ಹಾನಗಲ್ಲ: ಸರ್ಕಾರ ಹಾಗೂ ಸರ್ಕಾರಿ ನೌಕರರ ಸಹಭಾಗಿತ್ವದಿಂದ ಮಾತ್ರ ರಾಜ್ಯದ ಅಭಿವೃದ್ಧಿಗೆ ಶಕ್ತಿ ತುಂಬಬಲ್ಲದು. ಪ್ರಾಮಾಣಿಕವಾಗಿ ಕರಾಕರಣೆ ನಡೆದರೆ ಮಾತ್ರ ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಶಕ್ತಿ ಬರಲು ಸಾಧ್ಯ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಸೋಮವಾರ ಇಲ್ಲಿನ ಜಗಜೀವನರಾಮ್ ಭವನದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಪ್ರತಿಭಾ ಪುರಸ್ಕಾರ, ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಂವಿಧಾನದಡಿಯಲ್ಲಿ ಸರ್ಕಾರಿ ನೌಕರರಿಗೆ ಹಕ್ಕುಗಳೂ ಇವೆ. ಜವಾಬ್ದಾರಿಗಳೂ ಇವೆ. ಸರ್ಕಾರಿ ನೌಕರರಿಗೆ ನ್ಯಾಯ ಒದಗಿಸಿಕೊಡಲು ಸರ್ಕಾರ ಬದ್ಧವಾಗಿದೆ.
ನೌಕರರು ಕೂಡ ಸರ್ಕಾರದ ಯೋಜನೆಗಳನ್ನು ಸಾಕಾರ ಮಾಡುವ ಸಂಕಲ್ಪ ಮಾಡಬೇಕು. ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ನೌಕರರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಜನಸಾಮಾನ್ಯರ ಕಷ್ಟಕ್ಕೆ ಸಹಕಾರಿಯಾಗಿ. ಹಾನಗಲ್ಲಅನ್ನು ಮಾದರಿ ತಾಲೂಕು ಮಾಡುವ ಸಂಕಲ್ಪಕ್ಕೆ ಕೈಜೋಡಿಸಿ. ಸರ್ಕಾರಿ ನೌಕರರ ಎನ್ಪಿಎಸ್ಗೆ ಮುಕ್ತಿ ದೊರೆತು ಒಪಿಎಸ್ ಮಾಡುವ ಕಾಲ ಸನ್ನಿಹಿತವಾಗಿದೆ. ನಮ್ಮ ಸರ್ಕಾರ ಕೊಟ್ಟ ಬೇಡಿಕೆಗಳೆಲ್ಲವನ್ನೂ ಈಡೇರಿಸಿದೆ. ಈ ಬೇಡಿಕೆಯೂ ಈಡೇರುವುದು ಖಚಿತ ಎಂದರು.ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮುಖ್ಯ ಅತಿಥಿಯಾಗಿ ಮಾತನಾಡಿ, ರಾಜ್ಯದಲ್ಲಿ 5 ಲಕ್ಷ 12 ಸಾವಿರ ಸರ್ಕಾರಿ ನೌಕರರು 6.5 ಕೋಟಿ ಜನರಿಗೆ ಸರ್ಕಾರಿ ಸೇವೆ ಸಲ್ಲಿಸುವ ಅನಿವಾರ್ಯತೆಯಲ್ಲಿದ್ದೇವೆ. ಜನಸಂಖ್ಯೆ ಹೆಚ್ಚಿದೆ. ಅದಕ್ಕೆ ತಕ್ಕಂತೆ ನೌಕರರಿಲ್ಲ. ನಿವೃತ್ತರ ಕೆಲಸವೂ ಸೇರಿ ಇಬ್ಬರು ಮೂವರ ಕೆಲಸವನ್ನು ನಾವು ಒಬ್ಬೊಬ್ಬರೇ ತೀರ ಒತ್ತಡದಲ್ಲಿ ಮಾಡಬೇಕಾಗಿದೆ.ರಾಜ್ಯದ ಶಿಕ್ಷಕರಂತೂ ಪಾಠದ ಜತೆಗೆ ಸರ್ಕಾರದ ಯೋಜನೆಗಳನ್ನು ಜಾರಿ ಮಾಡಲು ಹೆಣಗಾಡುವಂತಾಗಿದೆ. ಆದಾಗ್ಯೂ ರಾಜ್ಯ ಸರ್ಕಾರ ನಮ್ಮ ಸಂಕಷ್ಟಕ್ಕೆ ಸ್ಪಂದಿಸಿದೆ. ಸರ್ಕಾರಿ ನೌಕರರಿಗೆ ₹1.25 ಕೋಟಿ ಅಪಘಾತ ವಿಮೆ ಜಾರಿಗೆ ತರುತ್ತಿದೆ. 7ನೇ ವೇತನ ಆಯೋಗ ಜಾರಿ ಮಾಡಿದೆ. ಕೆಜಿಐಡಿ ಸಾಲ ಸರಳೀಕರಣವಾಗಿದೆ. ಫೆಸ್ಟಿವಲ್ ಅಡ್ವಾನ್ಸ ₹50 ಸಾವಿರಕ್ಕೆ ಏರಲಿದೆ. ಆರೋಗ್ಯದತ್ತ ನೌಕರರು ಆದ್ಯತೆ ನೀಡಿ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗುರುನಾಥ ಗವಾಣಿಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ಬೆಳಗಾಂವ ಜಿಲ್ಲಾಧ್ಯಕ್ಷ ಬಸವರಾಜ ರಾಯಗೋಳ, ಶಿಗ್ಗಾಂವಿ ತಾಲೂಕು ಆಧ್ಯಕ್ಷ ಅರುಣ ಹುಡೇದಗೌಡ್ರ, ರಾಣಿಬೆನ್ನೂರು ತಾಲೂಕು ಅಧ್ಯಕ್ಷ ಮಂಜುನಾಥ ಕೆಂಚರಡ್ಡಿ, ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಉಪಾಧ್ಯಕ್ಷೆ ವೀಣಾ ಗುಡಿ, ತಹಸೀಲ್ದಾರ್ ಎಸ್. ರೇಣುಕಾ, ಶಿಗ್ಗಾಂವಿ ತಹಸೀಲ್ದಾರ್ ರವಿ ಕೊರವರ, ಪರಶುರಾಮ ಪೂಜಾರ, ಗಂಗಾ ಹಿರೇಮಠ, ಸಿ.ಜಿ. ಪಾಟೀಲ, ಬಿ.ಎಸ್. ಚಲ್ಲಾಳ, ಎಂ.ಎಸ್. ಗುಂಡಪಲ್ಲಿ, ಅನಿತಾ ಕಿತ್ತೂರ, ವಿ.ಬಿ. ಚಿಕ್ಕೇರಿ, ಎಸ್.ಇ. ನರೇಗಲ್ಲ, ಡಿ.ಡಿ. ಲಂಗೋಟಿ, ಡಾ. ಲಿಂಗರಾಜ, ಎಸ್.ಎಸ್. ನಿಸ್ಸೀಮಗೌಡರ ವೇದಿಕೆಯಲ್ಲಿದ್ದರು. ಬಾಲಚಂದ್ರ ಅಂಬಿಗೇರ, ಜಗದೀಶ ಮಡಿವಾಳರ ಸಂಗಡಿಗರು ಪ್ರಾರ್ಥನೆ ಹಾಗೂ ನಾಡಗೀತೆ ಹಾಡಿದರು. ವೀರಪ್ಪ ಕರೆಗೊಂಡರ ಸ್ವಾಗತಿಸಿದರು. ಸರ್ಕಾರಿ ನೌಕರರಿಗೆ ಒಪಿಎಸ್ ಜಾರಿ ಖಚಿತಹಾನಗಲ್ಲ: ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ ಬದಲಾಯಿಸಿ ಹಳೆ ಪಿಂಚಣಿ ಯೋಜನೆ ನೀಡುವ ಕಾರ್ಯ ಸರ್ಕಾರದಲ್ಲಿ ಭರದಿಂದ ನಡೆದಿದ್ದು, ನೌಕರರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಹಾಗೂ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಒಂದೇ ವೇದಿಕೆಯಲ್ಲಿ ನುಡಿದರು.ಸೋಮವಾರ ಸರ್ಕಾರಿ ನೌಕರರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀನಿವಾಸ ಮಾನೆ, ಸಿಎಂ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಚಾಚೂ ತಪ್ಪದೆ ಈಡೇರಿಸಿದೆ. ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಒಪಿಎಸ್ ಸಮಸ್ಯೆ ಪರಿಹರಿಸಲು ಸರ್ಕಾರದಲ್ಲಿ ಎಲ್ಲ ಸಿದ್ಧತೆ ನಡಿದಿದೆ. ಒಪಿಎಸ್ ಸೌಲಭ್ಯ ಖಚಿತ. ನಮ್ಮ ಮೇಲೆ ವಿಶ್ವಾಸವಿಡಿ ಎಂದರು.
ನಂತರ ಮಾತನಾಡಿದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ, ಶಾಸಕರು ಹೇಳಿದ್ದು ಸರಿ ಇದೆ. ಸಿದ್ದರಾಮಯ್ಯ ಸರ್ಕಾರ ನೌಕರರಿಗಾಗಿ ಎಲ್ಲ ರೀತಿಯ ಸೌಲಭ್ಯ ಸಹಕಾರ ನೀಡುತ್ತಿದೆ. ಎನ್ಪಿಎಸ್ ಬದಲಿಗೆ ಒಪಿಎಸ್ ಜಾರಿ ಆಗುವುದು ಖಚಿತ. ನಮ್ಮನ್ನು ನಂಬಿ. ಸರ್ಕಾರದ ಮೇಲೆ ವಿಶ್ವಾಸವಿಡಿ ಎಂದರು.