ರಾಜ್ಯದಲ್ಲಿರೋದು ಎಫ್‌ಐಆರ್ ಸರ್ಕಾರ: ರವಿಕುಮಾರ್ ಕಿಡಿ

KannadaprabhaNewsNetwork | Published : Jun 3, 2025 12:31 AM
ಬಿಜೆಪಿಯ ಕಲಬುರಗಿ ಚಲೋ ಹೋರಾಟದ ಯಶಸ್ಸು ಮುಚ್ಚಿ ಹಾಕಲು ನನ್ನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿದೆ ಎಂದು ಬಿಜೆಪಿ ಎಂ ಎಲ್ ಸಿ, ವಿಪಕಕ್ಷ ಮುಖ್ಯ ಸಚೇತಕ ರವಿಕುಮಾರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಬಿಜೆಪಿಯ ಕಲಬುರಗಿ ಚಲೋ ಹೋರಾಟದ ಯಶಸ್ಸು ಮುಚ್ಚಿ ಹಾಕಲು ನನ್ನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿದೆ ಎಂದು ಬಿಜೆಪಿ ಎಂ ಎಲ್ ಸಿ, ವಿಪಕಕ್ಷ ಮುಖ್ಯ ಸಚೇತಕ ರವಿಕುಮಾರ್ ಹೇಳಿದ್ದಾರೆ.

ಇಲ್ಲಿನ ಎಸಿಪಿ ಕಚೇರಿಯಲ್ಲಿ ಸತತ 5 ಗಂಟೆಗಳ ವಿಚಾರಣೆ ಎದುರಿಸಿ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತಾಡಿದರು.

ಕಲಬುರಗಿ ಚಲೋ ಹೋರಾಟ ಯಶಸ್ವಿಯಾಗಿ ಮಾಡಿದ್ದೀವಿ, ಹೋರಾಟದ ಯಶಸ್ಸು ಮುಚ್ಚಿ ಹಾಕಲು ಈ ರೀತಿಯ ಯತ್ನ ಮಾಡುತ್ತಿದ್ದಾರೆ ಎಂದರು.

ಛಲವಾದಿ ನಾರಾಯಣಸ್ವಾಮಿ ಅವರನ್ನು ಐದು ಗಂಟೆಗಳ ಕಾಲ ಚಿತ್ತಾಪೂರ ಐಬಿನಲ್ಲಿ ದಿಗ್ಬಂಧನ ಹಾಕಲಾಯಿತು ದೇಶದಲ್ಲಿ ಯಾವ ಪ್ರತಿಪಕ್ಷ ನಾಯಕನನ್ನು ಈ ರೀತಿ ಇಟ್ಟ ಉದಾಹರಣೆಯೇ ಇಲ್ಲ ಮಾತೆತ್ತಿದರೆ ಸಮಾಜವಾದ, ಸಂವಿಧಾನ, ಅಂಬೇಡ್ಕರ್ ಎನ್ನುವ ಸಿದ್ದರಾಮಯ್ಯ ಸರಕಾರ ಐದು ಗಂಟೆ ದಿಗ್ಬಂಧನದಲ್ಲಿ ಇಟ್ಟಿದ್ದು ಎಷ್ಟು ಸರಿ? ಎಂದು ರವಿಕುಮಾರ್ ಖಾರವಾಗಿ ಪ್ರಶ್ನಿಸಿದರು. ಹೈಕೋರ್ಟ್‌ ಸ್ಪಷ್ಟ ನಿರ್ದೇಶನದ ಹಿನ್ನಲೆಯಲ್ಲಿ ನಾನು ಇಂದು ವಿಚಾರಣೆಗೆ ಬಂದಿದ್ದೇನೆ ವಿಚಾರಣೆ ವೇಳೆ ಬಹಳ ಸಮಾಧಾನದಿಂದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ ಎಂದರು.

ಸಂವಿಧಾನದಲ್ಲಿ, ನ್ಯಾಯಾಂಗದಲ್ಲಿ, ಕಾರ್ಯಾಂಗದಲ್ಲಿ ನಂಬಿಕೆ ಇಟ್ಟಿರುವ ಕಾರಣ ಪೂರ್ಣ ಸಹಕಾರ ನೀಡಿದ್ದೇನೆ. ಡೀಸಿ ಅವರ ಬಗ್ಗೆ ಭಾಷಣ ಮಾಡಿದ್ದು ಹೌದು ಎಂದಿದ್ದೇನೆ.

ಪಾಕಿಸ್ತಾನ ಅರಾಜಕತೆಗೆ ಮತ್ತೊಂದು ಉದಾಹರಣೆಯಾಗಿದೆ. ಅವ್ಯವಸ್ಥೆ, ದುರಾಡಳಿತಕ್ಕೆ ಸಾಕ್ಷಿಯಾಗಿ ಪಾಕಿಸ್ತಾನವನ್ನು ಹೋಲಿಕೆ ಮಾಡಿದ್ದೇನೆ

ನನಗೆ ಇಲ್ಲಿನ ಡೀಸಿ ಹೆಸರೇ ಗೊತ್ತಿರಲಿಲ್ಲ. ಮರುದಿನ ಗೊತ್ತಾಯಿತು.‌ ಅಚಾತುರ್ಯದ ಅರಿವಾಗಿ ಕ್ಷಮೆ ಕೇಳಿದ್ದೇನೆ ಎಂದು ರವಿಕುಮಾರ್ ಹೇಳಿದ್ದಾರೆ.

ಆದರೆ ಇದು ಅಟ್ರಾಸಿಟಿ ಕೇಸ್ ಹೆಂಗೆ ಆಗುತ್ತೋ ಗೊತ್ತಿಲ್ಲ ಯಾರಿಗೂ ಎಸ್ಸಿ ಅಂತ ನಾನು ಬೈದಿಲ್ಲ. ಅಥವಾ ಅಟ್ರಾಸಿಟಿ ಕಾಯ್ದೆ ಅಪ್ಲೈ ಆಗುವಂತಹ ಯಾವುದೇ ಶಬ್ದ ನಾನು ಹೇಳಿಲ್ಲ ಎಂದರು.

ನಮ್ಮ ಹೇಳಿಕೆಯಲ್ಲಿ ಯಾವುದೇ ರೀತಿಯ ದುರುದ್ದೇಶ ಇರಲಿಲ್ಲ. ನನ್ನ ಭಾಷಣದ ಪೂರ್ಣ ವಿಡಿಯೋ ರಿಕಾರ್ಡಿಂಗ್ ಇದೆ ನೋಡಿಕೊಳ್ಳಲಿ ಎಂದರು.

ನನ್ನ ಮೇಲೆ ಅಟ್ರಾಸಿಟಿ ಕೇಸ್ ಹಾಕಿದ್ದು ಸುಳ್ಳು ಕೇಸ್, ಈ ಸರಕಾರ ಎಫ್ ಐ ಆರ್ ಸರಕಾರ ಆಗಿದೆ, ರಾಜಕೀಯವಾಗಿ ಮಾತನಾಡುವವರ ವಿರುದ್ದ ಎಫ್ ಐ ಆರ್ ಮಾಡುವುದೇ ಇವರ ಕೆಲಸ ಆಗಿದೆ ಎಂದು ಟೀಕಿಸಿದರು. ಈ ಸರಕಾರದ ವೈಫಲ್ಯದ ವಿರುದ್ದ, ಜನರ ಸಮಸ್ಯೆಗಳ ಪರಿಹಾರಕ್ಕಾಗಿ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ರವಿಕುಮಾರ್ ಸ್ಪಷ್ಟ ಪಡಿಸಿದರು.