ರಾಜ್ಯ ಸರ್ಕಾರ ರೈತರನ್ನು ಕಡೆಗಣಿಸಿದೆ: ಹುಣಸಿಮರದ ಆರೋಪ

KannadaprabhaNewsNetwork |  
Published : Aug 01, 2025, 12:30 AM IST
ಗುರುರಾಜ ಹುಣಸಿಮರದ. | Kannada Prabha

ಸಾರಾಂಶ

ಇನ್ನು, ಜಿಲ್ಲಾ ಉಸ್ತುವಾರಿ ಸಚಿವರು ಹದಿನೈದು ದಿನಗಳಿಗೊಮ್ಮೆ ಧಾರವಾಡಕ್ಕೆ ಬಂದು ಸರ್ಕಾರದ ಎಲ್ಲ ಇಲಾಖೆಗಳ ಅಧಿಕಾರಿಗಳ ಗುಂಪು ಕಟ್ಟಿಕೊಂಡು ಅತ್ತಿಂದಿತ್ತ ಅಲೆದಾಡುತ್ತಾರೆ. ಹತ್ತಾರು ಸಭೆ ಮಾಡಿಯೂ ಜಿಲ್ಲೆಯ ಅಭಿವೃದ್ಧಿ ಶೂನ್ಯ.

ಧಾರವಾಡ: ಬರೀ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವುದು ಹಾಗೂ ಅದಕ್ಕಾಗಿಯೇ ಸಮಯ ಕಳೆಯುತ್ತಿರುವ ರಾಜ್ಯ ಸರ್ಕಾರ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಈ ಬಾರಿ ಉತ್ತಮ ಮಳೆ ಇದ್ದು, ಹೆಚ್ಚಿನ ಬಿತ್ತನೆಯಾಗಲಿದೆ ಎಂದು ಗೊತ್ತಿದ್ದರೂ ರಸಗೊಬ್ಬರ ಸಿದ್ಧತೆ ಮಾಡಿಕೊಳ್ಳದೇ ನಿರ್ಲಕ್ಷ್ಯ ಮಾಡಿದ್ದು, ಇದೀಗ ರೈತರು ಯೂರಿಯಾ ಗೊಬ್ಬರಕ್ಕೆ ಪರದಾಡುತ್ತಿದೆ ಎಂದು ಜೆಡಿಎಸ್‌ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಗಾಲ ಹಾಗೂ ಮುಂಗಾರು ಬಿತ್ತನೆ ಹಿನ್ನೆಲೆಯಲ್ಲಿ ಸರಿಯಾಗಿ ರಸಗೊಬ್ಬರ, ಬೀಜದ ದಾಸ್ತಾನು ಹಾಗೂ ಹಂಚಿಕೆ ಮಾಡಬೇಕಿತ್ತು. ಗೊಬ್ಬರ, ಬೀಜಗಳ ಮೇಲೆ ಸರ್ಕಾರದ ಮೇಲೆ ಸರಿಯಾದ ಹತೋಟಿ ಇರದ ಹಿನ್ನೆಲೆಯಲ್ಲಿ ಕೆಲವೇ ಕೆಲವರು ಹೆಚ್ಚಿನ ರಸಗೊಬ್ಬರ ಒಯ್ದ ಹಿನ್ನೆಲೆಯಲ್ಲಿ ಸಾಮಾನ್ಯ ರೈತರಿಗೆ ಯೂರಿಯಾ ಕೊರತೆ ಕಂಡು ಬಂದಿದೆ. ರೈತರಿಗೆಲ್ಲರಿಗೂ ಬೇಕಾದಷ್ಟು ಗೊಬ್ಬರ ನೀಡಲು ರಾಜ್ಯ ಸರ್ಕಾರ ವಿಫಲವಾಗಿದ್ದು, ಅನವಶ್ಯಕವಾಗಿ ಕೇಂದ್ರ ಸರ್ಕಾರ ಯೂರಿಯಾ ಪೂರೈಸಿಲ್ಲ ಎಂದು ನೆಪ ಹೇಳುತ್ತಿದೆ ಎಂದರು.

ಇನ್ನು, ಜಿಲ್ಲಾ ಉಸ್ತುವಾರಿ ಸಚಿವರು ಹದಿನೈದು ದಿನಗಳಿಗೊಮ್ಮೆ ಧಾರವಾಡಕ್ಕೆ ಬಂದು ಸರ್ಕಾರದ ಎಲ್ಲ ಇಲಾಖೆಗಳ ಅಧಿಕಾರಿಗಳ ಗುಂಪು ಕಟ್ಟಿಕೊಂಡು ಅತ್ತಿಂದಿತ್ತ ಅಲೆದಾಡುತ್ತಾರೆ. ಹತ್ತಾರು ಸಭೆ ಮಾಡಿಯೂ ಜಿಲ್ಲೆಯ ಅಭಿವೃದ್ಧಿ ಶೂನ್ಯ. ಒಂದೂ ರಸ್ತೆ ಸರಿಯಿಲ್ಲ. ಆರೇಳು ದಿನಗಳಿಗೊಮ್ಮೆ ಕುಡಿಯುವ ನೀರು ಬರುತ್ತಿದೆ. ಸರಿಯಾಗಿ ಬೆಳೆವಿಮೆ ಬಂದಿಲ್ಲ, ಬೆಳೆಹಾನಿಗೆ ಪರಿಹಾರವೂ ಬಂದಿಲ್ಲ. ಸರ್ಕಾರಿ ಇಲಾಖೆ ಅಧಿಕಾರಿಗಳು ಸರಿಯಾಗಿ ಕಚೇರಿಯಲ್ಲಿ ಜನಸಾಮಾನ್ಯರಿಗೆ ಲಭ್ಯವಾಗುತ್ತಿಲ್ಲ. ಆಡಳಿತದ ಮೇಲೆ ಹಿಡಿತ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾರುತಿ ಹಿಂಡಸಗೇರಿ, ಭೀಮರಾಜ ಗುಡೇನಕಟ್ಟಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ