ಕನ್ನಡಪ್ರಭ ವಾರ್ತೆ ಕೋಲಾರನನ್ನ ಮೃಧುತ್ವ ನನ್ನ ಬಲಹೀನತೆಯಲ್ಲ, ವಿವಿ ಆಡಳಿತದ ವಿಷಯದಲ್ಲಿ ಆತ್ಮಸಾಕ್ಷಿಗೆ ವಿರುದ್ದವಾಗಿ ಕೆಲಸ ಮಾಡಿಲ್ಲ, ಅಂತಹ ಪರಿಸ್ಥಿತಿ ಎದುರಾದಾಗ ಗಟ್ಟಿಯಾಗಿ, ಹಠವಾದಿಯಾಗಿ ನಿಂತಿದ್ದೇನೆ, ಬಾಗುವ ಬೆತ್ತವಲ್ಲ ಎಂಬಂತೆ ನಡೆದುಕೊಂಡ ತೃಪ್ತಿ ನನಗಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನವಾನಳ್ಳಿ ತಿಳಿಸಿದರು.ಉತ್ತರ ವಿವಿಯ ಮಂಗಸಂದ್ರದ ಸುವರ್ಣಗಂಗೆ ಕ್ಯಾಂಪಾಸ್ನ ಸಭಾಂಗಣದಲ್ಲಿ ನಿವೃತ್ತರಾಗಲಿರುವ ತಮಗೆ ವಿವಿಯ ಬೋಧಕ,ಬೋಧಕೇತರ ನೌಕರರು ನೀಡಿದ ಬೀಳ್ಕೊಡುಗೆ ಸ್ವೀಕರಿಸಿದ ಅವರು, ಜಗತ್ತಿನಲ್ಲಿ ಎಲ್ಲರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ ಎಂದರು.ಬಯಸದೇ ಬಂದ ಹುದ್ದೆ
ಬೆದರಿಸಿದ್ದನ್ನು ಮರೆತಿಲ್ಲಉತ್ತರ ವಿಶ್ವವಿದ್ಯಾಲಯದ ಆಡಳಿತಕ್ಕೆ ಸಂಬಂಧಿಸಿದಂತೆ ದೃಢ ನಿರ್ಧಾರ ಕೈಗೊಂಡಿದ್ದೇನೆ, ವಿರೋಧ ಎದುರಾದರೂ ಗಟ್ಟಿಯಾಗಿ ನಿಂತಿದ್ದೇನೆ ಇದಕ್ಕೆ ಸಾಕ್ಷಿಯೆಂಬಂತೆ ೪೪ ಲಕ್ಷ ರು.ಗಳ ಪೀಠೋಪಕರಣ ಬಂದಾಗ ಅದು ಕಳಪೆ ಎಂದಾಕ್ಷಣ ವಾಪಸ್ ಕಳುಹಿಸಿದೆ ಆಗ ಎದುರಾದ ಬೆದರಿಕೆ, ಭಯಹುಟ್ಟಿಸಿದ್ದನ್ನು ಮರೆತಿಲ್ಲ ಆದರೆ ಸೋಲಲಿಲ್ಲ ಎಂದರು.ನಾನು ನಿರೀಕ್ಷಿಸಿದಷ್ಟು ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂಬುದು ನಿಜ, ಮಂಗಸಂದ್ರ ಸ್ನಾತಕೋತ್ತರ ಕೇಂದ್ರಕ್ಕೆ ಸಿಎಸ್ಆರ್ನಿಧಿ ೪ ಕೋಟಿ ತಂದೆ, ಇಲ್ಲಿ ಸುಂದರ ರಂಗಮಂದಿರ ಕಟ್ಟುವ ಆಶಯವಿತ್ತು. ಆದರೆ ಅದಕ್ಕೆ ಅಗತ್ಯ ಸಹಕಾರ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕುಲಪತಿಗಳು ವಿವಿಗೆ ಬರಲಿ, ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಲಿ. ಕವಿಯೊಬ್ಬರ ‘ಬೇಕು ಬೇಕೆನುವವಾಗಲೇ ಬಿಡಬೇಕು’ ಎಂಬ ಮಾತನ್ನು ಸ್ಮರಿಸಿ ಮಾತು ಮುಗಿಸಿದರು.
ಬದ್ಧತೆಗೆ ಮತ್ತೊಂದು ಹೆಸರು ವಾನಳ್ಳಿಕಾರ್ಯಕ್ರಮದಲ್ಲಿ ಕುಲಸಚಿವರಾದ (ಆಡಳಿತ) ಸಿ.ಎನ್.ಶ್ರೀಧರ್, ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಲೋಕನಾಥ್, ವಿತ್ತಾಧಿಕಾರಿ ವಸಂತ ಕುಮಾರ್ ಮತ್ತಿತರರು ಮಾತನಾಡಿ, ಪ್ರಾಮಾಣಿಕತೆ, ಬದ್ದತೆಗೆ ಮತ್ತೊಂದು ಹೆಸರು ನಿರಂಜನವಾನಳ್ಳಿ ಆಗಿದ್ದಾರೆ, ಅವರು ನೋಡಲು ಮೃಧುವಾಗಿದ್ದರೂ, ವಿವಿಯ ಆಡಳಿತ, ಹಣಕಾಸಿನ ವಿಷಯ ಬಂದಾಗ ಯಾರಿಗೂ ತಲೆ ಬಾಗಿಲ್ಲ, ಸರಿಯಿದ್ದರೆ ಮಾತ್ರವೇ ಒಪ್ಪಿಗೆ ನೀಡುತ್ತಿದ್ದರು ಎಂದರು. ಕಾರ್ಯಕ್ರಮದಲ್ಲಿ ಮಂಗಸಂದ್ರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಕುಮುದಾ, ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಡಾ.ಎಂ.ಎನ್.ರಮೇಶ್, ಸಿಂಡಿಕೇಟ್ ಸದಸ್ಯರಾದ ಗೋಪಾಲ್ಗೌಡ, ಅರ್ಬಜ್, ನಿರೂಪ್, ಜೈ ದೀಪ್ ಇದ್ದರು.