ಕನ್ನಡಪ್ರಭವಾರ್ತೆ ನಾಗಮಂಗಲ
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀಕ್ಷೇತ್ರದಲ್ಲಿ ಎರಡು ದಿನಗಳ ಕಾಲ ನಡೆಯುವ ವಿಜ್ಞಾತಂ ಉತ್ಸವದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಸ್ಥಾಪಿತವಾಗಿರುವ ಆದಿಚುಂಚನಗಿರಿ ವಿಶ್ವವಿದ್ಯಾಲಯದ ೧೧ ಅಂಗ ಸಂಸ್ಥೆಗಳು ಸೇರಿದಂತೆ ನಮ್ಮ ಸಂಸ್ಥೆಯ ಸುಮಾರು ೪೮ ಶಿಕ್ಷಣ ಸಂಸ್ಥೆಗಳು ಹಾಗೂ ಹೊರಗಿನ ವಿವಿಧ ಪ್ರತಿಷ್ಠಿತ ಕಾಲೇಜು ಹಾಗೂ ಸರ್ಕಾರಿ ಸಂಸ್ಥೆಗಳಾದ ಇಸ್ರೋ, ಎಚ್ಎಎಲ್, ಡಿಆರ್ಡಿಒ, ವಿಶ್ವೇಶ್ವರಯ್ಯ ಇಂಡಸ್ಟ್ರೀಯಲ್ ಅಂಡ್ ಟೆಕ್ನಾಲಜಿ ಮ್ಯೂಸಿಯಂ, ಆಧ್ಯಾತ್ಮಿಕ ಕೇಂದ್ರಗಳು, ರಾಜ್ಯದ ವಿವಿಧ ಭಾಗಗಳಿಂದ ಪಾಲ್ಗೊಂಡು ೨೫೦ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ವಿಚಾರಗಳ ಮಾದರಿಯನ್ನು ಪ್ರದರ್ಶಿಸಲಿದ್ದಾರೆ ಎಂದರು.
ಫೆ.೧೯ರಂದು ಮೇಳಕ್ಕೆ ಚಾಲನೆ:ಫೆ.೧೯ರ ಬೆಳಿಗ್ಗೆ ೧೦ ಗಂಟೆಗೆ ಶ್ರೀಮಠದ ಬಿಜಿಎಸ್ ಸಭಾ ಭವನದಲ್ಲಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಜರುಗುವ ವಿಜ್ಞಾತಂ ಉತ್ಸವ, ವಸ್ತು ಪ್ರದರ್ಶನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥಸ್ವಾಮೀಜಿ ಹಾಗೂ ಮಲೆಮಹದೇಶ್ವರಬೆಟ್ಟದ ಶ್ರೀ ಸಾಲೂರು ಬೃಹನ್ಮಠದ ಪೀಠಾಧ್ಯಕ್ಷ ಶಾಂತಮಲ್ಲಿಕಾರ್ಜುನ ಶ್ರೀಗಳು ದಿವ್ಯ ಸಾನಿಧ್ಯ ವಹಿಸುವರು ಎಂದರು
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ವಿಜ್ಞಾತಂ ಉತ್ಸವವನ್ನು ಉದ್ಘಾಟಿಸುವರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಖ್ಯಾತ ವಿಜ್ಞಾನಿ ಡಾ.ಕೆ. ಮುನಿಯಪ್ಪ ಅವರು ವಸ್ತುಪ್ರದರ್ಶನ ಉದ್ಘಾಟಿಸುವರು. ಮಂಡ್ಯ ಶಾಸಕ ರವಿಕುಮಾರ್ ಗಣಿಗ, ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್, ಮಾಜಿ ಶಾಸಕ ಸುರೇಶ್ಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ರಕ್ಷಣೆ ಮತ್ತು ಏರೋಸ್ಟೇಸ್ ವಿಶ್ಲೇಷಕ ಗಿರೀಶ್ ಲಿಂಗಣ್ಣ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.ವೇದಿಕೆ ಸಮಾರಂಭದ ನಂತರ ಭಗವದ್ಗೀತೆಯಲ್ಲಿ ಮನೋವಿಜ್ಞಾನ ವಿಷಯ ಕುರಿತು ಮೂರು ವಿಶೇಷ ಉಪನ್ಯಾಸಗಳು ನಡೆಯಲಿವೆ. ಅಂದು ಸಂಜೆ ೫.೩೦ಕ್ಕೆ ನಡೆಯುವ ವಿಜ್ಞಾತಂ ಕಲೋತ್ಸವದಲ್ಲಿ ಶ್ರೀರಂಗಪಟ್ಟಣದ ಚಂದ್ರವನ ಬೇಬಿಮಠದ ಪೀಠಾಧ್ಯಕ್ಷ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಹಾಗೂ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಪಾಲ್ಗೊಳ್ಳುವರು.
ಶ್ರೀಗಳಿಗೆ ಪಟ್ಟಾಭೀಷೇಕ:ಫೆ.೨೦ರ ಬೆಳಿಗ್ಗೆ ೧೦.೩೦ಕ್ಕೆ ಶ್ರೀಮಠದ ಬಿಜಿಎಸ್ ಸಭಾಭವನದಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಅವರ ಸಮ್ಮುಖದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಅವರಿಗೆ ೧೩ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಹಾಗೂ ವಿಜ್ಞಾತಂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಮಾರಂಭ ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ವಿಜ್ಞಾತಂ ಸಂಚಯ-೪ ಬಿಡುಗಡೆ ಮಾಡುವರು. ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಜಿಪಂ ಸಿಇಒ ಕೆ.ಆರ್.ನಂದಿನಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಡಾ.ಎಂ.ಕೆ.ಸೂರಪ್ಪಗೆ ವಿಜ್ಞಾತಂ ಪ್ರಶಸ್ತಿ ಪ್ರದಾನ:
ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಉನ್ನತ ಶಿಕ್ಷಣ, ತಾಂತ್ರಿಕ ನಾವಿನ್ಯಗಳ ಮೂಲಕ ಉತ್ಕೃಷ್ಠ ಹಾಗೂ ಶಾಶ್ವತವಾದ ಕೊಡುಗೆ ನೀಡಿರುವ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಮಿರ್ಲೆ ಗ್ರಾಮದ ಖ್ಯಾತ ವಿಜ್ಞಾನಿ ಹಾಗೂ ದಕ್ಷ ಆಡಳಿತಗಾರ ಡಾ.ಎಂ.ಕೆ.ಸೂರಪ್ಪ ಅವರಿಗೆ ೫ ಲಕ್ಷ ರು.ನಗದು ಹಾಗೂ ಪ್ರಶಸ್ತಿ ಪದಕವನ್ನೊಳಗೊಂಡ ಈ ವರ್ಷದ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದರು.ಶಿಕ್ಷಣ ಟ್ರಸ್ಟ್ನ ರಿಜಿಸ್ಟ್ರಾರ್ ಚಂದ್ರೇಗೌಡ, ಪಟ್ಟಣದ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೇಯಸ್ ಕೃಷ್ಣ, ಕಾಲೇಜು ಸಮಿತಿ ಸದಸ್ಯ ಎಚ್.ಟಿ.ಕೃಷ್ಣೇಗೌಡ, ಸಿಇಓ ಕಚೇರಿಯ ಸುಚೇತನ್ಕುಮಾರ್ ಗೋಷ್ಠಿಯಲ್ಲಿದ್ದರು.ಡಾ.ಎಂ.ಕೆ.ಸೂರಪ್ಪ ಪರಿಚಯ
ನುರಿತ ಶಿಕ್ಷಣ ತಜ್ಞ, ದೂರದೃಷ್ಟಿಯುಳ್ಳ ಆಡಳಿತಗಾರ, ತಾಂತ್ರಿಕ ನಾವಿನ್ಯದ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿರುವ ಚಿಂತಕ ಹಾಗೂ ಸುಪ್ರಸಿದ್ಧ ಮೆಟಿರಿಲ್ ಸೈನ್ಸ್ ವಿಜ್ಞಾನಿ ಡಾ.ಎಂ.ಕೆ.ಸೂರಪ್ಪ ಅವರು, ಹಲವು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪಂಜಾಬ್ನ ರೂಪಡ್ನ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ)ಯ ನಿರ್ದೇಶಕರಾಗಿ ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯದ ಕುಲಪತಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ.ರೂಪಡ್ನ ಐಐಟಿ ಸಂಸ್ಥೆಯನ್ನು ಆರಂಭಿಕ ಹಂತದಿಂದಲೂ ಬೆಳೆಸಿ ಇಂದು ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿರುವುದರ ಹಿಂದೆ ಡಾ.ಎಂ.ಕೆ.ಸೂರಪ್ಪ ಅವರ ಪರಿಶ್ರಮ ಹಾಗೂ ದೂರದೃಷ್ಟಿಯಿದೆ. ಅಣ್ಣಾ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಅವಧಿಯಲ್ಲಿ ಆಧುನಿಕ ಕಾಲಮಾನದ ಅಗತ್ಯಕ್ಕನುಗುಣವಾಗಿ ಆ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಸಾಕಷ್ಟು ದುಧಾರಣೆ ತಂದಿದ್ದಾರೆ. ಇವರ ಕಾಲಾವಧಿಯಲ್ಲಿ ವೃತ್ತಿಪರ ಕೈಗಾರಿಕೆಗಳ ಸಹಯೋಗ, ಸಂಶೋಧನೆಯ ವಾತಾವರಣದ ಸಬಲೀಕರಣ, ಕೌಶಲ್ಯಾಧಾರಿತ ಶೈಕ್ಷಣಿಕ ತರಬೇತಿ ವಿಶ್ವವಿದ್ಯಾಲಯದ ಆದ್ಯತೆಗಳಾಗಿದ್ದವು. ಈ ಪರಿಣಾಮಕಾರಿ ಉಪಕ್ರಮಗಳಿಂದಾಗಿ ತಮಿಳುನಾಡಿನ ತಾಂತ್ರಿಕ ಶಿಕ್ಷಣದ ಸ್ವರೂಪವೇ ಬದಲಾಯಿತು. ಸಮಗ್ರ ಗುಣಮಟ್ಟದ ಶಿಕ್ಷಣದ ವಿಷಯದಲ್ಲಿ ಅವರು ಹೊಂದಿದ್ದ ದಕ್ಷತೆ, ಬದ್ಧತೆ, ಪ್ರಾಮಾಣಿಕತೆ, ದೂರದೃಷ್ಟಿ ಶ್ಲಾಘನೀಯವಾದದ್ದು. ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಡಾ.ಎಂ.ಕೆ.ಸೂರಪ್ಪ ಅವರ ಕೊಡುಗೆಗಳನ್ನು ಗುರುತಿಸಿ ಶ್ರೀಮಠದ ವತಿಯಿಂದ ಈ ವರ್ಷದ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.