- ನಿವೃತ್ತ ನೌಕರರಿಗೆ ಬೀಳ್ಕೊಡುಗೆ, ಪ್ರತಿಭಾ ಪುರಸ್ಕಾರ, ಅಭಿನಂದನಾ ಸಮಾರಂಭ- - -
ಸಮಾಜದ ಸರ್ಕಾರಿ ನೌಕರರು ಒಗ್ಗಟ್ಟಾದ ಹಿನ್ನೆಲೆಯಲ್ಲಿ ಎಲ್ಲ ಸಂಘ-ಸಂಸ್ಥೆಗಳಲ್ಲಿ ಕುಂಚಿಟಿಗ ನೌಕರರಿಗೆ ಸ್ಥಾನಮಾನ ಸಿಗುವಂತಾಗಿದೆ ಎಂದು ಕುಂಚಿಟಿಗ ನೌಕರರ ಸಂಘ ಅಧ್ಯಕ್ಷ ಜಿ.ಎಸ್. ತಿಮ್ಮಪ್ಪ ಹರ್ಷ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಹೊನ್ನಾಳಿ-ನ್ಯಾಮತಿ ಕುಂಚಿಟಿಗ ನೌಕರರ ಸಂಘದ ವತಿಯಿಂದ ನಿವೃತ್ತ ನೌಕರರಿಗೆ ಬೀಳ್ಕೊಡುಗೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕುಂಚಿಟಿಗರ ಸಂಘ ಸ್ಥಾಪನೆಗೂ ಮೊದಲು ಸಮಾಜದ ನೌಕರರನ್ನು ತಾಲೂಕುಮಟ್ಟದ ಯಾವ ಸಂಘಟನೆಯಲ್ಲೂ ಅವಕಾಶ ಕೊಡದೇ ನಿರ್ಲಕ್ಷ್ಯ ಧೋರಣೆ ತೋರಲಾಗುತ್ತಿತ್ತು. ಕಳೆದ 25 ವರ್ಷಗಳಿಂದ ಆರ್.ಪಿ. ಕೃಷ್ಣಮೂರ್ತಿ ನೇತೃತ್ವದಲ್ಲಿ ಕುಂಚಿಟಿಗರ ನೌಕರರ ಸಂಘ ಸ್ಥಾಪನೆಯಾದಾಗ ಬೆರಳೆಣಿಕೆಯ ಶಿಕ್ಷಕರು ಮಾತ್ರವೇ ಸಂಘದಲ್ಲಿದ್ದರು. ಆಗ ಸಂಘದಲ್ಲಿ ಹಣ ಇಲ್ಲದಿದ್ದರೂ ಸಂಘಟನೆ ಇದ್ದರೆ ಮಾತ್ರವೇ ಶಕ್ತಿ ಎಂದರಿತು ಆತ್ಮಸ್ಥೈರ್ಯದಿಂದ ಕಟ್ಟಿದ ಸಂಘವು ಇಂದು ಹೆಮ್ಮರವಾಗಿ ಬೆಳೆಯಲು ಕಾರಣವಾಗಿದೆ. ಕೊರೋನಾ ಹಾವಳಿ ಹಿನ್ನೆಲೆ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿರಲಿಲ್ಲ. ಈ ವರ್ಷದಿಂದ ಪುನಃ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದರು.
ನಿವೃತ್ತ ನೌಕರರಾದ ಲೋಕೇಶ್, ಎಚ್.ಕೆ. ಪರಮೇಶ್ವರಪ್ಪ, ಫಲವನಹಳ್ಳಿ ಮಹೇಶ್ವರಪ್ಪ, ಅಂಗನವಾಡಿ ಶಿಕ್ಷಕಿ ರತ್ನಮ್ಮ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನದೊಂದಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಸಮಾಜದ ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಸೀಟ್ ಪಡೆದರೆ ₹5000 ನೀಡುವುದಾಗಿ ಕೆ.ಆರ್. ಶೋಭಾ ಮತ್ತು ಎಚ್.ಜಿ. ಪುರುಷೋತ್ತಮ್ ಶಿಕ್ಷಕ ದಂಪತಿ ಘೋಷಿಸಿದರು. ಶಿಕ್ಷಕ ಜಿ.ಎಚ್. ಪ್ರಹ್ಲಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನ್ಯಾಮತಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನ್ಯಾಮತಿ ಘಟಕ ಅಧ್ಯಕ್ಷೆ ಸುಧಾ ಮಾತನಾಡಿದರು.ಯುವ ಘಟಕದ ಅಧ್ಯಕ್ಷ ರಾಜೇಶ್, ಬಿ.ಆರ್.ಪಿ.ಗಳಾದ ಜಿ.ಕೆ. ಅರುಣ್ಕುಮಾರ್, ಎಸ್.ಸುನಿಲ್, ಎ.ಪಿ. ಶಾಂತರಾಜ್, ಎಚ್.ಜಿ. ಪುರುಷೋತ್ತಮ್, ಸುರೇಶ್, ನಿವೃತ್ತ ಬಿಇಒ ನಂಜರಾಜ್ ಆವರ ಧರ್ಮಪತ್ನಿ ವಾಣಿ ಮತ್ತು ಸಮಾಜದ ನೌಕರರರು ಪಾಲ್ಗೊಂಡಿದ್ದರು.
- - -ಬಾಕ್ಸ್ ಶಾಸಕರಿಂದ ಶ್ಲಾಘನೆ ಗಳಿಸೋದು ಸುಲಭವಲ್ಲ: ಬಿಇಒ ಸನ್ಮಾನ ಸ್ವೀಕರಿಸಿ ನಿವೃತ್ತ ಬಿಇಒ ಎಸ್.ಸಿ. ನಂಜರಾಜ್ ಮಾತನಾಡಿ, ಶಾಸಕ ಡಿ.ಜಿ. ಶಾಂತನಗೌಡ ಮತ್ತು ಅವರ ಕುಟುಂಬದವರೂ ಎಂದೂ ತಮ್ಮ ಕಾರ್ಯದಲ್ಲಿ ಒತ್ತಡ ಹೇರದೇ ಈ ಬಿಇಒ ಅವರು ಯಾವುದೇ ಸಮಸ್ಯೆಗಳು ನನ್ನ ಹತ್ತಿರ ಸುಳಿಯದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದ್ದನ್ನು ಉಲ್ಲೇಖಿಸಿ, ಶಾಸಕರಿಂದ ಒಳ್ಳೆಯ ಅಧಿಕಾರಿ ಎನಿಸಿಕೊಂಡು ನಿವೃತ್ತಿ ಆಗುತ್ತಿರುವುದು ಸುಲಭದ ಮಾತಲ್ಲ ಎಂದು ಸಂತಸ ಹಂಚಿಕೊಂಡರು. ಕೇವಲ 8 ವಿದ್ಯಾರ್ಥಿಗಳು ಪಾಸಾಗಿದ್ದರೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ 6ನೇ ಸ್ಥಾನದಲ್ಲಿದ್ದ ತಾಲೂಕು 1ನೇ ಸ್ಥಾನ ತಲುಪುತ್ತಿತ್ತು. ಆದರೆ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಶಿಕ್ಷಕ ಸ್ನೇಹಿಯಾಗಿ ಕೆಲಸ ನಿರ್ವಹಿಸಿದ್ದೇನೆ. ಕುಂಚಿಟಿಗ ಸಮಾಜದ ಶಿಕ್ಷಕರು ಒಳ್ಳೆಯ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಎಲ್ಲಾ ಸಮಾಜ ಬಾಂಧವರು ಮತ್ತು ಸಂಘ-ಸಂಸ್ಥೆಗಳಿಗೆ, ಮಾಧ್ಯಮ ವೃಂದಕ್ಕೆ ಹಾಗೂ ನೌಕರ ವರ್ಗದವರಿಗೆ ಸದಾ ಋಣಿಯಾಗಿರುತ್ತೇನೆ ಎಂದರು.
- - - -9ಎಚ್.ಎಲ್.1:ಹೊನ್ನಾಳಿ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಹೊನ್ನಾಳಿ-ನ್ಯಾಮತಿ ಕುಂಚಿಟಿಗ ನೌಕರರ ಸಂಘ ವತಿಯಿಂದ ನಿವೃತ್ತ ನೌಕರರಿಗೆ ಬೀಳ್ಕೊಡುಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.