ಗುದ್ನೇಪ್ಪನಮಠದ ಜಾಗದಲ್ಲಿ ಕಟ್ಟಡ ನಿರ್ಮಾಣ ಕೈ ಬಿಡಿ

KannadaprabhaNewsNetwork |  
Published : Nov 08, 2025, 02:30 AM IST
7ಕೆಕೆಆರ್1:ಕುಕನೂರು ಪಟ್ಟಣದಲ್ಲಿ ಅಪಾರ ಪ್ರಮಾಣದಲ್ಲಿ ಗುದ್ನೇಪ್ಪನಮಠ ಭಕ್ತರು ಪ್ರತಿಭಟನೆಯಲ್ಲಿ ಭಾಗಿಯಾದರು. | Kannada Prabha

ಸಾರಾಂಶ

ಗುದ್ನೇಶ್ವರ ಐತಿಹ್ಯ ಸುಮಾರು 800 ವರ್ಷಗಳಷ್ಟು ಇದ್ದು. ಶಾಂತಿ, ನೆಮ್ಮದಿ, ಸಹನೆಗಾಗಿ ಜನ ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ.

ಕುಕನೂರು: ಪಟ್ಟಣದ ಗುದ್ನೇಪ್ಪನಮಠದಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣ ಕೈ ಬಿಡುವಂತೆ ಒತ್ತಾಯಿಸಿ ಪಟ್ಟಣದ ಗುದ್ನೇಪ್ಪನಮಠದಿಂದ ನಿವಾಸಿಗಳು ಹಾಗೂ ನಾನಾ ಸಂಘಟನೆಗಳ ಪ್ರಮುಖರು ಹಾಗೂ ಸುಮಾರು ಎರಡು ಸಾವಿರದಷ್ಟು ಜನರು ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಟಿಪ್ಪು ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಆಗಮಿಸಿ ವೀರಭದ್ರಪ್ಪ ವೃತ್ತದಲ್ಲಿ ಪ್ರತಿಭಟಿಸಿ ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿಗೆ ಮನವಿ ಸಲ್ಲಿಸಿದರು.

ಮುಖಂಡ ನವೀನ ಗುಳಗಣ್ಣವರ ಮಾತನಾಡಿ, ಗುದ್ನೇಶ್ವರ ಐತಿಹ್ಯ ಸುಮಾರು 800 ವರ್ಷಗಳಷ್ಟು ಇದ್ದು. ಶಾಂತಿ, ನೆಮ್ಮದಿ, ಸಹನೆಗಾಗಿ ಜನ ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಈಗಾಗಲೇ ಇಲ್ಲಿನ ಜನರು ಸುಮಾರು 50 ಎಕರೆ ಭೂಮಿಯನ್ನು ನವೋದಯ, ಐಟಿಐ, ನೀರಿನ ಟ್ಯಾಂಕ್, ಮೊರಾರ್ಜಿ ಶಾಲೆಗೆ ನೀಡಿದ್ದಾರೆ.ಮತ್ತೆ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದು ಯಾವ ನ್ಯಾಯ. ಶಾಸಕ ಬಸವರಾಜ ರಾಯರಡ್ಡಿ, ಗುದ್ನೇಪ್ಪನಮಠದ ಜನರ ತ್ಯಾಗ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಮಾತನಾಡಿ, ಶಾಸಕ ಬಸವರಾಜ ರಾಯರಡ್ಡಿ ಗುದ್ನೇಶ್ವರ ಸ್ವಾಮೀಯ ಪುರಾಣ ಓದಬೇಕು. ಗುದ್ನೇಶ್ವರ ಸ್ವಾಮಿಯ ಮಹಿಮೆ ಕಂಡು ಆಗಿನ ಕುಂತಳ ರಾಜ ಬಿತ್ತನೆ ಮಾಡಿಕೊಂಡಷ್ಟು ಭೂಮಿ ನಿಮ್ಮದು ಎಂದು ಹೇಳಿದರಂತೆ, ಗುದ್ನೇಶ್ವರ ಸ್ವಾಮೀ ತಾಸೋತ್ತಿನಲ್ಲಿ ನೂರಾರು ಎಕರೆ ಭೂಮಿಯಲ್ಲಿ ಹುಣಸೆ ಮರ ಬಿದ್ದಿದರು. ಅಂತಹ ಶ್ರೇಷ್ಠ ನೆಲದ ಮಹತ್ವ ಶಾಸಕ ರಾಯರಡ್ಡಿ ಅರಿಯಬೇಕು. ದೇವಸ್ಥಾನ ಭೂಮಿ ಮುಜರಾಯಿ ಇಲಾಖೆಗೆ ಸೇರಿಲ್ಲ. ಧಾರ್ಮಿಕ ದತ್ತಿ ಇಲಾಖೆಗೆ ಸೇರಿದೆ ಎಂದು ದಾಖಲಾತಿಗಳಿಲ್ಲ. ತಹಸೀಲ್ದಾರರು ಇದು ವರೆಗಿನ ಗುದ್ನೇಶ್ವರ ದೇವಸ್ಥಾನದ ಕಾಣಿಕೆ ಲೆಕ್ಕ ಕೊಡಬೇಕು. ಗುದ್ನೇಪ್ಪನಮಠದ ಕೆಲವು ಜನರ ಮೇಲೆ ಸಹ ಕೇಸ್ ಮಾಡಿಸಿದ್ದಾರೆ. ಅವರಿಂದಲೂ ಸಹ ಕಾನೂನು ಉಲ್ಲಂಘನೆಯಾಗುತ್ತಿದ್ದು, ಅವರ ಶಾಸಕತ್ವ ಅನರ್ಹವಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುದ್ನೇಪ್ಪನಮಠದ ಜಾಗದ ಕುರಿತು ಪ್ರಕರಣ ಕೋರ್ಟಿನಲ್ಲಿದೆ. ಆ ಭೂಮಿಯನ್ನು ದೇವಸ್ಥಾನದ ಸೇವಾದಾರರಿಗೆ ನೀಡಿತ್ತು. ದೇವಸ್ಥಾನದ ಭೂಮಿ ತಂಟೆಗೆ ಬಂದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ಅಲ್ಲದೆ ಗುದ್ನೇಪ್ಪನಮಠದ ದೇವಸ್ಥಾನಕ್ಕೆ ಬೀಗ ಹಾಕಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಸರಿಯಲ್ಲ. ನ್ಯಾಯಾಲಯದ ತೀರ್ಪಿನವರೆಗೂ ಯಾರೂ ಅಧಿಕಾರಿಗಳು ಗುದ್ನೇಪ್ಪನಮಠ ಪ್ರವೇಶಿಸಬಾರದು. ಕಾನೂನು ಭಂಗ ಮಾಡಬಾರದು ಎಂದರು.

ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ, ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರು, ಮುಖಂಡ ಶರಣಪ್ಪ ಗುಂಗಾಡಿ, ಮಾರುತಿ ಹೊಸಮನಿ, ವಕೀಲ ಜಗದೀಶ ತೊಂಡಿಹಾಳ, ಮುಖಂಡ ಮಂಜುನಾಥ ನಾಡಗೌಡರ್ ಮಾತನಾಡಿದರು.

ನೀಲಗುಂದ ಹಾಗೂ ಗುದ್ನೇಪ್ಪನಮಠದ ಶ್ರೀಪ್ರಭುಲಿಂಗ ದೇವರು, ಸ್ಥಳೀಯ ಅನ್ನದಾನೀಶ್ವರ ಶಾಖಾಮಠದ ಶ್ರೀಮಹಾದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಿವಕುಮಾರ ನಾಗಲಾಪೂರಮಠ, ಕರಬಸಯ್ಯ ಬಿನ್ನಾಳ, ಮಹೇಶ ಕಲ್ಮಠ, ಸಿದ್ಲಿಂಗಯ್ಯ ಬಂಡಿ, ವಿರೇಶ ಸಬರದ, ಚನ್ನಬಸಯ್ಯ ಧೂಪದ, ವೀರಯ್ಯ, ರಾಜು ದ್ಯಾಂಪೂರು, ಪಪಂ ಸದಸ್ಯರಾದ ಜಗನ್ನಾಥ ಭೋವಿ, ಸಿದ್ಲಿಂಗಯ್ಯ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ಚೌದರಿ, ಲಕ್ಷ್ಮಣ ಕಾಳಿ, ಮಹೇಶ್ವರ ಸಾವಳಗಿಮಠ, ಪರಶುರಾಮ ಯಡಿಯಾಪೂರ ಹಾಗೂ ಗುದ್ನೇಪ್ಪನಮಠದ ನಿವಾಸಿಗಳು, ಮಹಿಳೆಯರು ಅಪಾರ ಪ್ರಮಾಣದಲ್ಲಿ ಭಾಗಿಯಾಗಿಯಾಗಿದ್ದರು.

ಬೃಹತ್ ಪ್ರತಿಭಟನಾ ಪಾದಯಾತ್ರೆ

ಗುದ್ನೇಶ್ವರ ದೇವಸ್ಥಾನದ ಭೂಮಿ ನಮ್ಮ ಭೂಮಿ, ನಮ್ಮ ಹಕ್ಕು ಎಂದು ಒತ್ತಾಯಿಸಿ ಸುಮಾರು ಎರಡು ಸಾವಿರ ಜನ ಗುದ್ನೇಪ್ಪನಮಠದಿಂದ ಸುಮಾರು ಅರ್ಧ ಕಿಮಿನಷ್ಟು ದೂರದಷ್ಟು ಸಾಗುವಂತೆ ಸರತಿಯಲ್ಲಿ ಪಾದಯಾತ್ರೆ ಮೂಲಕ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟಿಸಿದರು. ಅಪಾರ ಪ್ರಮಾಣದಲ್ಲಿ ಮಹಿಳೆಯರು ಸಹ ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ