ಹಟ್ಟಿಚಿನ್ನದಗಣಿ: 30ಕ್ಕೂ ಅಧಿಕ ವಾಹನಗಳ ಮೇಲೆ ದರೋಡೆ ಕೋರರ ಗುಂಪು ಕಲ್ಲು ತೂರಿರುವ ಘಟನೆ ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ (150ಎ)ನ ಗುರುಗುಂಟಾ ಗ್ರಾಮದ ಬಳಿಯ ಗೊಲ್ಲಪಲ್ಲಿ ಘಾಟ್ ಪ್ರದೇಶದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ತಲೆಗೆ ಕಲ್ಲೇಟು ಬಿದ್ದು ಗಾಯವಾಗಿದ್ದು, ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.30 ವಾಹನಗಳ ಗಾಜು ಪುಡಿಪುಡಿ : ಕಲುಬುರಗಿ, ಬೀದರ್ ಜಿಲ್ಲೆಗಳ ಕಲ್ಯಾಣ ಸಾರಿಗೆ ಸಂಸ್ಥೆಗಳ 5ಕ್ಕೂ ಅಧಿಕ ಬಸ್ ಸೇರಿದಂತೆ ಲಾರಿಗಳು, ಕಾರುಗಳ ಕಿಟಕಿ, ಮುಂದಿನ ಗಾಜುಗಳು ಪುಡಿ ಪುಡಿಯಾಗಿವೆ. ಗೊಲ್ಲಪಲ್ಲಿ ಘಾಟ್ನಲ್ಲಿ ಮರದ ಪೊದೆ ಅವಿತುಕೊಂಡು ವಾಹನಗಳ ಮೇಲೆ ಕಲ್ಲು ತೂರಿದರೆ ವಾಹನಗಳು ನಿಲ್ಲಿಸುತ್ತಾರೆ. ಆಗ ದರೋಡೆ ಮಾಡಬಹುದು ಎಂದು ದರೋಡೆಕೋರರು ವಾಹನಗಳ ಮೇಲೆ ಕಲ್ಲು ತೂರಿದ್ದಾರೆ. ಆದರೆ ವಾಹನಗಳ ಚಾಲಕರು ವಾಹನಗಳನ್ನು ನಿಲ್ಲಿಸದೇ ಇದ್ದರಿಂದ ದರೋಡೆ ಆಗಿಲ್ಲ ಎಂದು ಬಸ್ ಪ್ರಯಾಣಿಕರೊಬ್ಬರ ಮಾತಾಗಿದೆ.ಅಧಿಕಾರಿಗಳು ಭೇಟಿ : ಹಟ್ಟಿ ಸರ್ಕಲ್ ಇನ್ಸ್ಸ್ಪೆಕ್ಟರ್ ಕೆ.ಹೊಸಕೇರಪ್ಪ, ಸಾರಿಗೆ ಘಟಕದ ವ್ಯವಸ್ಥಾಪಕ ರಾಹುಲ್ ವನಸೊರೆ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಾಗಿದೆ. ಗೊಲ್ಲಪಲ್ಲಿ ಬಳಿ ಕಲ್ಲುತೂರಾಟ ನಡೆಯುತ್ತಿರುವ ಸುದ್ದಿ ತಿಳಿದು ಈ ಮಾರ್ಗ ಕಡೆಗಳಲ್ಲಿ ಸಾಗುವ ವಾಹನಗಳ ಚಾಲಕರು ಭಯಭೀತರಾಗಿ ವಾಹನಗಳನ್ನು ಗುರುಗುಂಟಾ ಗ್ರಾಮದ ಬಳಿ ಮತ್ತು ತಿಂಥಣಿ ಬ್ರಿಜ್ ಬಳಿ ನಿಲುಗಡೆ ಮಾಡಿದ್ದರಿಂದ ಸುಮಾರು 100ಕ್ಕೂ ಅಧಿಕ ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮ್ ಆಗಿತ್ತು. ನಂತರ ಹಟ್ಟಿ, ಲಿಂಗಸುಗೂರು, ಜಾಲಹಳ್ಳಿ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ಗೊಲ್ಲಪಲ್ಲಿ ರಸ್ತೆ ಅಕ್ಕಪಕ್ಕದಲ್ಲಿ ತಿರುಗಾಡಿ ಪರಿಸ್ಥಿತಿ ತಿಳಿಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.