ಕೇರಳ ರಾಜ್ಯದ ಶಾಲೆಗಳಲ್ಲಿ ಕನ್ನಡ ಭಾಷೆ ಕಡೆಗಣನೆಗೆ ತಡೆ

KannadaprabhaNewsNetwork | Updated : Jun 02 2025, 08:23 AM IST
ಗಡಿನಾಡು ಕಾಸರಗೋಡಿನಲ್ಲಿ ಕನ್ನಡಿಗರ, ಕನ್ನಡ ಮಾಧ್ಯಮ ಶಾಲೆಗಳ ಮೇಲೆ ಮಲಯಾಳಿ ಭಾಷೆ ಹೇರುವ ಕೇರಳ ಸರ್ಕಾರದ ಹುನ್ನಾರಕ್ಕೆ ಮತ್ತೆ ಹಿನ್ನಡೆ ಉಂಟಾಗಿದೆ.

 ಮಂಗಳೂರು : ಗಡಿನಾಡು ಕಾಸರಗೋಡಿನಲ್ಲಿ ಕನ್ನಡಿಗರ, ಕನ್ನಡ ಮಾಧ್ಯಮ ಶಾಲೆಗಳ ಮೇಲೆ ಮಲಯಾಳಿ ಭಾಷೆ ಹೇರುವ ಕೇರಳ ಸರ್ಕಾರದ ಹುನ್ನಾರಕ್ಕೆ ಮತ್ತೆ ಹಿನ್ನಡೆ ಉಂಟಾಗಿದೆ. ಕೇರಳದ ಎಲ್ಲ ಶಾಲೆಗಳಲ್ಲಿ ಮಲಯಾಳವನ್ನು ಪ್ರಥಮ ಭಾಷೆಯನ್ನಾಗಿ ಕಡ್ಡಾಯಗೊಳಿಸುವ ಹಾಗೂ ಮಲಯಾಳ ಭಾಷಾ ಕಲಿಕೆ ಹೇರುವ ಕೇರಳ ಸರ್ಕಾರದ ಪ್ರಯತ್ನಕ್ಕೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ಸಿಕ್ಕಿಲ್ಲ. 

ಈ ಹಿಂದಿನ ಉಮ್ಮನ್‌ಚಾಂಡಿ ನೇತೃತ್ವದ ಯುಡಿಎಫ್ ಸರ್ಕಾರ 2015ರಲ್ಲಿ ವಿಧಾನಸಭೆಯಲ್ಲಿ ಅಂಗೀಕರಿಸಿದ ಮಲಯಾಳಂ ಭಾಷಾ ಮಸೂದೆಗೆ ರಾಷ್ಟ್ರಪತಿ ಅನುಮತಿ ನಿರಾಕರಿಸಿದ್ದಾರೆ.

ಮಸೂದೆ ಅಂಗೀಕಾರವಾದ ದಿನದಿಂದಲೇ ಅದರ ವಿರುದ್ಧ ಕೇರಳದ ಕನ್ನಡ ಮತ್ತು ತಮಿಳು ಭಾಷಾ ಅಲ್ಪಸಂಖ್ಯಾತರ ಸಂಘಟನೆಗಳು ತೀವ್ರ ಹೋರಾಟ ನಡೆಸಿದ್ದವು. ಶಾಲೆಗಳಲ್ಲಿ ಮಲಯಾಳವನ್ನು ಪ್ರಥಮ ಭಾಷೆಯನ್ನಾಗಿಸಿ ಅದನ್ನು ಹೇರುವುದರಿಂದ ರಾಜ್ಯದ ಕನ್ನಡ ಮತ್ತು ತಮಿಳು ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಿದಂತಾಗುತ್ತದೆ ಎಂದು ಆರೋಪಿಸಿದ್ದವು. ಹೀಗಾಗಿ, ಅಂದು ಕೇರಳದ ರಾಜ್ಯಪಾಲರಾಗಿದ್ದ ನ್ಯಾ.ಪಿ.ಸದಾಶಿವನ್ ಅವರು ಮಸೂದೆಗೆ ಅಂಗೀಕಾರ ನೀಡಿರಲಿಲ್ಲ. ಬಳಿಕ ಅದನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಿದ್ದರು.

ರಾಷ್ಟ್ರಪತಿಯವರು ಮಸೂದೆಯ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಅಭಿಪ್ರಾಯ ತಿಳಿಸುವಂತೆ ಸೂಚಿಸಿದ್ದರು. ಅದರಂತೆ 2024ರಲ್ಲಿ ಕೇಂದ್ರ ಗೃಹ ಸಚಿವಾಲಯ ಕೇರಳ ಸರ್ಕಾರಕ್ಕೆ ಮಸೂದೆ ಸಂಬಂಧ ಕೆಲವು ಸಂಶಯಗಳನ್ನು ಎತ್ತಿ ವಿವರಣೆ ಕೋರಿತ್ತು. ಆದರೆ, ಕೇರಳ ಸರ್ಕಾರ ಸಮರ್ಪಕ ಉತ್ತರ ನೀಡಿರಲಿಲ್ಲ. ಹೀಗಾಗಿ, ಗೃಹ ಸಚಿವಾಲಯ ಆ ಮಸೂದೆಯನ್ನು ಅಂಗೀಕರಿಸದಂತೆ ಸಲಹೆ ನೀಡಿತ್ತು. ಅದನ್ನು ಪರಿಶೀಲಿಸಿ ಪ್ರಸ್ತುತ ಮಸೂದೆಗೆ ರಾಷ್ಟ್ರಪತಿಯವರು ಅನುಮತಿ ನಿರಾಕರಿಸಿ ವಾಪಸ್‌ ಕಳುಹಿಸಿದ್ದಾರೆ.

ಮಸೂದೆಯಲ್ಲಿ ಏನಿದೆ?:

ಕೇರಳದ ಎಲ್ಲ ಶಾಲೆಗಳಲ್ಲಿ ಮಲಯಾಳವನ್ನು ಪ್ರಥಮ ಭಾಷೆಯನ್ನಾಗಿ ಕಲಿಸಬೇಕು. ಕಾನೂನು, ನಿರ್ಮಾಣ, ಜಿಲ್ಲಾ ನ್ಯಾಯಾಲಯಗಳ ವ್ಯವಹಾರಗಳು, ಕೇರಳ ಲೋಕಸೇವಾ ಆಯೋಗ (ಪಿಎಸ್‌ಸಿ)ದ ಪರೀಕ್ಷೆಗಳನ್ನು ಮಲಯಾಳಂ ಭಾಷೆಯಲ್ಲೇ ನಡೆಸಬೇಕು. ಮಲಯಾಳಂ ಭಾಷೆ ಕಲಿತವರಿಗೆ ಪ್ರೊಫೆಷನಲ್ (ವೃತ್ತಿಪರ) ಕೋರ್ಸ್‌ಗಳ ಪ್ರವೇಶಕ್ಕೆ ಆದ್ಯತೆ ನೀಡಬೇಕು. 

ಸರ್ಕಾರಿ, ಸ್ಥಳೀಯಾಡಳಿತ ಸಂಸ್ಥೆಗಳು ಹಾಗೂ ಸಹಕಾರಿ ಇಲಾಖೆಯ ಎಲ್ಲ ನಾಮಫಲಕಗಳನ್ನು ಮಲಯಾಳಂ ಭಾಷೆಯಲ್ಲೇ ಹಾಕಬೇಕು ಎಂಬುದು ಮಸೂದೆಯ ಪ್ರಮುಖ ಅಂಶಗಳಾಗಿದ್ದವು.ಮಲಯಾಳಂ ಶಿಕ್ಷಕರ ನೇಮಕ ಆದೇಶ ವಾಪಸ್‌: ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕಿನ ಐದು ಕನ್ನಡ ಮಾಧ್ಯಮ ಪ್ರೌಢಶಾಲೆಗಳಲ್ಲಿ ತೆರವಾದ ಮುಖ್ಯೋಪಾಧ್ಯಾಯ ಸ್ಥಾನಗಳಿಗೆ ಮಲಯಾಳಂ ಅಧ್ಯಾಪಕರನ್ನು ಭಡ್ತಿ ಮೂಲಕ ತುಂಬಲು ತಿರುವನಂತಪುರಂ ಡಿ.ಜಿ.ಇ. ಆದೇಶ ಹೊರಡಿಸಿತ್ತು. ಬಳಿಕ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಿ ಆದೇಶ ವಾಪಸ್‌ ಪಡೆಯುವಂತೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಆದೇಶವನ್ನು ವಾಪಸ್‌ ಪಡೆಯಲಾಗಿದೆ.

ನಮ್ಮ ಬೇಡಿಕೆಗೆ ರಾಷ್ಟ್ರಪತಿಗಳು ಸ್ಪಂದಿಸಿದ್ದಾರೆ. ಭಾಷಾ ಅಲ್ಪಸಂಖ್ಯಾತರಿರುವ ಗಡಿನಾಡಿನ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯ ಮಾಡಬಾರದು. ಬೇಕಿದ್ದರೆ ಮಲಯಾಳಂನ್ನು ಐಚ್ಛಿಕ ವಿಷಯ ಎಂದು ಮಾಡಲಿ. ಇದರ ವಿರುದ್ಧ ಅಂದು ಎಲ್ಲ ಕನ್ನಡಿಗರು ಹೋರಾಟ ನಡೆಸಿದ ಪರಿಣಾಮ ಈಗ ನಮಗೆ ಗೆಲುವಾಗಿದೆ.

 ಮುರಳೀಧರ ಬಳ್ಳಕುರಾಯ, ಅಧ್ಯಕ್ಷರು, ಕರ್ನಾಟಕ ಏಕೀಕರಣ ಸಮಿತಿ ಕಾಸರಗೋಡು.

ಕನ್ನಡ ಪ್ರೌಢಶಾಲೆಗಳಿಗೆ ಮಲಯಾಳಿ ಭಾಷಿಕ ಮುಖ್ಯ ಶಿಕ್ಷಕರ ನೇಮಕದ ಆದೇಶ ಬಂದ ಕೂಡಲೇ ಇದನ್ನು ಕೇರಳ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಭಾಷಾ ಅಲ್ಪಸಂಖ್ಯಾತರ ಪ್ರದೇಶದಲ್ಲಿ ಈ ರೀತಿಯ ಆದೇಶ ಮಾಡುವಂತಿಲ್ಲ ಎಂಬುದನ್ನು ಮನವರಿಕೆ ಮಾಡಿದ ಕಾರಣ ಆದೇಶವನ್ನು ವಾಪಸ್‌ ಪಡೆಯಲಾಗಿದೆ.

- ಪ್ರದೀಪ್‌, ಕಾರ್ಯದರ್ಶಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ

ಕಾಸರಗೋಡು ಗಡಿನಾಡೇ ವಿನಃ ಹೊರನಾಡು ಅಲ್ಲ. ಇಲ್ಲಿರುವ ಕನ್ನಡಿಗರು, ತಮಿಳರು ಇಲ್ಲೇ ಹುಟ್ಟಿ ಬೆಳೆದವರು. ನಮ್ಮ ಭಾಷಾ ಅಲ್ಪ ಸಂಖ್ಯಾತರ ಹಕ್ಕನ್ನು ಕಸಿಯುವುದು ಸರಿಯಲ್ಲ. ಈ ಕುರಿತ ಮಸೂದೆಯನ್ನು ವಾಪಸ್‌ ಮಾಡಿರುವ ರಾಷ್ಟ್ರಪತಿಗಳದ್ದು ಸರಿಯಾದ ತೀರ್ಮಾನ.

- ಡಾ.ಜಯಪ್ರಕಾಶ್‌ ನಾರಾಯಣ್‌, ಅಧ್ಯಕ್ಷರು, ಕ.ಸಾ.ಪ ಕೇರಳ ಘಟಕ.

Read more Articles on