ಕಾರವಾರ: ಕೈಗಾ ಅಣು ವಿದ್ಯುತ್ ಯೋಜನೆಯ 5 ಹಾಗೂ 6ನೇ ಘಟಕ ನಿರ್ಮಾಣಕ್ಕಾಗಿ ಗುಜರಾತಿನಿಂದ ಹೊರಟ ಸ್ಟೀಮ್ ಜನರೇಟರ್ ಕಾರವಾರಕ್ಕೆ ಆಗಮಿಸಿದೆ. ದೇಶೀಯವಾಗಿ ನಿರ್ಮಿತವಾದ ಸ್ಟೀಮ್ ಜನರೇಟರ್ ಕಾರವಾರಕ್ಕೆ ಎರಡು ದಿನಗಳ ಹಿಂದೆಯೇ ಬಂದಿದ್ದು, ಕೈಗಾಕ್ಕೆ ಒಯ್ಯಲಾಗುತ್ತಿದೆ. ತಿಂಗಳ ಹಿಂದೆಯೇ ಮೊದಲ ಸ್ಟೀಮ್ ಜನರೇಟರ್ ಕೈಗಾಕ್ಕೆ ಆಗಮಿಸಿದ್ದು, ಇದು ಎರಡನೇಯದಾಗಿದೆ. ಸ್ಟೀಮ್ ಜನರೇಟರ್ ಕಡವಾಡ ಕಿನ್ನರ ಸಿದ್ಧರ ಮೂಲಕ ಕೈಗಾಕ್ಕೆ ತೆರಳಲಿದೆ. ಸದಾಶಿವಗಡ ಕದ್ರಾ ರಸ್ತೆಯಲ್ಲಿ ಅಸ್ನೋಟಿ ಬಳಿ ಇರುವ ರೈಲ್ವೆ ಸೇತುವೆ ಹಾಗೂ ಕದ್ರಾದ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಈ ಸ್ಟೀಮ್ ಜನರೇಟರ್ ವಾಹನ ಕಾಳಿ ಸೇತುವೆ ಮೂಲಕ ಸಂಚರಿಸುವುದಿಲ್ಲ ಎಂದು ಕೈಗಾದ ಸ್ಟೇಶನ್ ಡೈರೆಕ್ಟರ್ ಪ್ರಮೋದ ಜಿ. ರಾಯಚೂರ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಈ ಸ್ಟೀಮ್ ಜನರೇಟರ್ 700 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಬಳಕೆಯಾಗಲಿದೆ.ಮಗುವಿನ ಮೇಲೆ ಬೀದಿನಾಯಿ ದಾಳಿ: ಗಾಯ
ಕಾರವಾರ: ಮಹಾರಾಷ್ಟ್ರದಿಂದ ಬಂದ ಚಿಕ್ಕ ಮಗುವಿಗೆ ನಗರದಲ್ಲಿ ಬೀದಿನಾಯಿ ಕಡಿದಿದ್ದು, ದಿನವಿಡಿ ಆಸ್ಪತ್ರೆಯಲ್ಲೇ ಕಳೆಯಬೇಕಾಯಿತು.ಮಹಾರಾಷ್ಟ್ರದ ಸುನೀಲ ರೆಡ್ಡಿ ತಮ್ಮ ಕುಟುಂಬದೊಂದಿಗೆ ಉಳವಿಗೆ ಆಗಮಿಸಿದವರು ಕಾರವಾರಕ್ಕೆ ಬಂದಿದ್ದರು. ಬೀಚ್ ಬಳಿ ತೆರಳುತ್ತಿದ್ದಾಗ ಹನುಮಾನ್ ದೇವಾಲಯದ ಬಳಿ ಚಿಕ್ಕ ಮಗುವಿನ ಮೇಲೆ ನಾಯಿ ಎರಗಿ ಗಾಯಗೊಳಿಸಿತು. ಸ್ಥಳದಲ್ಲಿದ್ದ ಸ್ಥಳೀಯರು ನಾಯಿಯಿಂದ ಮಗುವನ್ನು ರಕ್ಷಿಸಿದರು. ಆಸ್ಪತ್ರೆಯಲ್ಲಿ ರೇಬಿಸ್ ಚುಚ್ಚುಮದ್ದು ಇಲ್ಲದೆ ಸಂಜೆ ತನಕ ಕಾಯಬೇಕಾಯಿತು. ಕುಮಟಾದಿಂದ ಚುಚ್ಚುಮದ್ದು ಬರುವ ತನಕ ಸಾಕಷ್ಟು ವಿಳಂಬವಾಯಿತು. ಮಗು ಅಪಾಯದಿಂದ ಪಾರಾಗಿದೆ. ದಾಳಿ ಮಾಡಿದ ಬೀದಿನಾಯಿಯನ್ನು ನಗರಸಭೆ ಸಿಬ್ಬಂದಿ ಹಿಡಿದು ಪಶು ಆಸ್ಪತ್ರೆಗೆ ಕೊಂಡೊಯ್ಯಿದ್ದಾರೆ.