ಇಂದಿನಿಂದ ಕಲ್ಲು ಕ್ವಾರಿ, ಕ್ರಷರ್ ಬಂದ್ ಇಟ್ಟು ಮುಷ್ಕರ

KannadaprabhaNewsNetwork |  
Published : Sep 18, 2026, 02:00 AM IST
ಬಸವರಾಜ ಬೆಳವಡಿ | Kannada Prabha

ಸಾರಾಂಶ

ಒಂದೇ ಹಂತದ ಕಲ್ಲುಗಣಿ ಉತ್ಪನ್ನಕ್ಕೆ ಎರಡು ಹಂತದಲ್ಲಿ ರಾಜಧನ (ರಾಯಲ್ಟಿ) ವಸೂಲಿ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಹಾಗೂ ಅವೈಜ್ಞಾನಿಕ ರೀತಿಯಲ್ಲಿ ದಂಡ ಹಾಕಿರುವುದನ್ನು ವಿರೋಧಿಸಿ ಸೆ.18ರಿಂದ ಜಿಲ್ಲಾದ್ಯಂತ ಎಲ್ಲ ಕ್ವಾರಿ ಹಾಗೂ ಕ್ರಷರ್ ಘಟಕಗಳನ್ನು ಬಂದ್ ಇಟ್ಟು ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸ್ಟೋನ್ ಕ್ರಷರ್ ಆ್ಯಂಡ್ ಕ್ವಾರಿ ಓನರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಬಸವರಾಜ ಬೆಳವಡಿ ಹೇಳಿದರು.

ಹಾವೇರಿ: ಒಂದೇ ಹಂತದ ಕಲ್ಲುಗಣಿ ಉತ್ಪನ್ನಕ್ಕೆ ಎರಡು ಹಂತದಲ್ಲಿ ರಾಜಧನ (ರಾಯಲ್ಟಿ) ವಸೂಲಿ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಹಾಗೂ ಅವೈಜ್ಞಾನಿಕ ರೀತಿಯಲ್ಲಿ ದಂಡ ಹಾಕಿರುವುದನ್ನು ವಿರೋಧಿಸಿ ಸೆ.18ರಿಂದ ಜಿಲ್ಲಾದ್ಯಂತ ಎಲ್ಲ ಕ್ವಾರಿ ಹಾಗೂ ಕ್ರಷರ್ ಘಟಕಗಳನ್ನು ಬಂದ್ ಇಟ್ಟು ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸ್ಟೋನ್ ಕ್ರಷರ್ ಆ್ಯಂಡ್ ಕ್ವಾರಿ ಓನರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಬಸವರಾಜ ಬೆಳವಡಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳಾದ ಲೋಕೋಪಯೋಗಿ, ಜಲಸಂಪನ್ಮೂಲ, ಗಣಿ ಮತ್ತು ಭೂವಿಜ್ಞಾನ ಸೇರಿದಂತೆ ಇತರ ಇಲಾಖೆಗಳ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ರಾಜಧನ ಕಡಿತ ಮಾಡಲಾಗುತ್ತಿದೆ. ಮತ್ತೊಂದೆಡೆ ಕಲ್ಲುಗಣಿ ಹಾಗೂ ಕ್ರಷರ್ ಮಾಲೀಕರಿಂದಲೂ ಪ್ರತ್ಯೇಕವಾಗಿ ರಾಜಧನ ವಸೂಲಿ ಮಾಡಲಾಗುತ್ತಿದೆ. ಒಂದೇ ಉತ್ಪನ್ನಕ್ಕೆ ಎರಡು ಬಾರಿ ರಾಜಧನ ಸಂಗ್ರಹಿಸುವ ಈ ಪದ್ಧತಿ ಅವೈಜ್ಞಾನಿಕವಾಗಿದ್ದು, ಮಾಲೀಕರಿಗೆ ಆರ್ಥಿಕ ಹೊರೆಯಾಗುತ್ತಿದೆ ಎಂದು ದೂರಿದರು.

ಸೆ. 18ರಿಂದ ಕ್ರಷರ್ ಬಂದ್‌: ನಮ್ಮ ಸಂಘದ ಬೇಡಿಕೆಗಳನ್ನು ಸರ್ಕಾರದ ಈಡೇರಿಸದ ಹಿನ್ನೆಲೆಯಲ್ಲಿ ಸೆ.18ರಿಂದ ಹಾವೇರಿ ಜಿಲ್ಲಾದ್ಯಂತ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಘಟಕಗಳನ್ನು ಅನಿರ್ದಿಷ್ಟಾವಗೆ ಬಂದ್ ಮಾಡಲು ನಿರ್ಧರಿಸಲಾಗಿದೆ. ಮುಷ್ಕರದ ಅವಧಿಯಲ್ಲಿ ಎಲ್ಲ ಕ್ವಾರಿ ಹಾಗೂ ಕ್ರಷರ್ ಘಟಕಗಳ ಕಾರ್ಯಾಚರಣೆ ಮತ್ತು ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. ಜಲ್ಲಿ, ಎಂ-ಸ್ಯಾಂಡ್ ಸೇರಿದಂತೆ ಯಾವುದೇ ಕಲ್ಲು ಉತ್ಪನ್ನಗಳ ಲೋಡಿಂಗ್, ಸಾಗಾಣಿಕೆ ಹಾಗೂ ಪೂರೈಕೆ ಮಾಡುವುದಿಲ್ಲ ಎಂದರು.

ಸರ್ಕಾರವು ಕ್ವಾರಿ ಮಾಲೀಕರಿಂದಾಗಲಿ ಅಥವಾ ಅಂತಿಮ ಬಳಕೆದಾರರು, ಸರ್ಕಾರಿ ಇಲಾಖೆಯಿಂದಾಗಲಿ ಯಾವುದೇ ಒಂದು ಹಂತದಲ್ಲಿ ಮಾತ್ರ ರಾಜಧನ ಸಂಗ್ರಹಿಸುವ ಸ್ಪಷ್ಟ ನಿಯಮ ರೂಪಿಸಬೇಕು. ಇಮ್ಮಡಿ ರಾಜಧನ ವಸೂಲಿ ಪದ್ಧತಿಯನ್ನು ತಕ್ಷಣ ರದ್ದುಪಡಿಸಬೇಕು. ಅವೈಜ್ಞಾನಿಕ ಜಿಪಿಎಸ್ ವ್ಯವಸ್ಥೆಯನ್ನು ಬಂದ್ ಮಾಡಬೇಕು ಎಂಬುದು ಸಂಘದ ಪ್ರಮುಖ ಬೇಡಿಕೆಯಾಗಿದೆ ಎಂದರು.

ಸರ್ಕಾರದೊಂದಿಗೆ ಮಾತುಕತೆ ನಡೆದು ಬೇಡಿಕೆಗಳ ಕುರಿತು ಸೂಕ್ತ ನಿರ್ಧಾರ ಹೊರಬರುವವರೆಗೆ ಮುಷ್ಕರ ಮುಂದುವರಿಯಲಿದೆ. ಜಿಲ್ಲೆಯ ಎಲ್ಲ ಕ್ವಾರಿ ಮತ್ತು ಕ್ರಷರ್ ಮಾಲೀಕರು, ವಿತರಕರು ಸಂಘದ ನಿರ್ಧಾರಕ್ಕೆ ಒಗ್ಗಟ್ಟಿನಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಪಾಟೀಲ, ಅಶೋಕ ಬಣಕಾರ, ಮುತ್ತಣ್ಣ ಶಿಗ್ಗಾವಿ, ನಾಗರಾಜ ಆನ್ವೇರಿ, ದಾನಪ್ಪ ಚೂರಿ, ಮಹೇಶ ಗುಬ್ಬಿ, ಪರಮೇಶಪ್ಪ ಗೂಳಣ್ಣನವರ, ವಿಕ್ರಮ್ ಬಳ್ಳಾರಿ, ಪ್ರಶಾಂತ ಬಳ್ಳಾರಿ, ಅಶೋಕ ದುಮ್ಮಾಳ, ಸಂತೋಷ ಹಿರೇಮಠ, ಗಿರೀಶ ಬಳ್ಳಾರಿ ಸೇರಿದಂತೆ ಸಂಘದ ಪದಾಧಿಕಾರಿಗಳು ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣದಲ್ಲಿಯೇ ಪ್ರಥಮ ಹಂತದ ಚಿಕಿತ್ಸೆ ದೊರೆಯಬೇಕು: ಬೊಮ್ಮಾಯಿ
ಹಾನಗಲ್ಲ ತಾಲೂಕು ಬರ ಘೋಷಣೆ ನೆಪಕ್ಕೆ ಮಾತ್ರ, ಪೂರ್ಣ ಬರ ಘೋಷಿಸಬೇಕು