ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಪೂರ್ಣಯ್ಯ ಬೀದಿಯಲ್ಲಿ ವೇದಬ್ರಹ್ಮ ಡಾ.ಭಾನು ಪ್ರಕಾಶ್ ಅವರ ಮನೆಯ ಹಿಂಭಾಗದಲ್ಲಿ ಒಂದು ಪುಟ್ಟ ಮನೆಯಲ್ಲಿ ವಾಸವಿದ್ದ ಭಿಕ್ಷುಕಿ ಪಾರ್ವತಿ (ಅವಳೂ ಭಿಕ್ಷುಕಿಯಾಗಿದ್ದು ಈಚೆಗೆ ನಿಧನ ಹೊಂದಿದ್ದಾರೆ) ಅವರ ಮಗಳು ಸುಮಾರು 60 ವರ್ಷ ವಯಸಿನ ಸಾವಿತ್ರಿ ಎಂಬ ಮಹಿಳೆಯ ಮನೆಯಲ್ಲಿ ಕಸದ ರಾಶಿ ಜೊತೆ ನೋಟು-ಚಿಲ್ಲರೆ ಹಣವನ್ನು ಚೀಲಗಳಲ್ಲಿ ತುಂಬಿಡಲಾಗಿತ್ತು.
ಕಳೆದ 15 ವರ್ಷದಿಂದ ಭಿಕ್ಷೆ ಮಾಡಿಕೊಂಡಿದ್ದ ತಾಯಿ ಹಾಗೂ ಮಗಳು ಚೀಲದಲ್ಲಿ ಹಣವನ್ನು ತುಂಬಿಟ್ಟಿದ್ದರು. 500, 200, 100, 50, 20, 10 ರು. ಮುಖ ಬೆಲೆಯ ನೋಟುಗಳ ಎಣಿಕೆಯಲ್ಲಿ ಇದುವರೆಗೆ 1,85,000 ರು. ಜೊತೆ ಒಂದು ಅಮೆರಿಕನ್ ಡಾಲರ್ ಹಾಗೂ ಹಳೆಯ 500 ರ ನೋಟ್ ದೊರೆತಿದೆ. ಅಲ್ಲದೇ, ಇನ್ನೂ 6 ಚೀಲ ದೊರೆತಿದ್ದ ಚಿಲ್ಲರೆ ಹಣವನ್ನು ಏಣಿಕೆ ಮಾಡಬೇಕಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಸಾವಿತ್ರಿ ಅವರ ತಾಯಿ ಪಾರ್ವತಿ ಇತ್ತೀಚೆಗೆ ಮೃತರಾಗಿದ್ದರು. ಅವರಿಗೆ ವೃದ್ಧಾಪ್ಯ ವೇತನಗಳು ಬರುತ್ತಿದ್ದು, ಅಕ್ಕ-ಪಕ್ಕದ ಮನೆಯವರು ಸೇರಿ ಅವರ ಅಂತ್ಯ ಸಂಸ್ಕಾರ ನಡೆಸಿದ್ದರು. ಆಕೆಯ ಮಗಳು ಸಾವಿತ್ರಿ ಕೂಡ ಭಿಕ್ಷುಕಿಯಾಗಿದ್ದರಿಂದ ಒಂಟಿಯಾಗಿ ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯ, ಸ್ನಾನಘಟ್ಟ, ಶ್ರೀಗಂಗಾಧರೇಶ್ವರ ಸ್ವಾಮಿ ದೇವಾಲಯದ ಬಳಿ ಭಿಕ್ಷೆ ಬೇಡಿಕೊಂಡು ಈ ಹಣವನ್ನು ಸಂಗ್ರಹಿಸಿದ್ದರು ಎಂದು ತಿಳಿದು ಬಂದಿದೆ.
ವಿವಿಧ ಸಂಘ-ಸಂಸ್ಥೆಯವರು ಆಗಮಿಸಿ ಸಾವಿತ್ರಿ ಅವರಿಗೆ ಸ್ನಾನ ಮಾಡಿಸಿ, ಮನೆಯನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಈ ವೇಳೆ ಪ್ಲಾಸ್ಟಿಕ್ ಚೀಲದಲ್ಲಿ ನೋಟು ಹಾಗೂ ಚಿಲ್ಲರೆ ಹಣ ತುಂಬಿದ ಚೀಲಗಳು ಸಿಕ್ಕಿವೆ. ಹಣದ ಚೀಲಗಳನ್ನು ಹೊರ ತೆಗೆದ ಸಂಘಟಕರು ಅದರಲ್ಲಿದ್ದ ಹಣವನ್ನು ಸುರಿದು ಎಣಿಸಲು ಮುಂದಾಗಿದ್ದಾರೆ.
ನಮ್ಮ ಮನೆಯ ಹಿಂಬದಿಯಲ್ಲಿ ಹಲವು ವರ್ಷಗಳಿಂದಲೂ ವಾಸವಿದ್ದ ಪಾರ್ವತಿ ಮತ್ತು ಆಕೆಯ ಮಗಳು ಸಾವಿತ್ರಿ ನಮಗೆ ಚಿರಪರಿಚಿತರು. ಪುಟ್ಟ ಮನೆಯಲ್ಲಿ ವಾಸವಿದ್ದ ಅವರು ಈ ಮೊದಲು ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ 15 ವರ್ಷದಿಂದ ಭಿಕ್ಷೆ ಬೇಡಿ ಬರುತ್ತಿದ್ದರು. ಅಕ್ಕಪಕ್ಕದಲ್ಲಿದ್ದ ನಾವುಗಳು ಅವರಿಗೆ ತಿನ್ನಲು ಆಹಾರವನ್ನು ನೀಡುತ್ತಿದ್ದೆವು. ಆದರೆ, ಭಿಕ್ಷೆ ಬೇಡಿ ಇಷ್ಟು ಹಣ ಚೀಲದಲ್ಲಿ ಇಟ್ಟಿರುವುದು ನಮಗೆ ಗೊತ್ತಿರಲಿಲ್ಲ. ಈಗ ಹಣವನ್ನು ಏಣಿಕೆ ಮಾಡಿ ಆಕೆಯ ಹೆಸರಿಗೆ ಜಮೆ ಮಾಡುವುದಾಗಿ ಭಾನುಪ್ರಕಾಶ್ ಶರ್ಮ ಹಾಗೂ ವಿಶಾಲಾಕ್ಷಿ ತಿಳಿಸಿದರು.
-ಭಿಕ್ಷುಕಿ ಕೂಡಿಟ್ಟಿದ್ದು 2.50 ಲಕ್ಷಕ್ಕೂ ಹೆಚ್ಚು ಹಣ