ವಿಜಯನಗರ ಜಿಲ್ಲೆ ಶೇ.96.39 ಉತ್ತೀರ್ಣದೊಂದಿಗೆ ರಾಜ್ಯದಲ್ಲಿ ಜಿಲ್ಲೆ 10 ಸ್ಥಾನ ಪಡೆದುಕೊಂಡಿದೆ.
ಹೊಸಪೇಟೆ: 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ವಿಜಯನಗರ ಜಿಲ್ಲೆ ಶೇ.96.39 ಉತ್ತೀರ್ಣದೊಂದಿಗೆ ರಾಜ್ಯದಲ್ಲಿ ಜಿಲ್ಲೆ 10 ಸ್ಥಾನ ಪಡೆದುಕೊಂಡಿದೆ. ಕಲಬುರ್ಗಿ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದು, ಜಿಲ್ಲೆಯ ನಾಲ್ವರು ಬಾಲಕಿಯರು 620ಕ್ಕೂ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಬಳ್ಳಾರಿ ಜಿಲ್ಲೆಯಿಂದ ಪ್ರತ್ಯೇಕ ವಿಜಯನಗರ ಜಿಲ್ಲೆಯು ರಾಜ್ಯದ 31ನೇ ಜಿಲ್ಲೆಯಾಗಿ ಆಸ್ತಿತ್ವಕ್ಕೆ ಬಂದ ಬಳಿಕ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸತತ ನಾಲ್ಕು ವರ್ಷಗಳಿಂದ ಕಲಬುರ್ಗಿ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಈ ವರ್ಷ ಸಹ ವಿಭಾಗದಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿದೆ. ಜಿಲ್ಲೆಯ ಹರಪನಹಳ್ಳಿ ಕೆಸಿಎ ಆಂಗ್ಲ ಮಾದ್ಯಮ ಶಾಲೆ ವಿದ್ಯಾರ್ಥಿನಿ ಪ್ರಂಜಲ 625ಕ್ಕೆ 623 ಅಂಕಗಳನ್ನು ಪಡೆದುಕೊಂಡು ಜಿಲ್ಲೆಗೆ ಮೊದಲ ಟಾಪರ್ ಆಗಿದ್ದಾರೆ. ಇದೇ ಶಾಲೆಯ ವಿದ್ಯಾರ್ಥಿನಿ, ವಿ.ಎಚ್. ಸುರಭಿ ಮತ್ತು ಹಗರಿಬೊಮ್ಮನಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ವಿದ್ಯಾರ್ಥಿನಿ, ಸಹನಾ, ಹಗರಿಬೊಮ್ಮನಹಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮೀ ತಲಾ 625ಕ್ಕೆ 621 ಅಂಕಗಳನ್ನು ಗಳಿಸುವ ಜಿಲ್ಲೆಗ ಎರಡನೇ ಟಾಪರ್ ಆಗಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ 18817 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಇವರಲ್ಲಿ 18138 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 8928 ಬಾಲಕರು, 9889 ಬಾಲಕಿಯರು ಪರೀಕ್ಷೆಗೆ ಕುಳಿತಿದ್ದು, ಇವರಲ್ಲಿ 8466 ಬಾಲಕರು ಮತ್ತು 9672 ಬಾಲಕಿಯರು ಉತ್ತೀರ್ಣರಾಗಿದ್ದಾರೆ.
ಜಿಲ್ಲೆಯಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕು 97.73 ಫಲಿತಾಂಶವನ್ನು ಪಡೆದುಕೊಂಡಿದೆ. ಹರಪನಹಳ್ಳಿ ತಾಲೂಕು 96 . 97 ರಷ್ಟು, ಹೂವಿನಹಡಗಲಿ ತಾಲೂಕು 98.29 ರಷ್ಟು, ಹೊಸಪೇಟೆ ತಾಲೂಕು 95.42 ರಷ್ಟು, ಕೂಡ್ಲಿಗಿ ತಾಲೂಕು 94.93 ರಷ್ಟು ಫಲಿತಾಂಶ ಪಡೆದುಕೊಂಡಿವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.