ಕನ್ನಡಪ್ರಭ ವಾರ್ತೆ ಕಾರ್ಕಳ
ತಾಲೂಕಿನ ಜ್ಞಾನಸುಧಾ ಹೈಸ್ಕೂಲ್ನ ವಿದ್ಯಾರ್ಥಿನಿ ಸಹನಾ ಅನಂತ್, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಶಂಕರ್ ಎನ್. ಹಾಗೂ ಪ್ರಭಾ ಕುಮಾರಿ ಎನ್. ದಂಪತಿ ಪುತ್ರಿಯಾಗಿರುವ ಸಹನಾ, ವಿಷಯವಾರು ಕನ್ನಡ 125, ಹಿಂದಿ 100, ವಿಜ್ಞಾನ 99, ಸಮಾಜ 100, ಇಂಗ್ಲಿಷ್ 99, ಗಣಿತ 100 ಅಂಕ ಗಳಿಸಿದ್ದಾರೆ.
ತಂದೆ ಶಂಕರ್ ಎನ್., ಮುಂಡ್ಕೂರು ವಿದ್ಯಾವರ್ಧಕ ಕಾಲೇಜಿನಲ್ಲಿ ಅಟೆಂಡರ್ ಆಗಿದ್ದು, ತಾಯಿ ಪ್ರಭಾ ಕುಮಾರಿ ಎನ್. ಕಾರ್ಕಳ ಕೋರ್ಟ್ನಲ್ಲಿ ಟೈಪಿಸ್ಟ್ ಆಗಿದ್ದಾರೆ.ಪುತ್ರಿಯ ಸಾಧನೆಯನ್ನು ಕೊಂಡಾಡಿದ ಶಂಕರ್, ಪ್ರಭಾ ದಂಪತಿ, ಮಗಳ ಸಾಧನೆ ನಿಜಕ್ಕೂ ಹೆಮ್ಮೆ ತರುತ್ತಿದೆ ಎಂದರು.ಓದಿನ ಜೊತೆಗೆ ಗಾರ್ಡನಿಂಗ್ನಲ್ಲಿ ಆಸಕ್ತಿ ಇರುವ ಸಹನಾ, ಟ್ಯೂಷನ್ಗೆ ಹೋಗಿಲ್ಲ. ದಿನನಿತ್ಯದ ಓದು ನನಗೆ ಸಾಥ್ ನೀಡಿದೆ. ಎಂಜಿನಿಯರ್ ಆಗಬೇಕೆಂಬ ಕನಸಿದೆ ಎನ್ನುತ್ತಾರೆ ಸಹನಾ.ಶಾಲಾ ಶಿಕ್ಷಣ ಹಾಗೂ ಪರಿಸರ ಶಿಕ್ಷಕರ ಮಾರ್ಗದರ್ಶನ, ತಂದೆ ತಾಯಿಯರ ಪ್ರೋತ್ಸಾಹ, ಟ್ರಸ್ಟ್ ಅಧ್ಯಕ್ಷ ಸುಧಾಕರ ಶೆಟ್ಟಿಯವರು ನನಗೆ ಸ್ಫೂರ್ತಿಯಾಗಿದ್ದಾರೆ ಎಂದರು.
----------ಶೋಧನ್ ಆರ್. ಹೆಗ್ಡೆಗೆ ನಾಲ್ಕನೇ ಸ್ಥಾನ:ಕಾರ್ಕಳ ಗಣಿತ ನಗರದ ಜ್ಞಾನಸುಧಾ ಹೈಸ್ಕೂಲ್ನಲ್ಲಿ ಓದುತ್ತಿರುವ ಶೋಧನ್ ಆರ್. ಹೆಗ್ಡೆ 622 ಅಂಕಗಳೊಂದಿಗೆ ರಾಜ್ಯಕ್ಕೆ ನಾಲ್ಕನೆ ಸ್ಥಾನ ಪಡೆದಿದ್ದಾರೆ.
ಇಂಗ್ಲಿಷ್ನಲ್ಲಿ 125, ಕನ್ನಡ 100, ಹಿಂದಿ 100, ಗಣಿತ 99, ವಿಜ್ಞಾನ 98, ಸಮಾಜ 100 ಅಂಕ ಪಡೆದಿದ್ದಾರೆ.ಕ್ರೀಡಾಕೂಟದಲ್ಲಿ ಆಸಕ್ತಿ ಇರುವ ಶೋಧನ್, ಉಡುಪಿಯಲ್ಲಿ ನಡೆದ ಪ್ರಾದೇಶಿಕ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಿತ್ಯ ಪರಿಶ್ರಮದ ಓದು, ಶಿಕ್ಷಕರ ಪ್ರೇರಣೆ, ತಾಯಿ ಹಾಗೂ ಕಾಲೇಜು ಸಂಸ್ಥಾಪಕರ ಪ್ರೇರಣೆ ಓದಲು ಸ್ಫೂರ್ತಿಯಾಗಿದೆ ಎನ್ನುತ್ತಾರೆ ಶೋಧನ್. ಎಸ್ಎಸ್ಎಲ್ಸಿ ಬಳಿಕ ಪಿಸಿಎಂಸಿ ಆಯ್ಕೆ ಮಾಡಿ ಎಂಜಿನಿಯರ್ ಆಗಬೇಕೆಂಬ ಕನಸು ಕಟ್ಟಿಕೊಂಡಿದ್ದಾರೆ.ಶೋಧನ್ ತಾಯಿ ಜ್ಯೋತಿ ಆರ್. ಹೆಗ್ಡೆ ಗೃಹಿಣಿಯಾಗಿದ್ದು, ಅಣ್ಣ ಸೃಜನ್ ಹೆಗ್ಡೆ, ಹೆಬ್ರಿ ತಾಲೂಕು ಕಚೇರಿಯಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದಾರೆ.