್ಕೈದು ದಿನಗಳಿಂದ ನಿರಂತರವಾಗಿ ಅಬ್ಬರಿಸಿದ ಮಳೆ ಗುರುವಾರವೂ ಹಗಲಿಡೀ ಗುಡುಗು ಸಹಿತ ಭಾರೀ ಮಳೆ ಸುರಿಯಿತು. ಬುಧವಾರ ರಾತ್ರಿಯಿಂದ ಗುರುವಾರ ಸಂಜೆಯವರೆಗೂ ಆರ್ಭಟಿಸಿತು. ಮಳೆಯ ಆರ್ಭಟದಿಂದ ತುಂಗಾನದಿ ಮತ್ತೆ ತುಂಬಿ ಹರಿಯುತ್ತಿದೆ. ತಾಲೂಕಿನ ವಿವಿಧೆಡೆ ಮತ್ತೆ ಗುಡ್ಡಗಳು ಕುಸಿಯುತ್ತಿದ್ದು, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಿದೆ.
ಮೊಬೈಲ್ ನೆಟ್ ವರ್ಕ್ ವ್ಯತ್ಯಯಗೊಳುತ್ತಿದ್ದು ಜನರು ಪರದಾಡುವ ಪರಿಸ್ಥಿತಿ ಉಂಟಾಗಿದೆ.ಗೌರೀ ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಮಳೆ ಅಬ್ಬರವೂ ಜೋರಾಗುತ್ತಿದ್ದು ಹಬ್ಬದ ಸಂಭ್ರಮದಲ್ಲಿದ್ದ ಜನರಲ್ಲಿ ನಿರಾಸೆ ಮೂಡಿಸಿದೆ.ಕೆರೆಕಟ್ಟೆ ನೆಮ್ಮಾರು ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಎಡಬಿಡದೆ ಭಾರೀ ಮಳೆ ಯಾಗುತ್ತಿರುವುದರಿಂದ ತುಂಗಾನದಿಯಲ್ಲಿ ನೀರು ಅಪಾಯದ ಮಟ್ಟಮೀರಿ ಹರಿಯುತ್ತಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜಲಾವೃತಗೊಂಡಿದೆ. ಮಳೆ ಮುಂದುವರಿದಲ್ಲಿ ಪ್ರವಾಹದ ಭೀತಿ ಉಂಟಾಗಲಿದೆ. ಕಿಗ್ಗಾ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ನಂದಿನಿ, ನಳಿನಿ ನದಿಗಳು ತುಂಬಿವೆ.
ಕಳೆದೆರೆಡು ದಿನಗಳಿಂದ ಆಗಾಗ ವಿದ್ಯುತ್ ಕಡಿತಗೊಳ್ಳುತ್ತಿರುವುದರಿಂದ ಜನರು ಪರದಾಡಬೇಕಿದೆ. ಪಟ್ಟಣ ಗ್ರಾಮೀಣ ಪ್ರದೇಶಗಳಲ್ಲಿ ಹಗಲು ರಾತ್ರಿ ಮೊಬೈಲ್ ನೆಟ್ ವರ್ಕ ಸಮಸ್ಯೆ ಉಂಟಾಗುತ್ತಿದ್ದು ಜನರು ಅಗತ್ಯ ಕೆಲಸ ಕಾರ್ಯಗಳಿಗೆ ಪರದಾಡುವಂತಹ ವಾತಾವರಣ ನಿರ್ಮಾಣವಾಗಿದೆ. ಗುರುವಾರ ಸಂಜೆಯವರೆಗೂ ಮಳೆ ಆರ್ಭಟ ಮುಂದುವರಿದಿತ್ತು.
ಶೃಂಗೇರಿ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ 169 ರ ಶೃಂಗೇರಿ ತ್ಯಾವಣ ಬಳಿ ಗುಡ್ಡಕುಸಿಯುತ್ತಿರುವುದು.
ಶೃಂಗೇರಿ ಸುತ್ತಮುತ್ತ ಭಾರೀ ಮಳೆಯಾಗುತ್ತಿರುವುದರಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ ನದಿ.