ಪ್ರವಾಸಿ ತಾಣ ಮಾಂದಲಪಟ್ಟಿಗೆ ಜೀಪುಗಳ ಸಂಚಾರ ಸ್ಥಗಿತ

KannadaprabhaNewsNetwork |  
Published : Jan 04, 2024, 01:45 AM IST
ಚಿತ್ರ : 3ಎಂಡಿಕೆ2 : ಪ್ರವಾಸಿ ತಾಣ ಮಾಂದಲಪಟ್ಟಿಯಲ್ಲಿ ಜೀಪುಗಳು(ಸಂಗ್ರಹ ಚಿತ್ರ)  | Kannada Prabha

ಸಾರಾಂಶ

ವರ್ಷಾಂತ್ಯ ಹಿನ್ನೆಲೆಯಲ್ಲಿ ಮಾಂದಲಪಟ್ಟಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಈ ಸಂದರ್ಭ ಜೀಪು ಚಾಲಕರೊಬ್ಬರು ಪ್ರವಾಸಿಗರೊಬ್ಬರಿಂದ ದುಪಟ್ಟು ಬಾಡಿಗೆ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆಯ ಅಧಿಕಾರಿಗಳು ಬುಧವಾರ ದಿಢೀರ್ ದಾಳಿ ನಡೆಸಿ ನಾಲ್ಕು ವೈಟ್ ಬೋರ್ಡ್ ಖಾಸಗಿ ಜೀಪುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಿಂದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಖಾಸಗಿ ಜೀಪುಗಳು ಸಂಚಾರ ಸ್ಥಗಿತಗೊಳಿಸಿವೆ.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರವಾಸಿ ತಾಣ ಮಾಂದಲಪಟ್ಟಿ ರಸ್ತೆಯಲ್ಲಿ ದಿಢೀರ್ ದಾಳಿ ನಡೆಸಿದ್ದು, ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ವೈಟ್ ಬೋರ್ಡ್ ನಾಲ್ಕು ಖಾಸಗಿ ಜೀಪುಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇತ್ತೀಚೆಗೆ ಜೀಪು ಚಾಲಕರೊಬ್ಬರು ಪ್ರವಾಸಿಗರಿಂದ ಅಧಿಕ ಬಾಡಿಗೆ ಹಣ ಪಡೆದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮಾಂದಲಪಟ್ಟಿಯಲ್ಲಿ ಜೀಪುಗಳ ಸಂಚಾರ ಸ್ಥಗಿತಗೊಂಡಿದೆ. ಪ್ರವಾಸಿ ತಾಣ ಮಾಂದಲಪಟ್ಟಿಯನ್ನು ಪ್ರವಾಸಿಗರ ಸ್ವರ್ಗ ಎಂದೇ ಕರೆಯಲಾಗುತ್ತದೆ. ಇಲ್ಲಿಗೆ ವಾರಾಂತ್ಯದಲ್ಲಿ ಸಾಕಷ್ಟು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಅಲ್ಲಿಗೆ ತೆರಳಲು ರಸ್ತೆಯ ಗುಣಮಟ್ಟ ಕಳಪೆಯಾಗಿರುವ ಪರಿಣಾಮ ಜೀಪುಗಳ ಮೂಲಕವೇ ತೆರಳಬೇಕಾದ ಪರಸ್ಥಿತಿ ಉಂಟಾಗಿದೆ. ಕಳೆದ ಹಲವು ವರ್ಷಗಳಿಂದ ಪ್ರವಾಸಿಗರನ್ನು ಜೀಪು ಚಾಲಕರು ಮಾದಲಪಟ್ಟಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಸುಮಾರು 200ಕ್ಕೂ ಅಧಿಕ ಖಾಸಗಿ ಜೀಪುಗಳು ಇಲ್ಲಿ ಸಂಚರಿಸುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವೊಂದು ಘಟನೆಗಳು ನಡೆದ ಹಿನ್ನೆಲೆಯಲ್ಲಿ ಮಾಂದಲಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಖಾಸಗಿ ಜೀಪುಗಳಿಗೆ ಹಳದಿ ಬೋರ್ಡ್ ಅಳವಡಿಸಬೇಕು ಎಂಬ ನಿಯಮ ರೂಪಿಸಲಾಗಿತ್ತು. ಇದಕ್ಕೆ ಸಾರಿಗೆ ಇಲಾಖೆ ಕೂಡ ಗಡುವು ನೀಡಿತ್ತು. ಆದರೂ ಬೆರಳೆಣಿಕೆ ಮಂದಿ ಮಾತ್ರ ಹಳದಿ ಬೋರ್ಡ್ ಮಾಡಿಸಿಕೊಂಡಿದ್ದರು. ಈ ನಡುವೆ ವೈಟ್ ಬೋರ್ಡ್ ಜೀಪುಗಳ ಮೂಲಕವೇ ಮತ್ತೆ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತಿತ್ತು.ವರ್ಷಾಂತ್ಯ ಹಿನ್ನೆಲೆಯಲ್ಲಿ ಮಾಂದಲಪಟ್ಟಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಈ ಸಂದರ್ಭ ಜೀಪು ಚಾಲಕರೊಬ್ಬರು ಪ್ರವಾಸಿಗರೊಬ್ಬರಿಂದ ದುಪಟ್ಟು ಬಾಡಿಗೆ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆಯ ಅಧಿಕಾರಿಗಳು ಬುಧವಾರ ದಿಢೀರ್ ದಾಳಿ ನಡೆಸಿ ನಾಲ್ಕು ವೈಟ್ ಬೋರ್ಡ್ ಖಾಸಗಿ ಜೀಪುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಿಂದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಖಾಸಗಿ ಜೀಪುಗಳು ಸಂಚಾರ ಸ್ಥಗಿತಗೊಳಿಸಿವೆ.

ಬಾಕ್ಸ್...

ದುಪ್ಪಟ್ಟು ಬಾಡಿಗೆ ಪಡೆದ ಆರೋಪ!

ಪ್ರವಾಸಿಗರನ್ನು ಮಾಂದಲಪಟ್ಟಿಗೆ ಕರೆದೊಯ್ಯಲು ಇಂತಿಷ್ಟು ದರ ಎಂದು ನಿಗದಿ ಪಡಿಸಲಾಗಿದೆ. ಆದರೂ ಕೂಡ ಪ್ರವಾಸಿಗರಿಂದ ಖಾಸಗಿ ಜೀಪೊಂದರ ಚಾಲಕರೊಬ್ಬರು ದುಪಟ್ಟು ಬಾಡಿಗೆ ಪಡೆದಿರುವ ಆರೋಪ ಕೇಳಿ ಬರುತ್ತಿದೆ. ವೈಟ್ ಬೋರ್ಡ್ ವಾಹನದಲ್ಲಿ ಪ್ರವಾಸಿಗರನ್ನು ಕರೆದೊಯ್ಯುವಂತಿಲ್ಲ. ಅಲ್ಲದೆ ಹೆಚ್ಚಿನ ಬಾಡಿಗೆ ಪಡೆದಿದ್ದಾರೆಂಬ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಟ್ಯಾಕ್ಸಿಯಾಗಿ ಪರಿವರ್ತಿಸಲು ನಿರಾಸಕ್ತಿಮಾಂದಲಪಟ್ಟಿಯಲ್ಲಿ ಖಾಸಗಿ ಜೀಪುಗಳಲ್ಲಿ ಪ್ರವಾಸಿಗರನ್ನು ಬಾಡಿಗೆಗೆ ಕರೆದುಕೊಂಡು ಹೋಗುವುದನ್ನು ಈ ಹಿಂದೆ ನಿರ್ಬಂಧಿಸಲಾಗಿತ್ತು. ಖಾಸಗಿ ಜೀಪುಗಳನ್ನು ಹಳದಿ ಬೋರ್ಡ್(ಟ್ಯಾಕ್ಸಿ)ಗೆ ಪರಿವರ್ತಿಸಿ ಚಲಿಸುವಂತೆ ಸೂಚಿಸಲಾಗಿತ್ತು. ಆದರೂ ಇದು ಪಾಲನೆಯಾಗುತ್ತಿರಲಿಲ್ಲ. ಮತ್ತೆ ಎಂದಿನಂತೆ ಜೀಪುಗಳು ಸಂಚಾರ ನಡೆಸುತ್ತಿದ್ದವು. ಇದೀಗ ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿರುವ ಹಿನ್ನೆಲೆಯಲ್ಲಿ ಮತ್ತೆ ಜೀಪುಗಳ ಸಂಚಾರ ಸ್ಥಗಿತಗೊಂಡಿದೆ.

ಕೂಡಲೇ ರಸ್ತೆ ಅಭಿವೃದ್ಧಿಯಾಬೇಕು!

ರಸ್ತೆ ಸಮಸ್ಯೆ ಇರುವುದರಿಂದಲೇ ಮಾಂದಲಪಟ್ಟಿಯಲ್ಲಿ ಹಲವು ವರ್ಷಗಳಿಂದ ಸಮಸ್ಯೆ ಎದುರಾಗುತ್ತಿದೆ. ಪ್ರವಾಸಿಗರು ತಮ್ಮ ವಾಹನ ನಿಲ್ಲಿಸಿ ಜೀಪುಗಳನ್ನೇ ಆಶ್ರಯಿಸಬೇಕಿದೆ. ಮೊದಲು ಇಲ್ಲಿ ರಸ್ತೆ ಸನ್ನಾಗಿತ್ತು. ಬಹುತೇಕ ವಾಹನಗಳು ಸಂಚರಿಸುತ್ತಿತ್ತು. ಆದರೆ ನಂತರ ರಸ್ತೆ ತೀರಾ ಗುಂಡಿಮಯವಾಗಿ ಜೀಪುಗಳು ಮಾತ್ರ ಸಂಚರಿಸುವಂತಾಗಿತ್ತು. ಆದ್ದರಿಂದ ಸಂಬಂಧಿಸಿದ ಇಲಾಖೆ ಆದಷ್ಟು ಬೇಗ ಮಾಂದಲಪಟ್ಟಿಗೆ ರಸ್ತೆ ಅಭಿವೃದ್ಧಿ ಮಾಡಿದರೆ ಈ ಸಮಸ್ಯೆಗಳು ಬರುವುದಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ನಿಯಮ ಬಾಯಿರವಾಗಿ ಸಂಚರಿಸುತ್ತಿದ್ದ ವೈಟ್ ಬೋರ್ಡ್ ಹೊಂದಿದ್ದ ನಾಲ್ಕು ಜೀಪುಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರವಾಸಿಗರೊಬ್ಬರಿಂದ ಅಧಿಕ ಹಣ ಬಾಡಿಗೆ ಪಡೆದಿದ್ದಾರೆಂಬ ಆರೋಪ ಕೇಳಿಬಂದಿತ್ತು. ಆದರೆ ಈ ಬಗ್ಗೆ ನಿಖರ ಮಾಹಿತಿ ಇಲ್ಲ. ಜೀಪು ಚಾಲಕರು ಸರಿಯಾದ ದಾಖಲೆಗಳನ್ನು ಇಟ್ಟು ಜೀಪು ಚಾಲನೆ ಮಾಡಬೇಕು. ಅಲ್ಲದೆ ಕಡ್ಡಾಯವಾಗಿ ಹಳದಿ ಬೋರ್ಡ್‌ಗೆ ಪರಿವರ್ತಿಸಿ ವಾಹನ ಚಾಲನೆ ಮಾಡಬೇಕು.

- ನಾಗರಾಜು, ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಡಿಕೇರಿಜೀಪು ಚಾಲಕರು ಹೆಚ್ಚು ಬಾಡಿಗೆ ಪಡೆದಿದ್ದಾರೆ ಎಂಬ ಬಗ್ಗೆ ಎಲ್ಲೂ ದೂರು ದಾಖಲಾಗಿಲ್ಲ. ಆದರೆ ಕೆಲವರು ವೈಯಕ್ತಿಕ ಪ್ರತಿಷ್ಠೆಯಿಂದ ಆರೋಪ ಮಾಡುತ್ತಿದ್ದಾರೆ ಅಷ್ಟೇ. ಇದರಿಂದ ನಮ್ಮ ಎಲ್ಲ ಜೀಪು ಚಾಲಕರಿಗೆ ಸಮಸ್ಯೆಯಾಗಿದೆ. ನಾವು ಮಾಂದಲಪಟ್ಟಿಗೆ ಮಾತ್ರ ಸೀಮಿತವಾಗಿ ಬಾಡಿಗೆ ಮಾಡುತ್ತಿದ್ದೇವೆ. ಹಳದಿ ಬೋರ್ಡ್ ಮಾಡಿದರೆ ನಮಗೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಆದ್ದರಿಂದ ನಾವು ವೈಟ್ ಬೋರ್ಡ್ ವಾಹನ ಕೇಳುತ್ತಿದ್ದೇವೆ.

-ಶರಣು ಪಾಂಡಿರ, ಕಾರ್ಯದರ್ಶಿ ನಂದಿಮೊಟ್ಟೆ ಜೀಪು ಚಾಲಕರ ಸಂಘನಮ್ಮ ಸಂಘದ ಯಾವುದೇ ವಾಹನ ಚಾಲಕರು ಪ್ರವಾಸಿಗರಿಂದ ದುಪ್ಪಟ್ಟು ಬಾಡಿಗೆ ಪಡೆದುಕೊಂಡಿಲ್ಲ. ವೈಟ್ ಬೋರ್ಡ್ ಹೊಂದಿರುವ ಹಿನ್ನೆಲೆಯಲ್ಲಿ ನಮ್ಮ ಕೆಲವು ಜೀಪು ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಅವರು ಯಾವುದೇ ತಪ್ಪು ಮಾಡಿಲ್ಲ. ನಾವು ಕಾನೂನಿಗೆ ಬೆಲೆ ನೀಡುತ್ತೇವೆ. ನಮ್ಮಲ್ಲಿ ಹಳದಿ ಬೋರ್ಡ್ ಮಾಡಿಸಲು ಎಲ್ಲ ಜೀಪು ಚಾಲಕರು ಒಪ್ಪಿದ್ದಾರೆ.

-ಉಣ್ಣಿಕೃಷ್ಣ, ಅಧ್ಯಕ್ಷರು ಮಡಿಕೇರಿ ಜೀಪು ಚಾಲಕರ ಸಂಘ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ