ರಾಜಕೀಯದಲ್ಲಿ ಮಹಿಳೆಯರಿಗೆ ಸ್ಥಾನಮಾನ ಕಲ್ಪಿಸಿದೆ: ಜ್ಯೋತಿ ಗಣೇಶ್‌

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ಸ್ಥಳೀಯ ಸಂಸ್ಥೆಗಳ ರೀತಿ ಲೋಕಸಭೆ ಮತ್ತು ವಿಧಾನಸಭೆಗಳಿಗೂ ಶೇ.33 ರಷ್ಟು ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದ್ದು, ಪ್ರಧಾನಿ ನರೇಂದ್ರಮೋದಿ ರಾಜಕೀಯವಾಗಿಯೂ ಮಹಿಳೆಯರಿಗೆ ಸ್ಥಾನಮಾನ ಕಲ್ಪಿಸಿದ್ದು, ಇದರ ಪ್ರಯೋಜನ ಪಡೆಯಲು ಮಹಿಳೆಯರು ಸನ್ನದ್ಧರಾಗುವಂತೆ ತುಮಕೂರು ನಗರ ಶಾಸಕ ಜಿ.ಬಿ. ಜೋತಿಗಣೇಶ್ ತಿಳಿಸಿದ್ದಾರೆ.

ಬಾಂಧವ್ಯ ಮಹಿಳಾ ಸಮಾಜದ 21ನೇ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಶಾಸಕ ಜ್ಯೋತಿ ಗಣೇಶ

ಕನ್ನಡಪ್ರಭ ವಾರ್ತೆ ತುಮಕೂರು

ಸ್ಥಳೀಯ ಸಂಸ್ಥೆಗಳ ರೀತಿ ಲೋಕಸಭೆ ಮತ್ತು ವಿಧಾನಸಭೆಗಳಿಗೂ ಶೇ.33 ರಷ್ಟು ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದ್ದು, ಪ್ರಧಾನಿ ನರೇಂದ್ರಮೋದಿ ರಾಜಕೀಯವಾಗಿಯೂ ಮಹಿಳೆಯರಿಗೆ ಸ್ಥಾನಮಾನ ಕಲ್ಪಿಸಿದ್ದು, ಇದರ ಪ್ರಯೋಜನ ಪಡೆಯಲು ಮಹಿಳೆಯರು ಸನ್ನದ್ಧರಾಗುವಂತೆ ತುಮಕೂರು ನಗರ ಶಾಸಕ ಜಿ.ಬಿ. ಜೋತಿಗಣೇಶ್ ತಿಳಿಸಿದ್ದಾರೆ.

ಮಾರುತಿ ನಗರದ ಸಂಜೀವಿನಿ ಪಾರ್ಕಿನಲ್ಲಿರುವ ಬಯಲು ರಂಗಮಂದಿರದಲ್ಲಿ ಬಾಂಧವ್ಯ ಮಹಿಳಾ ಸಮಾಜದ 21 ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಮಂಡಿಸಿದ ಮಹಿಳಾ ರಾಜಕೀಯ ಮೀಸಲಾತಿ ಮಸೂದೆ ಉಭಯ ಸದನಗಳಲ್ಲಿ ಪಾಸಾಗಿದ್ದು, 2023 ಕ್ಕೆ ಚಾಲ್ತಿಗೆ ಬರಲಿದೆ. ಸ್ಥಳೀಯ ಸಂಸ್ಥೆಗಳ ರೀತಿ, ಸಂಸತ್ತು ಮತ್ತು ವಿಧಾನಸಭೆಗಳಲ್ಲಿಯೂ ಮಹಿಳೆಯರು ರಾಜಕೀಯ ಅಧಿಕಾರ ಪಡೆಯಬುದು ಎಂದರು.

ಕಳೆದ 10 ವರ್ಷಗಳಿಂದಲೂ ಬಾಂಧವ್ಯ ಮಹಿಳಾ ಸಮಾಜವನ್ನು ನೋಡುತ್ತಿದ್ದು, ಮಾರುತಿ ನಗರದ ಅಭಿವೃದ್ಧಿಯಲ್ಲಿ ಮಾರುತಿ ನಗರ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಬಾಂಧವ್ಯ ಮಹಿಳಾ ಸಮಾಜ ಬಹಳ ಸಕ್ರಿಯವಾಗಿ ತೊಡಗಿ ಕೊಂಡಿವೆ. ಎರಡು ಸಂಘಟನೆಗಳು ಒಗ್ಗೂಡಿ, ರಾಜಕಾರಣಿಗಳು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಮಾರುತಿ ನಗರದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಂಜೀವಿನ ಉದ್ಯಾನವನದಲ್ಲಿ ಮಕ್ಕಳ ಆಟಿಕೆ ವಸ್ತುಗಳು ಮತ್ತು ವಯೋವೃದ್ಧರಿಗೆ ಅಗತ್ಯವಿರುವ ವಸ್ತುಗಳನ್ನು ನೀಡಲು ಕ್ರಮ ಕೈಗೊಳ್ಳುವುದಾಗಿ ಶಾಸಕ ಜಿ.ಬಿ. ಜೋತಿಗಣೇಶ್ ಭರವಸೆ ನೀಡಿದರು.

ಪಾಲಿಕೆ ಸದಸ್ಯ ಸಿ.ಎನ.ರಮೇಶ್ ಮಾತನಾಡಿ, ನಾವೆಲ್ಲರೂ ಚಿಕ್ಕಂದಿನಲ್ಲಿ ಆಡಿ ಬೆಳೆದ ಪ್ರದೇಶ ಇದು. ನಗರಪಾಲಿಕೆಯಲ್ಲಿಯೇ ಅತಿ ದೊಡ್ಡ ವಾರ್ಡು ಇದಾಗಿದೆ. ನಿಮ್ಮೆಲ್ಲರ ಒತ್ತಾಸೆಯ ಫಲವಾಗಿ ಸುಮಾರು 19 ಕೋಟಿ ರು.ಗಳನ್ನು ಮಾರುತಿ ನಗರ ಬಡಾವಣೆಯ ರಸ್ತೆ, ಚರಂಡಿ, ಉದ್ಯಾನವನಗಳ ಅಭಿವೃದ್ಧಿಗೆ ಬಳಕೆ ಮಾಡಲಾಗಿದೆ. ಅಲ್ಲದೆ ಮಹಾಲಕ್ಷ್ಮಿ ಬಡಾವಣೆಯಿಂದ ಮಾರುತಿ ನಗರದ ಶೆಟ್ಟಿಹಳ್ಳಿ ರಸ್ತೆ ಸಂಪರ್ಕಿಸುವ ೪೦ಅಡಿ ಮುಖ್ಯರಸ್ತೆಯ ಅಭಿವೃದ್ಧಿ ಕಾರ್ಯ ಶೀಘ್ರವೇ ಆರಂಭಗೊಳ್ಳಲಿದೆ ಎಂದರು.

ಜಯನಗರ ಪೊಲೀಸ್ ಠಾಣೆಯ ಪಿಎಸ್ಐ ಮಹಾಲಕ್ಷ್ಮಿ ಮಾತನಾಡಿ, ಡಿಸೆಂಬರ್ ತಿಂಗಳಲ್ಲಿ ಪೊಲೀಸ್ ಇಲಾಖೆ ಅಪರಾಧ ತಡೆ ಮಾಸಾಚರಣೆ ಹಮ್ಮಿಕೊಂಡಿದೆ. ಬೇರೆ ಬಡಾವಣೆಗಳಿಗೆ ಹೊಲಿಕೆ ಮಾಡಿದರೆ ಮಾರುತಿ ನಗರದಲ್ಲಿ ಕಳ್ಳತನ ಪ್ರಕರಣ ಕಡಿಮೆ. ಆದರೆ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಮನೆಗಳು ಹಾಗೂ ಅಂಗಡಿ ಮುಂಗಟ್ಟುಗಳ ಮಾಲೀಕರು ಸಿಸಿ ಕ್ಯಾಮೆರಾಅಳವಡಿಸಿಕೊಂಡರೆ ನಿಮ್ಮಗೂ ಕ್ಷೇಮ, ಪೊಲೀಸ್ ಇಲಾಖೆಗೆ ಸಹಕಾರಿಯಾಗಲಿದೆ. ಕಳ್ಳತನ ಮತ್ತಿತರ ವಿದ್ವಂಸಕ ಕೃತ್ಯಗಳು ನಡೆದಾಗ ಸುಲಭವಾಗಿ ಅಪರಾಧಿಗಳನ್ನು ಪತ್ತೆ ಹಚ್ಚಲು ಸಾಧ್ಯ. ಹಾಗಾಗಿ ಎಲ್ಲಾ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಪೊಲೀಸರ ಬಗ್ಗೆ ಭಯ ಮತ್ತು ಅನುಮಾನ ಬೇಡ. ಅನಿವಾರ್ಯವಾಗಿ ನಾಲ್ಕೈದು ದಿನಗಳ ಕಾಲ ಮನೆಯಿಂದ ಹೋರ ಹೋಗಬೇಕಾದ ಸಂದರ್ಭ ಬಂದರೆ ಪೊಲೀಸರಿಗೆ ತಿಳಿಸಿ, ಆಗ ನಾವು ನೈಟ್ ಬೀಟ್ ಪೊಲೀಸರು ನಿಗಾವಹಿಸಲು ಅನುಕೂಲವಾಗುತ್ತದೆ. ವಡವೆ, ಬೆಲೆ ಬಾಳುವ ವಸ್ತುಗಳನ್ನು ಸಾಧ್ಯವಾದಷ್ಟು ಬ್ಯಾಂಕ್ ಲಾಕರ್‌ನಲ್ಲಿಡಿ, ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ 112 ಗೆ ಕರೆ ಮಾಡಿದರೆ ಹತ್ತು ನಿಮಿಷಗಳಲ್ಲಿ ನಿಮಗೆ ಪೊಲೀಸ್ ಸೇವೆ ದೊರೆಯಲಿದೆ. ಹಾಗಾಗಿ ಯಾರು ಸಹ ಭಯ ಪಡುವುದು ಬೇಡ. ಪೊಲೀಸ್ ಇಲಾಖೆ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ಅಭಯ ನೀಡಿದರು.

ಬಾಂಧವ್ಯ ಮಹಿಳಾ ಸಮಾಜದ ಜಯಲಕ್ಷ್ಮಿ ರಾಮಚಂದ್ರಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ವಸುಂಧರ ನಾಗರಾಜು ವಾರ್ಷಿಕ ವರದಿ ವಾಚಿಸಿದರು.

ಇದೇ ವೇಳೆ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಅಧೀಕ್ಷಕ ವೆಂಕಟೇಶ್ ಟಿ.ಎಂ., ಬಾಲ ಪ್ರತಿಭೆ, ಇಂಡಿಯಾ ಬುಕ್ ಅಫ್ ರೆಕಾರ್ಡ್ ಪ್ರಶಸ್ತಿ ಪುರಸ್ಕೃತ ಸಾಯಿ ಸುಮುಖ್ ಎಸ್. ಗುಪ್ತ ಹಾಗೂ ಸ್ಮಶಾನ ಕಾಯುವ ಮಹಿಳೆ ಯಶೋಧಮ್ಮ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಸಂಘದ ಅಧ್ಯಕ್ಷೆ ಲಕ್ಷ್ಮಿ ಅಯ್ಯಂಗಾರ್ , ಗೌರವಾಧ್ಯಕ್ಷರಾದ ಪ್ರೇಮರಾಮೇಗೌಡ, ಪದಾಧಿಕಾರಿಗಳಾದ ಸೋಮಪ್ರಭ, ರಾಧಾ ಆಶ್ವಥ್, ವೀಣಾ, ಮೇಘನಾ ಮಾಧವ್, ಜಯಶ್ರೀ ವಿಶ್ವೇಶ್ವರಯ್ಯ, ಪುಷ್ಪಾ ಲಕ್ಷ್ಮಣ, ಸ್ವಪ್ನಾ ಅಶೋಕ್, ಲಕ್ಷ್ಮಿ ಮಹಾಲಿಂಗಪ್ಪ, ಸರ್ವಮಂಗಳಾ ವಿವೇಕಾನಂದ, ಸೀತಾಲಕ್ಷ್ಮಿ ಉಪೇಂದ್ರ ಮತ್ತಿತರರು ಪಾಲ್ಗೊಂಡಿದ್ದರು.ಫೋಟೊ

ಬಾಂಧವ್ಯ ಮಹಿಳಾ ಸಮಾಜದ 21 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಅಧೀಕ್ಷಕ ವೆಂಕಟೇಶ್ ಟಿ.ಎಂ., ಬಾಲ ಪ್ರತಿಭೆ, ಇಂಡಿಯಾ ಬುಕ್ ಅಫ್ ರೆಕಾರ್ಡ್ ಪ್ರಶಸ್ತಿ ಪುರಸ್ಕೃತ ಸಾಯಿ ಸುಮುಖ್ ಎಸ್. ಗುಪ್ತ ಹಾಗೂ ಸ್ಮಶಾನ ಕಾಯುವ ಮಹಿಳೆ ಯಶೋಧಮ್ಮ ಅವರನ್ನು ಸನ್ಮಾನಿಸಲಾಯಿತು.

Share this article