ಎನ್.ನಾಗೇಂದ್ರಸ್ವಾಮಿ
ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಹುಟ್ಟಿಸುವ ಶಿಕ್ಷಕಿ ಸರೋಜಮ್ಮ ಅವರಿಗೆ ಈ ಬಾರಿ ರಾಜ್ಯ ಪ್ರಶಸ್ತಿ ಒಲಿದಿದೆ.
ಶಿಕ್ಷಕರು ಕೇವಲ ಸಂಬಳಕ್ಕಾಗಿ ಕೆಲಸ ಮಾಡುವುದಿಲ್ಲ, ಮಕ್ಕಳ ಬಾಳಿನಲ್ಲಿ ಬದಲಾವಣೆ ತರಲು ಶ್ರಮಿಸುತ್ತಾರೆ ಎಂಬುದನ್ನು ನಾವು ಹಲವು ಬಾರಿ ಕಂಡಿದ್ದೇವೆ. ಅಂತಹವರ ಪೈಕಿ ಒಬ್ಬರಾದ ಸತ್ತೇಗಾಲ ಅಗ್ರಹಾರ ಶಾಲೆ ಶಿಕ್ಷಕಿ ಸರೋಜಮ್ಮ ಮಕ್ಕಳ ಬದುಕು ಹಸನಾಗಲಿ ಎಂಬ ಏಕೈಕ ಉದ್ದೇಶದಿಂದ ನವನವೀನ ವಿಜ್ಞಾನ ಮಾದರಿಗಳನ್ನು ಮಕ್ಕಳಿಗೆ ಕಲಿಸುವ ಕೆಲಸ ಮಾಡುತ್ತಿದ್ದಾರೆ.ಶಿಕ್ಷಣವನ್ನು ಕೇವಲ ಉದ್ಯೋಗವಾಗಿ ನೋಡುವುದಕ್ಕಿಂತ, ವಿದ್ಯಾರ್ಥಿಗಳ ಬದುಕಿನಲ್ಲಿ ನೈಜ ಬದಲಾವಣೆಯನ್ನು ತರಬಲ್ಲ ಜವಾಬ್ದಾರಿಯುತ ಕಾರ್ಯನಿರ್ವಹಣೆ ಸಮಾಜಕ್ಕೆ ಪ್ರೇರಣೆಯಷ್ಟೇ ಅಲ್ಲ, ಅದೊಂದು ಮೈಲುಗಲ್ಲು. ಅಂತಹ ಶೈಕ್ಷಣಿಕ ಸಾಧನೆಯ ಪಯಣದಲ್ಲಿ ಗಮನ ಸೆಳೆಯುವ ಕೆಲಸಮಾಡುತ್ತಾ ರಾಜ್ಯಮಟ್ಟದಲ್ಲೂ ಗಮನ ಸೆಳೆಯುವ ಮೂಲಕ ಶಿಕ್ಷಕರ ದಿನಕ್ಕೆ ರಾಜ್ಯ ಸರ್ಕಾರ ನೀಡುವ ಮೂಲಕ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಅವರ ಬದಲಾವಣೆಯ ಹಾದಿ:
ತಾವೇ ಮೊದಲು ಬದಲಾಗಬೇಕು ಎಂಬ ತತ್ವ. ಸಮಯ ಪಾಲನೆ, ಸ್ವಚ್ಛತೆ, ಪರಿಸರ ಪ್ರೀತಿ - ಇವುಗಳನ್ನು ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಮಾದರಿಯಾಗಿದ್ದಾರೆ.
ಬರೀ ಪುಸ್ತಕದ ಪಾಠವಲ್ಲ, ಆಟದ ಮೂಲಕ ಕಲಿಕೆ, ಕಥೆಗಳ ಮೂಲಕ ನೀತಿ, ಕೈಚಟುವಟಿಕೆ ಮೂಲಕ ವಿಜ್ಞಾನ ಮಾದರಿ ಪ್ರಯೋಗ ಮಾಡಿಸುವ ಮೂಲಕ ಮಕ್ಕಳು ಖುಷಿಯಿಂದ ಶಾಲೆಗೆ ಬರುವಂತೆ ಮಾಡಿದ್ದಾರೆ.
ಹಿಂದುಳಿದ ಮಕ್ಕಳನ್ನು ಗುರುತಿಸಿ, ಅವರ ಮನೆಗೆ ತೆರಳಿ ಪೋಷಕರಿಗೆ ಮನವರಿಕೆ ಮಾಡಿ, ಮತ್ತೆ ಶಾಲೆಗೆ ಕರೆತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಒಟ್ಟಿನಲ್ಲಿ, ಸರೋಜಮ್ಮ ಅವರು ಶಿಕ್ಷಕಿ ಮಾತ್ರವಲ್ಲ, ಮಕ್ಕಳ ಬದುಕನ್ನು ರೂಪಿಸುವ ಶಿಲ್ಪಿ. ಅವರ ಈ ಯಶೋಗಾಥೆ ಇಂದಿನ ಶಿಕ್ಷಕರಿಗೆ ನಿಜಕ್ಕೂ ಸ್ಫೂರ್ತಿದಾಯಕ.
ಸರೋಜಮ್ಮ ಅವರು ಪ್ರಶಸ್ತಿಗಾಗಿ ಕೆಲಸ ಮಾಡಿದವರಲ್ಲ, ಆತ್ಮ ತೃಪ್ತಿಯಿಂದ ಕೆಲಸ ಮಾಡಿದವರು, ನಾಕಂಡಂತೆ ಅವರಿಗೆ ಹಲವು ವರುಷಗಳ ಹಿಂದೇಯೆ ಇಲಾಖೆ ಮುಖ್ಯಶಿಕ್ಷಕರಾಗಿ ಬಡ್ತಿ ನೀಡಿತ್ತು. ಆದರೆ ಬಡ್ತಿ ನಿರಾಕರಿಸಿ ನಾನು ಮಕ್ಕಳ ಪ್ರಗತಿಗಾಗಿ ಸಹಶಿಕ್ಷಕರಾಗಿ ಕೆಲಸ ಮಾಡುವೆ, ಬಡ್ತಿ ಪಡೆದರೆ ಸಮಥ೯ವಾಗಿ ನಾನು ಮಕ್ಕಳ ಪ್ರಗತಿಗೆ ಹೆಚ್ಚಿನ ರೀತಿ ಗಮನ ನೀಡಲಾಗಲ್ಲ, ಗ್ರಾಮೀಣ ಭಾಗದಲ್ಲಿ ಪಾಠ ಮಾಡುವುದೆ ನನಗೆ ತೃಪ್ತಿ ಎಂದು ನನ್ನ ಬಳಿ ಹೇಳಿಕೊಂಡಿದ್ದರು.ಅಂತಹ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ಸಂದಿರುವುದಕ್ಕೆ ನಾನು ವೈಯುಕ್ತಿಕವಾಗಿ ಅಭಿನಂದಿಸುವೆ
ಚಂದ್ರಪಾಟೀಲ್ ಡಿಡಿಪಿಐ, ಚಾ.ನಗರ.