ಕನ್ನಡಪ್ರಭ ವಾರ್ತೆ, ತುಮಕೂರುಕೈಗಾರಿಕೆ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ರೈತರ ಕೃಷಿ ಜಮೀನನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಕೆಐಎಡಿಬಿಯ ಈ ದಂಧೆ ತಡೆಗೆ ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು ಎಂದು ಸಂಯುಕ್ತ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ರಂಗನಾಥ್ ಹಾಗೂ ಕಾರ್ಯದರ್ಶಿ ಎಚ್.ಸಿ. ಸುರೇಶ್ ಮನವಿ ಮಾಡಿದರು.ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು, ಸರ್ಕಾರ ಕೃಷಿಯನ್ನು ಕಡೆಗಣಿಸಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡುತ್ತಿರುವುದರ ಹಿಂದೆ ದುರುದ್ದೇಶವಿದೆ. ಬಿಡದಿ ಬಳಿ ಕೆಐಎಡಿಬಿ ರೈತರಜಮೀನು ಸ್ವಾಧೀನಪಡಿಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.ಎಚ್.ಸಿ.ಸುರೇಶ್ ಮಾತನಾಡಿ, ಈಗಿನ ರಾಜಕೀಯ ಪಕ್ಷಗಳಲ್ಲಿ, ಸರ್ಕಾರಗಳಲ್ಲಿ ಮೌಲ್ಯಾಧಾರಿತ ರಾಜಕಾರಣ ಕಾಣುತ್ತಿಲ್ಲ, ಜನರ ಸಮಸ್ಯೆ ಕೇಳುವ ಸೌಜನ್ಯವಿಲ್ಲ, ಜನರ ಅಭಿಪ್ರಾಯಕ್ಕೆ ಮನ್ನಣೆ ಇಲ್ಲ. ಬಿಡದಿ ಬಳಿಯ ರೈತರು ತಮ್ಮ ಜಮೀನು ನೀಡುವುದಿಲ್ಲ ಎಂದು ಹೋರಾಟ ಮಾಡುತ್ತಿದ್ದರೂ ಸರ್ಕಾರ ಬಲವಂತವಾಗಿ ಜಮೀನು ಪಡೆಯಲು ಹೊರಟಿದೆ. ರೈತರನ್ನುಅಲ್ಲಿಂದ ಗುಳೆ ಎಬ್ಬಿಸುವ ಹುನ್ನಾರ ನಡೆದಿದೆ. ಇದಕ್ಕೆ ಅವಕಾಶ ಮಾಡಬಾರದು, ರಾಜ್ಯಪಾಲರು ಮಧ್ಯಪ್ರವೇಶಿಸಿ ರೈತ ವಿರೋಧಿ ಸರ್ಕಾರವನ್ನು ವಜಾಗೊಳಿಸಬೇಕು ಎಂದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್. ರಂಗನಾಥ್ ಮಾತನಾಡಿ, ಸಂಯುಕ್ತ ಜನತಾದಳ ರಾಜ್ಯಾಧ್ಯಕ್ಷ ಮಹಿಮಾ ಪಟೆಲ್ ಅವರು ಸಾಮಾಜಿಕ ಚಿಂತನೆ, ಸಮಾನತೆಯ ತತ್ವ ಆದರ್ಶಗಳೊಂದಿಗೆ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಇದೇ ಆಶಯ ಹೊಂದಿರುವ ನಾಯಕರು ಜೆಡಿಯು ಸೇರಲು ಸ್ವಾಗತಿಸುತ್ತೇವೆ. ಪಕ್ಷವನ್ನು ಸಂಘಟನೆ ಮಾಡುತ್ತಾ ಮುಂಬರುವ ಚುನಾವಣೆಗಳಲ್ಲಿ ಜೆಡಿಯು ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ.ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪಧಿಸುತ್ತಾರೆ ಎಂದರು.ಆಗ್ನೇಯ ಪದವಿಧರ ಕ್ಷೇತ್ರದ ಜೆಡಿಯು ಅಭ್ಯರ್ಥಿಯಾಗಿ ಡಾ.ಕೆ.ನಾಗರಾಜ್ ಅವರನ್ನು ಘೋಷಿಸಿದ್ದು ಅವರು ಕ್ಷೇತ್ರದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ಮತದಾರರ ನೋಂದಣಿಗೂ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ.ಪ್ರಬಲ ಅಭ್ಯರ್ಥಿಯಾಗಿ ನಾಗರಾಜು ಸ್ಪರ್ಧೆಯಲ್ಲಿರುತ್ತಾರೆ ಎಂದು ಹೇಳಿದರು.ರಾಜ್ಯಉಪಾಧ್ಯಕ್ಷ ಟಿ.ವಿ. ಶಿವರಾಮು ಮಾತನಾಡಿ, ಮೈಸೂರಿನ ಸೌಂದರರಾಜ್ ಎಂಬಾತ ಬಡ ಮಹಿಳೆಯರಿಂದ ಚಿನ್ನ ಅಡವಿಡಿಸಿಕೊಂಡು ಮಾರಾಟ ಮಾಡಿ ಕೋಟ್ಯಾಂತರ ರು..ವಂಚನೆ ಮಾಡಿದ್ದಾನೆ. ಪೊಲೀಸ್ ಇಲಾಖೆ ಆತನ ವಿರುದ್ಧಕ್ರಮ ತೆಗೆದುಕೊಳ್ಳುವ ಬಗ್ಗೆ ನಂಬಿಕೆ ಇಲ್ಲ. ಸೌಂದರರಾಜ್ ವಿರುದ್ಧ ಈಗಾಗಲೇ 250 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಪ್ರಭಾವಿಯಾಗಿರುವ ಆರೋಪಿಯ ಪ್ರಕರಣಗಳು ಮುಚ್ಚಿಹೋಗುವ ಸಾಧ್ಯತೆಗಳಿವೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿ ತನಿಖೆ ನಡೆಸಬೇಕು. ಚಿನ್ನ ಕಳೆದುಕೊಂಡ ಮಹಿಳೆಯರಿಗೆ ನ್ಯಾಯಕೊಡಿಸಬೇಕು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ಅವರನ್ನು ಒತ್ತಾಯಿಸಿದರು. ನಗರ ಕಾರ್ಯದರ್ಶಿ ಕುದೂರು ಬಸಣ್ಣ ಮತ್ತಿತರರು ಹಾಜರಿದ್ದರು.