ಮಾಗಡಿ: ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನವನ್ನು ಸುಗಮಗೊಳಿಸಿಕೊಳ್ಳಲು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದು ಅತಿ ಮುಖ್ಯ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಹೇಳಿದರು.
ನಾವು ಯಾವುದೇ ಉದ್ಯೋಗಕ್ಕೆ ಸೇರಬೇಕಾದ ಸಮಯದಲ್ಲಿ ನಾವು 10ನೇ ತರಗತಿಯಲ್ಲಿ ಗಳಿಸಿರುವ ಅಂಕಗಳನ್ನು ಗಮನಿಸುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ಪಡುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡುವ ಉದ್ದೇಶದಿಂದ ಕನ್ನಡಪ್ರಭ ದಿನ ಪತ್ರಿಕೆಯವರು ಯುವ ಅವೃತ್ತಿ ಎಂಬ ಸಂಚಿಕೆ ಹೊರ ತಂದಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಬಮುಲ್ ನಿರ್ದೇಶಕ ಎಚ್.ಎನ್.ಅಶೋಕ್ ಮಾತನಾಡಿ, ಇಂದಿನ ದಿನಗಳಲ್ಲಿ ಎಲ್ಲಾ ವಿಚಾರಗಳಲ್ಲಿಯೂ ಸ್ವರ್ಧೆ ಹೆಚ್ಚಾಗಿದೆ. ನಮ್ಮ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಸ್ವರ್ಧಿಸಬೇಕಾದ ಅನಿವಾರ್ಯತೆ ಇರುವುದರಿಂದ ಅವರ ಬುದ್ಧಿಮತ್ತೆಯನ್ನು ಹೆಚ್ಚಿಸ ಬೇಕಿರುವುದು ನಮ್ಮೇಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.ದಿನ ಪತ್ರಿಕೆಗಳಲ್ಲಿ ದೇಶ, ವಿದೇಶಗಳ ಸುದ್ದಿಗಳ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಬಹಳಷ್ಟು ವಿಷಯಗಳನ್ನು ಪ್ರಕಟಿಸಲಾಗಿರುತ್ತದೆ, ವಿದ್ಯಾರ್ಥಿಗಳು ಪ್ರತಿದಿನವೂ ದಿನ ಪತ್ರಿಕೆಗಳನ್ನು ಓದಿ ಅದರಲ್ಲಿರುವ ವಿಷಯಗಳನ್ನು ತಿಳಿದುಕೊಂಡು ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಟಿ.ಕೆ.ರಾಮು ಮಾತನಾಡಿ, ನಾವು ವ್ಯಾಸಂಗ ನಡೆಸುತ್ತಿದ್ದ ಸಮಯದಲ್ಲಿ ದಿನ ಪತ್ರಿಕೆ ಎನ್ನುವುದು ನಮಗೆ ಮರೀಚಿಕೆಯಾಗಿತ್ತು. ಶಾಲೆಗೆ ಬರುತ್ತಿದ್ದ ಒಂದೇ ಒಂದು ದಿನ ಪತ್ರಿಕೆಯನ್ನು ನಾವುಗಳು ಪೈಪೋಟಿಯಲ್ಲಿ ಓದುತ್ತಿದ್ದೇವು. ಅದರಿಂದ ನಮ್ಮ ಜ್ಞಾನ ಭಂಡಾರ ಹೆಚ್ಚಾಗಿತ್ತು. ಈಗ ಮಾಗಡಿ ಪುರಸಭೆ ನೆರವಿನಿಂದ ಉಚಿತವಾಗಿ ವಿದ್ಯಾರ್ಥಿಗಳಿಗೆ ಕನ್ನಡಪ್ರಭ ಪತ್ರಿಕೆಯ ಯುವ ಅವೃತಿ ಸಂಚಿಕೆ ಉಚಿತವಾಗಿ ದೊರಕುತ್ತಿದ್ದು, ಈ ಪತ್ರಿಕೆಯನ್ನು ವಿದ್ಯಾರ್ಥಿಗಳು ಪ್ರತಿ ದಿನ ಓದುವ ಮೂಲಕ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಸೌಮ್ಯನಾಥ ಸ್ವಾಮಿಜಿ, ಡಿಡಿಪಿಯು ನಾಗಮ್ಮ. ಹೈಕೋರ್ಟ್ ವಕೀಲ ಸುರೇಶ್ ಗೌಡ, ಕನ್ನಡಪ್ರಭ ದಿನ ಪತ್ರಿಕೆ ತಾಲೂಕು ವರದಿಗಾರ ಎಚ್.ಆರ್.ಮಾದೇಶ್, ಪತ್ರಕರ್ತ ಸಿ.ಜಿ.ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡಪ್ರಭ ಯುವ ಅವೃತ್ತಿ ಸಂಚಿಕೆಯನ್ನು ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಬಿಡುಗಡೆ ಮಾಡಿದರು.