ರೈತರ ಒಕ್ಕಲೆಬ್ಬಿಸಿ ತೊಂದರೆ ಕೊಡುತ್ತಿರುವುದು ನಿಲ್ಲಿಸಿ- ರವಿಕಾಂತ ಅಂಗಡಿ ಎಚ್ಚರಿಕೆ

KannadaprabhaNewsNetwork |  
Published : Aug 20, 2025, 02:00 AM IST
ಪೋಟೊ-೧೯ ಎಸ್.ಎಚ್.ಟಿ.೧ಕೆ- ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ವಿತರಣೆ ಮಾಡುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸಲು ಶಿರಹಟ್ಟಿಯಿಂದ ಪಾದಯಾತ್ರೆ ಹೊರಟಿರುವುದು. | Kannada Prabha

ಸಾರಾಂಶ

ಹಲವು ದಶಕಗಳಿಂದ ಬಗರಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡದೇ ಅನ್ಯಾಯ ಮಾಡಿರುವ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿದರು. ಉಳುಮೆ ಮಾಡುವ ರೈತರಿಗೆ ಹಕ್ಕುಪತ್ರ ನೀಡದೇ ಒಕ್ಕಲೆಬ್ಬಿಸಿ ಅವರ ವಿರುದ್ಧ ಆದೇಶ ಮಾಡುವ ಕ್ರಮ ಸರಿಯಲ್ಲ ಎಂದು ಉತ್ತರ ಕರ್ನಾಟಕ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷ ರವಿಕಾಂತ ಅಂಗಡಿ ಎಚ್ಚರಿಸಿದರು.

ಶಿರಹಟ್ಟಿ: ಹಲವು ದಶಕಗಳಿಂದ ಬಗರಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡದೇ ಅನ್ಯಾಯ ಮಾಡಿರುವ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿದರು. ಉಳುಮೆ ಮಾಡುವ ರೈತರಿಗೆ ಹಕ್ಕುಪತ್ರ ನೀಡದೇ ಒಕ್ಕಲೆಬ್ಬಿಸಿ ಅವರ ವಿರುದ್ಧ ಆದೇಶ ಮಾಡುವ ಕ್ರಮ ಸರಿಯಲ್ಲ ಎಂದು ಉತ್ತರ ಕರ್ನಾಟಕ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷ ರವಿಕಾಂತ ಅಂಗಡಿ ಎಚ್ಚರಿಸಿದರು.ಮಂಗಳವಾರ ಶಿರಹಟ್ಟಿ ಪಟ್ಟಣದ ಫಕೀರೇಶ್ವರ ಮಠದಿಂದ ಬೃಹತ್ ಸಂಖ್ಯೆಯಲ್ಲಿ ಪಾದಯಾತ್ರೆ ನಡೆಸಿ ಸರ್ಕಾರ ಮತ್ತು ಅಧಿಕಾರಿಗಳ ಧೋರಣೆ ವಿರುದ್ದ ಹರಿಹಾಯ್ದರು. ನೆಹರು ವೃತ್ತದಲ್ಲಿ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದರು. ನಾವು ಕೈಗೊಂಡ ಪಾದಯಾತ್ರೆ ಗದಗ ನಗರದ ಜಿಲ್ಲಾಡಳಿತ ಭವನದವರೆಗೆ ಸಾಗಿ ಭವನದ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದರು. ರಾಜ್ಯದಲ್ಲಿ ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ಎಲ್ಲ ರೈತರಿಗೆ ಹಕ್ಕುಪತ್ರ ವಿತರಣೆ ಮಾಡಿದ್ದೇವೆ ಎಂದು ಬೊಬ್ಬೆಹೊಡೆಯುವ ರಾಜ್ಯ ಸರ್ಕಾರ ರೈತ ಸಮುದಾಯಕ್ಕೆ ಉತ್ತರ ನೀಡಬೇಕು. ಕೇವಲ ಸರ್ಕಾರಿ ಕಡತಗಳಲ್ಲಿ ಮಾತ್ರ ರೈತರಿಗೆ ಹಕ್ಕುಪತ್ರ ವಿತರಣೆಯಾಗಿದೆ. ಯಾವೊಬ್ಬ ರೈತರಿಗೂ ಹಕ್ಕುಪತ್ರ ಸಿಕ್ಕಿಲ್ಲ ಎಂದು ದೂರಿದರು.ಹಲವು ದಶಕಗಳ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಬಗೆಹರಿಸುವ ಗೋಜಿಗೆ ಹೋಗಿಲ್ಲ. ಕಂಡಕಂಡಲ್ಲಿ ರೈತರೇ ದೇಶದ ಬೆನ್ನೆಲುಬು ಎಂದು ಹೇಳುವ ರಾಜಕಾರಣಿಗಳು ನಿಜವಾಗಿಯೂ ಅವರ ಬೆನ್ನು ಮೂಳೆ ಮುರಿಯುತ್ತಿದ್ದಾರೆ. ರೈತರಿಗ ಹಕ್ಕು ಪತ್ರ ನೀಡಬೇಕು ಎಂದು ಅನೇಕ ಬಾರಿ ಹೋರಾಟ ನಡೆಸಿದರೂ ಗಮನಿಸುತ್ತಿಲ್ಲ ಎಂದು ಆರೋಪಿಸಿದರು.ರಾಜಕಾರಣಿಗಳು ಬರೀ ಬಾಯಿ ಮಾತಿನಲ್ಲಿ ಸಮಾಧಾನ ಪಡಿಸುವುದು ಸರಿಯಲ್ಲ. ಎಲ್ಲ ರೈತರ ಸಮಸ್ಯೆ ಅಲಿಸಿ ಅವರ ಎಲ್ಲ ಸಮಸ್ಯೆಗಳನ್ನು ಅರಿತುಕೊಂಡು ಅನುಷ್ಠಾನಕ್ಕೆ ತರುವ ಪ್ರಯತ್ನ ಆಗಬೇಕು. ಅಕ್ರಮ ಜಮೀನುಗಳನ್ನು ಸಕ್ರಮಗೊಳಿಸಿ ರೈತರ ಬದುಕನ್ನು ಹಸನುಮಾಡುವ ನಿರ್ಧಾರವನ್ನು ಎಲ್ಲ ರಾಜಕಾರಣಿಗಳು ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವರು ಒಂದು ತಾಲೂಕಿಗೆ ಸೀಮಿತ ಎನ್ನುವ ರೀತಿ ನಡೆದುಕೊಳ್ಳಬಾರದು. ಬಹಳ ಅನುಭವಿಗಳಾದ ಸಚಿವರು ರೈತರ ಎಲ್ಲ ಸಮಸ್ಯೆ ಅರಿತವರಾಗಿದ್ದು, ಈ ಬಾರಿಯಾದರೂ ನಮ್ಮ ಹೋರಾಟ ಗಂಭೀರವಾಗಿ ಪರಿಗಣಿಸಿ ಅರಣ್ಯ ಭೂಮಿ ಸಾಗುವಳಿ ಮಾಡುವ ರೈತರು ಕೇವಲ ಗದಗ ತಾಲೂಕಿನಲ್ಲಿ ಮಾತ್ರ ಇಲ್ಲ ಎಂಬುದನ್ನು ಗಮನಿಸಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಇದ್ದಾರೆ ಎನ್ನುವ ವಾಸ್ತವ ಅಂಶವನ್ನು ಅರಿತು ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಪಾದಯಾತ್ರೆ ಫಕೀರೇಶ್ವರ ಮಠದಿಂದ ಆರಂಭಗೊಂಡು ಸೊರಟೂರ ಗ್ರಾಮದ ಮೂಲಕ ನಾಗಾವಿ, ಬೆಳದಡಿ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ಹೋಗಲಿದ್ದು, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ನಮ್ಮ ನ್ಯಾಯಯುತ ಬೇಡಿಕೆ ಈಡೇರುವವರೆಗೂ ಅಹೋರಾತ್ರಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಮಂಜುನಾಥ ಮಾಗಡಿ, ಚಿನ್ನಪ್ಪ ವಡ್ಡರ, ಚಂಬಣ್ಣ ಬೆಂತೂರ, ಪರಶುರಾಮ ಕಟಗಿ, ಶ್ರೀನಿವಾಸ ಬಾರಬಾರ, ಈರಣ್ಣ ಚವ್ಹಾಣ, ಶೇಖಪ್ಪ ಲಮಾಣಿ, ಧರ್ಮಣ್ಣ ಚವ್ಹಾಣ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನ ಮೆರವಣಿಗೆಯಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐತಿಹಾಸಿಕ ಸ್ಮಾರಕ ಮುಂದಿನ ಪೀಳಿಗೆಗೆ ಉಳಿಯಲಿ: ಡಿಸಿ ಸಂಗಪ್ಪ
ಚೇರಂಬಾಣೆ: ವಾರ್ಷಿಕ ಕ್ರೀಡಾ ದಿನಾಚರಣೆ