ಜೀವನದಲ್ಲಿ ಸ್ವಚ್ಛ ಕನ್ನಡ ಬಳಸಿ: ಸುಬ್ರಾಯ ಸಂಪಾಜೆ

KannadaprabhaNewsNetwork |  
Published : Jun 23, 2025, 11:48 PM IST
21-ಎನ್ಪಿ ಕೆ-1.ಕೊಡಗಿನ ಸಮರ್ಥ ಕನ್ನಡಿಗರು ಬಳಗದ ವತಿಯಿಂದ ಮಡಿಕೇರಿ ಲಯನ್ಸ್ ಸಭಾಂಗಣದಲ್ಲಿ ಬಾನುಲಿ ಸೇವೆಗಾಗಿ ಮಡಿಕೇರಿ ಆಕಾಶವಾಣಿ ಕೇಂದ್ರದ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಗೆ ಗೌರವ ಸನ್ಮಾನ. | Kannada Prabha

ಸಾರಾಂಶ

ಮನೆ, ವ್ಯವಹಾರ, ಬೋಧನೆ ಮತ್ತು ಜೀವನದ ಎಲ್ಲ ಕ್ಷೇತ್ರಗಳಲ್ಲೂ ನಾವು ಸ್ವಚ್ಛ ಕನ್ನಡವನ್ನು ಬಳಸಬೇಕು ಎಂದು ಗಣ್ಯರು ತಿಳಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಮನೆ, ವ್ಯವಹಾರ, ಬೋಧನೆ ಮತ್ತು ಜೀವನದ ಎಲ್ಲ ಕ್ಷೇತ್ರಗಳಲ್ಲೂ ನಾವು ಸ್ವಚ್ಛ ಕನ್ನಡವನ್ನು ಬಳಸಬೇಕು. ‌ಹಾಗೆ ಬಳಸಿದರೆ ಮಾತ್ರ ಕನ್ನಡ ಉಳಿದೀತು. ಮಾತೃಭಾಷೆಯ ಗೌರವ ಉಳಿಸುವಲ್ಲಿ ತಾಯಂದಿರ ಪಾತ್ರ ಮಹತ್ವಪೂರ್ಣವಾದುದು ಎಂದು ಮಡಿಕೇರಿ ಆಕಾಶವಾಣಿ ಕೇಂದ್ರದ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಅವರು ನುಡಿದರು.

ಕೊಡಗಿನ ಸಮರ್ಥ ಕನ್ನಡಿಗರು ಬಳಗದ ವತಿಯಿಂದ ಮಡಿಕೇರಿ ಲಯನ್ಸ್ ಸಭಾಂಗಣದಲ್ಲಿ ಬಾನುಲಿ ಸೇವೆಗಾಗಿ ತನಗೆ ನೀಡಿದ ಗೌರವ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಕನ್ನಡ ಇಂದು ಉಳಿದಿರುವುದು ತಾಯಂದಿರಿಂದ ಇಂಥ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಮಹಿಳೆಯರು ತಮ್ಮ ಹಲವು ಬೇನೆ ಬೇಸರಗಳನ್ನು ಮರೆಯುತ್ತಾರೆ. ಜೊತೆಗೆ ನಾಡು ನುಡಿಯ ಮಹತ್ವದ ಬಗ್ಗೆ ಅರಿವು ಬೆಳೆಸಿಕೊಳ್ಳಲು, ಅದು ಮನೆ ಮಕ್ಕಳಲ್ಲಿ ಹಂಚಿ ಮುಂದುವರಿಯಲು ಕಾರಣರಾಗುತ್ತಿದ್ದಾರೆ‌. ಇದು ಸಣ್ಣ ಕೆಲಸವಲ್ಲ ಎಂದು ಸಂಪಾಜೆ ನುಡಿದರು.

ಮೂರು ದಶಕಗಳ ರೇಡಿಯೋ ಸೇವೆಗಾಗಿ ಸುಬ್ರಾಯ ಸಂಪಾಜೆ ಅವರನ್ನು ಪತ್ನಿ ಸಹಿತ ಶಾಲು ಹೊದಿಸಿ ಸನ್ಮಾನಿಸಿದ ಹಿರಿಯರಾದ ಅಂಬೆಕಲ್ಲು ಸುಶೀಲ ಕುಶಾಲಪ್ಪ ಅವರು ಮಾತನಾಡಿ, "ಜಿಲ್ಲೆಯ ಮೂಲೆಮೂಲೆಗಳಲ್ಲಿರುವ ಪ್ರತಿಭೆಗಳಿಗೆ ಆಕಾಶವಾಣಿ ಮಾಧ್ಯಮ ಹೊರ ಜಗತ್ತಿನ ಬೆಳಕು ಕಾಣಿಸಿದೆ. ಈ ಕೆಲಸ ನಿರಂತರ ನಡೆಯುತ್ತಿರಬೇಕು ಎಂದು ಮೆಚ್ಚು ನುಡಿಯಾಡಿದರು.

ಚಿತ್ರಾ ಆರ್ಯನ್ ಅವರು ಪ್ರಾರ್ಥಿಸಿದರು. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಹಾಗೂ ಸಮರ್ಥ ಕನ್ನಡಿಗರು ಬಳಗದ ಸಕ್ರಿಯ ಸದಸ್ಯೆ ಕಡ್ಳೇರ ತುಳಸಿ ಮೋಹನ್ ಅವರು ಅತಿಥಿಗಳನ್ನು ಪರಿಚಯಿಸಿದರು.

ಈ ಸಂದರ್ಭ ಕೊಡಗು ಜಿಲ್ಲೆಯ ಸಮರ್ಥ ಕನ್ನಡಿಗರು ಬಳಗದಿಂದ ಏರ್ಪಡಿಸಿದ್ದ ಬಹುಭಾಷಾ ಗೀತ ಗಾಯನ ಎಲ್ಲರ ಮನ ಸೆಳೆಯಿತು. ಬಳಗದ ಪ್ರಧಾನ ಸಂಚಾಲಕಿ ಹಾಗೂ ಸನ್ಮಾನ ಕಾರ್ಯಕ್ರಮದ ಸಂಯೋಜಕಿ ಕೆ.ಜಯಲಕ್ಷ್ಮಿ ಅವರು ಸರ್ವರನ್ನೂ ಸ್ವಾಗತಿಸಿ ಕೊನೆಗೆ ವಂದಿಸಿದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ