ಶಾಮನೂರು ಮಹಲಿಂಗಪ್ಪ ಶಾಲೆಯಿಂದ ಡ್ರಗ್ಸ್ ಮುಕ್ತ ದಾವಣಗೆರೆ ಬೈಸಿಕಲ್ ರ್ಯಾಲಿಗೆ ಚಾಲನೆ
ಮಾದಕ ವಸ್ತುಗಳ ಸೇವನೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಡ್ರಗ್ಸ್ ಮುಕ್ತ ದಾವಣಗೆರೆ ಬೈಸಿಕಲ್ ರ್ಯಾಲಿ ಹಮ್ಮಿಕೊಳ್ಳುವ ಮೂಲಕ ಶ್ರೀಮತಿ ಪುಷ್ಪಾ ಶಾಮನೂರು ಮಹಲಿಂಗಪ್ಪ ಶಾಲೆ ಮಾದರಿ ಕಾರ್ಯ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ನಗರದ ಶ್ರೀಮತಿ ಪುಷ್ಪಾ ಶಾಮನೂರು ಮಹಲಿಂಗಪ್ಪಶಾಲೆಯ ಆವರಣದಲ್ಲಿ ಶನಿವಾರ ಡ್ರಗ್ಸ್ ಮುಕ್ತ ದಾವಣಗೆರೆ ಘೋಷಣೆಯಡಿ ಹಮ್ಮಿಕೊಂಡಿದ್ದ ಬೈಸಿಕಲ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿ, ಯುವ ಜನತೆ ಶೈಕ್ಷಣಿಕ ಸಾಧನೆ ತೋರುವ ಮೂಲಕ ದೇಶದ ಆಸ್ತಿಯಾಗಬೇಕು ಎಂದರು.ದೇಶದ ಸತ್ಪ್ರಜೆಗಳಾಗಲು ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು. ಕೇವಲ ಪುಸ್ತಕ ಓದುವುದಷ್ಟೇ ಅಭ್ಯಾಸವಲ್ಲ. ಸಂಸ್ಕೃತಿ, ಸಂಸ್ಕಾರ, ಸದ್ಗುಣ, ಉತ್ತಮ ನಡವಳಿಕೆಯೂ ಅತೀ ಮುಖ್ಯವಾಗಿರುತ್ತವೆ. ವಿದ್ಯೆಯಿಂದ ವಿನಯ, ಸಂಸ್ಕೃತಿ, ಸಂಸ್ಕಾರ, ಸದ್ಗುಣಗಳು ಬರುತ್ತವೆ. ವಿದ್ಯೆ ಕಲಿಯದಿದ್ದರೇ ಅದು ವ್ಯರ್ಥವಾಗುತ್ತದೆ. ಇದರ ಜೊತೆಗೆ ಮಾದಕ ವಸ್ತುಗಳ ಮುಖ್ಯ ಜೀವನವೂ ಅತೀ ಮುಖ್ಯ ಎಂದು ಹೇಳಿದರು.
ನಾವು ಎಷ್ಟು ಆರೋಗ್ಯವಂತರಾಗಿ, ಸುಶಿಕ್ಷಿತರಾಗಿ, ಸೌಮ್ಯವಾಗಿರುತ್ತೇವೋ ಅಷ್ಟು ನಾವು ದೇಶಕ್ಕೆ ಕೊಡುವಂತಹ ಆಸ್ತಿಯಾಗುತ್ತೇವೆ. ಕೆಲವರಿಗೆ ಬರೀ ಮಾತನಾಡುವುದು, ವಾದ ಮಾಡುವುದೇ ಕೆಲಸವಾಗಿರುತ್ತದೆ. ಕೆಲವರು ಮಾತನಾಡದೇ ಮೌನಂ ಸರ್ವತ್ರ ಲಕ್ಷಣಂ ಎಂಬಂತೆ ಸುಮ್ಮನಿರುತ್ತಾರೆ. ಹಿರಿಯರ, ಶಿಕ್ಷಕರ ಜೊತೆ ವಾದ ಮಾಡುವುದು ಕೂಡಾ ಚಟವೇ. ಗುರು ಹಿರಿಯರಿಗೆ ಯಾವಾಗಲೂ ಗೌರವ ಕೊಡಬೇಕು. ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮಾತನಾಡಿ, ಯುವ ಜನತೆ ಮಾದಕ ವಸ್ತುಗಳನ್ನು ತೆಗೆದುಕೊಳ್ಳಬಾರದು. ಯಾರಾದರೂ ಡ್ರಗ್ಸ್ ತೆಗೆದುಕೊಂಡರೆ ಬೋಧಕರು, ಪ್ರಾಚಾರ್ಯರ ಗಮನಕ್ಕೆ ತರಬೇಕು. ಅಂತಹವರಿಗೆ ದುಶ್ಚಟಗಳ ಬಗ್ಗೆ ಅರಿವು ಮೂಡಿಸುವುದು ಸಹಾ ನಿಮ್ಮ ಕೆಲಸವಾಗಿದೆ ಎಂದರು.ನಂತರ ವಿದ್ಯಾರ್ಥಿಗಳ ಬೈಸಿಕಲ್ ರ್ಯಾಲಿ ಬಿಐಇಟಿ ಕಾಲೇಜು, ಬಾಪೂಜಿ ಶಾಲೆ, ಲಕ್ಷ್ಮಿ ಫ್ಲೋರ್ ಮಿಲ್, ಗುಂಡಿ ಸರ್ಕಲ್, ವಿದ್ಯಾರ್ಥಿ ಭವನ, ಜಯದೇವ ವೃತ್ತ, ಹಡದಿ ರಸ್ತೆ, ಐಟಿಐ ಕಾಲೇಜು ರಸ್ತೆ, ಗ್ರಾಮಾಂತರ ಪೊಲೀಸ್ ಠಾಣೆ, ಕಾಫಿ ಡೇ ಮುಖಾಂತರ ನೂತನ ಕಾಲೇಜು, ಬಿಐಇಟಿ ಕಾಲೇಜು ವೃತ್ತದ ಮೂಲಕ ಶಾಲೆಗೆ ವಾಪಾಸಾಯಿತು.
ಸಂಸ್ಥೆ ಅಧ್ಯಕ್ಷ ಎಚ್.ಮಹಾಲಿಂಗಪ್ಪ ಶಾಮನೂರು, ಟ್ರಸ್ಟಿ ಪುಷ್ಪಾ ಮಹಾಲಿಂಗಪ್ಪ, ಡೀನ್ ಸಿಲ್ಜಿ ಜೋಸ್, ಪ್ರಾಚಾರ್ಯ ಬಿ.ಆರ್.ಅಶೋಕ, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.ದಾವಣಗೆರೆ ಸೇರಿದಂತೆ ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಇಂದು ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗುತ್ತಿದೆ. ನೀವೂ ಸಹ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಆದ ನಂತರ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಜಿ.ಎಂ.ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ.