ಕುಕನೂರು: ಪಟ್ಟಣದ ಗುದ್ನೇಪ್ಪನಮಠದ ಸರ್ವೇ ನಂ.78ರಲ್ಲಿ ತಾಲೂಕಾಡಳಿತ ಕಚೇರಿ ನಿರ್ಮಾಣ ಕೈ ಬಿಡುವಂತೆ ಗುದ್ನೇಶ್ವರ ಸ್ವಾಮಿ ಭಕ್ತರಿಂದ ನ.೭ರ ಶುಕ್ರವಾರ ಪಾದಯಾತ್ರೆ ಮೂಲಕ ಶಾಂತಿಯುತ ಪ್ರತಿಭಟನೆ ಜರುಗಲಿದೆ ಎಂದು ಮಾರುತಿ ಹೊಸಮನಿ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗುದ್ನೇಪ್ಪನಮಠ ಗ್ರಾಮದಲ್ಲಿ ಮಿನಿ ವಿಧಾನಸೌಧ, ನ್ಯಾಯಾಲಯ, ಬುದ್ಧ,ಬಸವ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ತಾಲೂಕು, ಜಿಲ್ಲಾಡಳಿತ ಗುದ್ನೇಪ್ಪನಮಠ ಗ್ರಾಮಸ್ಥರ ವಿರೋಧದ ನಡುವೆ ಸಿದ್ಧತೆ ನಡೆಸುತ್ತಿದೆ. ಪರಂಪರೆಯಲ್ಲಿ ಗುದ್ನೇಶ್ವರಸ್ವಾಮಿ ಪಂಚಕಳಸ ರಥೋತ್ಸವಕ್ಕೆ ಬರುವ ಭಕ್ತರಿಗೆ ಇಂತಹ ಕಟ್ಟಡಗಳಿಂದ ಸಮಸ್ಯೆಯಾಗುತ್ತದೆ. ಈಗಾಗಲೇ ಗುದ್ನೇಶ್ವರಸ್ವಾಮಿ ದೇವಸ್ಥಾನದ ಜಾಗದಲ್ಲಿ ನವೋದಯ ವಿದ್ಯಾಲಯ, ಕೆಎಲ್ಇ ಕಾಲೇಜ್, ಐಟಿಐ ಕಾಲೇಜ್, ಕುಡಿವ ನೀರಿನ ಟ್ಯಾಂಕ್ ನಿರ್ಮಿಸಿದ್ದರಿಂದ ದೇವಸ್ಥಾನದ ಜಾಗ ಈಗ ಅಲ್ಪಸ್ವಲ್ಪ ಉಳಿದಿದೆ. ಅದನ್ನು ಸೇವಾದಾರರಿಗೆ 198ರಲ್ಲಿ ನೀಡಲಾಗಿದೆ.ಈಗಿನ ಶಾಸಕರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ನ್ಯಾಯ ಕೇಳುವ ಮುಖಂಡರ ಮೇಲೆ ಕೇಸ್ ಮಾಡಿ ಅವರನ್ನು ಹೆದರಿಸುತ್ತಿದ್ದಾರೆ. ಅಧಿಕಾರ ಶಾಶ್ವತವಲ್ಲ ಅದನ್ನು ಅರಿತು ಜನಪ್ರತಿನಿಧಿಗಳು ಕೆಲಸ ಮಾಡಬೇಕು. ನಾವು ಭಕ್ತರು ಸೇರಿ ಗುದ್ನೇಶ್ವರಮಠದ ಜಾಗದ ಉಳವಿಗಾಗಿ ಕುಕನೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದರು.ಮುಖಂಡ ಸುರೇಶ ಬಳೂಟಗಿ ಮಾತನಾಡಿ, ಗುದ್ನೇಪ್ಪನಮಠದ ಕೆಲ ಗ್ರಾಮಸ್ಥರು ದೇವಸ್ಥಾನದ ಆಸ್ತಿ ಉಳಿಸಿ ಎಂದು ಭಕ್ತರಿಗೆ ತಿಳಿಸಲು ಒಂದು ಬ್ಯಾನರ್ ಕಟ್ಟಿದರೆ, ಅದನ್ನು ತಹಸೀಲ್ದಾರರ ೧೨ಜನ ಭಕ್ತರ ಮೇಲೆ ಸಮನ್ಸ್ ಜಾರಿ ಮಾಡಿದ್ದಾರೆ. ಅವರು ರಾತ್ರೋರಾತ್ರಿ ಊರನ್ನು ಬಿಡಬೇಕಾದ ಪರಿಸ್ಥಿತಿ ಬಂದಿದೆ. ಸೇವಾದಾರರಿಗೆ ನೀಡಿದ ಜಾಗದಲ್ಲಿ ತಾಲೂಕಾಡಳಿತ ಕಚೇರಿ ನಿರ್ಮಾಣ ಮಾಡದಿರಲು ಧಾರವಾಡ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ಗ್ರಾಮಸ್ಥರು ತಂದಿದ್ದಾರೆ. ಆದರೂ ಕುಕನೂರು ಬಂದ್ ಮಾಡಿ ಜನರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದರು.
ತಾಪಂ ಮಾಜಿ ಉಪಾಧ್ಯಕ್ಷ ಶಿವಕುಮಾರ ನಾಗಲಾಪೂರಮಠ, ಕರಬಸಯ್ಯ ಬಿನ್ನಾಳ, ಮಹೇಶ ಕಲ್ಮಠ, ಬಸವರಾಜ ಹಾಳಕೇರಿ, ಪಪಂ ಸದಸ್ಯ ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ಜಗನ್ನಾಥ ಭೋವಿ, ಮಲ್ಲಿಕಾರ್ಜುನ ಚೌಧರಿ, ಬಾಲರಾಜ ಗಾಳಿ, ಮಂಜುನಾಥ ನಾಡಗೌಡರ್, ಮಹಾಂತೇಶ ಹೂಗಾರ, ವಿರೇಶ ಸಬರದ್, ಸಾಧೀಕ್ಪಾಷಾ ಖಾಜಿ, ಪಪಂ ಮಾಜಿ ಸದಸ್ಯ ಕನಕಪ್ಪ ಬ್ಯಾಡರ್, ನಾಗಪ್ಪ ಕಲ್ಮನಿ, ಮಧುಸೂಧನ್ ಕಲ್ಮನಿ, ಲಕ್ಷ್ಮಣ ಕಾಳಿ, ವಿನಾಯಕ ಯಾಳಗಿ, ಕಳಕೇಶ ಹತ್ತಿಕಟಗಿ, ವಿನಯ್ ಸರಗಣಚಾರ್, ಚಂದ್ರು ಬಗನಾಳ, ರಾಜು ದ್ಯಾಂಪೂರ ಸೇರಿದಂತೆ ಅನೇಕರು ಇದ್ದರು.