ಕನ್ನಡಪ್ರಭ ವಾರ್ತೆ ಸಾಲಿಗ್ರಾಮರಾಜ್ಯ ಕಾಂಗ್ರೆಸ್ ತನಗೆ ಮತ ಕೊಟ್ಟ ಮತದಾರರ ಬಗ್ಗೆ ಭಯ ಭಕ್ತಿ ಇಲ್ಲದಾಗಿದೆ. ಕಳೆದ ಮೂರು ವರ್ಷದಲ್ಲಿ ಅನ್ನದಾತನ ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಸಮೀಪದ ಮಾರಗೌಡನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ರಾಜ್ಯದ ಸಹಸ್ರಾರು ರೈತರು ಬೆಂಬಲ ಬೆಲೆ ಯೋಜನೆ ಅಡಿ ಮಾರಾಟ ಮಾಡಿರುವ ರಾಗಿ ಹಣವನ್ನು ಮೂರು ನಾಲ್ಕು ತಿಂಗಳು ಕಳೆದರೂ ನೀಡಲು ಸಾಧ್ಯವಾಗಿಲ್ಲ. ಇದು ರೈತ ವಿರೋಧಿ ಸರ್ಕಾರ ಎಂದು ಕಿಡಿಕಾರಿದರು. ಕೇಂದ್ರ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ರೈತರ ಪರವಿದ್ದು, ಸಂಕಷ್ಟದಲ್ಲಿದ್ದ ಮಾವು ಬೆಳೆಗಾರರಿಗೆ ನೆರವು ಘೋಷಣೆ ಮಾಡಿದೆ. ನನ್ನ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕ್ವಿಂಟಲ್ ಮಾವಿಗೆ 1,750 ರು. ಸಹಾಯಧನ ಘೋಷಣೆ ಮಾಡಿದ್ದಾರೆ. ಸಂಕಷ್ಟದಲ್ಲಿರುವ ಮಾವು ಬೆಳೆಗಾರರಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರ ಬಿಡುಗಡೇ ಮಾಡಬೇಕು ಎಂದು ಒತ್ತಾಯಿಸಿದರು. ರಾಜ್ಯದ ತಂಬಾಕು ಬೆಳೆಗಾರರಿಗೂ ಸಮಸ್ಯೆ ಎದುರಾಗಿದ್ದು, ಬೆಳೆ ಪ್ರಮಾಣ ಕಡಿತ ಸಂಬಂಧ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಹೀಗಾಗಿ ಕೆಲ ರೈತರಿಗೆ ತೊಂದರೆಯಾಗಿದ್ದು, ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.ಕೇಂದ್ರ ಸಚಿವನಾಗಿ ನಾನು ಅನಿವಾರ್ಯವಾಗಿ ದೇಶಾದ್ಯಂತ ಪ್ರವಾಸ ಮಾಡಬೇಕಿರುವುದರಿಂದ ರಾಜ್ಯದಲ್ಲಿ ಎಲ್ಲರ ಸಂಪರ್ಕಕ್ಕೆ ಸಿಗಲು ಸಾಧ್ಯವಾಗುತ್ತಿಲ್ಲ . ಆದರೂ ಮಂಡ್ಯ ಲೋಕಸಭಾ ಕ್ಷೇತ್ರವಲ್ಲದೆ ರಾಜ್ಯದ ಹಲವು ಜಿಲ್ಲೆಗಳ ಜನರ ಸಂಕಷ್ಟಕ್ಕೆ ಸಾಧ್ಯವಾದಷ್ಟು ಸ್ಪಂದಿಸುತ್ತಿದ್ದೇನೆ ಎಂದರು.ಸಾ.ರಾ. ಸ್ನೇಹ ಬಳಗದಿಂದ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಉಚಿತವಾಗಿ ನೀಡಲಾಗುವ ನೋಟ್ ಬುಕ್ ಅನ್ನು ಈ ವೇಳೆ ಸಚಿವರು ಬಿಡುಗಡೆ ಮಾಡಿದರು.ಮಾಜಿ ಸಚಿವ ಸಾ.ರಾ .ಮಹೇಶ್, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್ ನಂಜಪ್ಪ ಮುಖಂಡರಾದ ಎಂ.ಟಿ. ಕುಮಾರ್, ಎಚ್.ಎನ್. ರಮೇಶ್ ,ಚಂದ್ರಶೇಖರ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೇ ನಂದಿನಿ ರಮೇಶ್, ಬೆನಗನಹಳ್ಳಿ ಪ್ರಸನ್ನ, ಸಾ.ರಾ. ಸ್ನೇಹ ಬಳಗದ ಕಾರ್ಯದರ್ಶಿ ಆನಂದ್, ನಿರ್ದೇಶಕರಾದ ದೀಪು, ಮಹೇಶ್, ನೂರಾರು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಇದ್ದರು.