ಕೋಲಾರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ

KannadaprabhaNewsNetwork |  
Published : May 13, 2024, 12:04 AM IST
೧೨ಕೆಎಲ್‌ಆರ್-೮ಕೋಲಾರ ತಾಲ್ಲೂಕಿನ ಜಂಗಂಬಸಾಪುರ ಮೂರು ಎಕರೆಯಲ್ಲಿ ರೈತ ಬಸವರಾಜು ಬಾಳೆ ಹಣ್ಣಿನ ಬೆಳೆ ಬಿರುಗಾಳಿ ಸಹಿತ ಬಿದ್ದ ಮಳೆಗೆ ಸಂಪೂರ್ಣ ನೆಲಕಚ್ಚಿರುವುದು. | Kannada Prabha

ಸಾರಾಂಶ

ಬಿರುಗಾಳಿ ಸಹಿತ ಬಿದ್ದ ಮಳೆಗೆ ಕೋಲಾರ ನಗರದ ಕೆಲವು ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕೋಲಾರ ಜಿಲ್ಲೆಯ ವಿವಿಧೆಡೆ ಜೋರು ಮಳೆಯಾಗಿದ್ದು ರೈತರ ಮೋಗದಲ್ಲಿ ಮಂದಹಾಸ ಮೂಡಿಸಿದೆ

ಕನ್ನಡಪ್ರಭ ವಾರ್ತೆ ಕೋಲಾರಕಳೆದ ಆರೇಳು ತಿಂಗಳಿನಿಂದ ಬಿಸಿಲಿನ ತಾಪಮಾನಕ್ಕೆ ಕೋಲಾರ ಜನರು ಹೈರಾಣಾಗಿದ್ದು, ಮಳೆಗಾಗಿ ಆಗಸದತ್ತ ಮುಖ ಮಾಡಿದ್ದರು. ಒಂದು ವಾರದಿಂದ ಕೋಲಾರದಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಬಿಸಿಲಿನ ಉಷ್ಣತೆ ಕೊಂಚ ಇಳಿಮುಖ ಕಂಡಿದೆ. ಕೋಲಾರ ಜಿಲ್ಲೆಯಾದ್ಯಂತ ಭಾನುವಾರ ಸಹ ಮಳೆರಾಯನ ಆರ್ಭಟ ಮುಂದುವರೆದಿದ್ದು, ಮಧ್ಯಾಹ್ನ ೨.೩೦ ಕ್ಕೆ ಪ್ರಾರಂಭವಾದ ಮಳೆ ಸುಮಾರ್ ಅರ್ಧ ಗಂಟೆಗಳ ಕಾಲ ಬಿರುಗಾಳಿ ಸಹಿತ ಬಿದ್ದ ಜೋರು ಮಳೆಗೆ ಕೋಲಾರ ಜನರು ತತ್ತರಿಸಿಹೋಗಿದ್ದಾರೆ. ಮಾವು ಬೆಳೆಗಾರರಿಗೆ ಆತಂಕ

ಬಿರುಗಾಳಿ ಸಹಿತ ಬಿದ್ದ ಮಳೆಗೆ ಕೋಲಾರ ನಗರದ ಕೆಲವು ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕೋಲಾರ ನಗರ ಪ್ರದೇಶಕ್ಕಿಂತ ಹುತ್ತೂರು ಹೋಬಳಿ ತಂಬಳ್ಳಿ ಸೇರಿದಂತೆ ಅನೇಕ ಕಡೆ ಬಿರುಗಾಳಿ ಸಹಿತ ಜೋರು ಮಳೆಯಾಗಿದ್ದು ರೈತರ ಮೋಗದಲ್ಲಿ ಮಂದಹಾಸ ಮೂಡಿಸಿದೆ. ಇನ್ನು ಬಿರುಗಾಳಿ ಸಹಿತ ಬಿದ್ದ ಮಳೆಗೆ ಮಾವು ಬೆಳೆಗಾರರಿಗೆ ತೀವ್ರ ಆಂತಕ ಎದುರಾಗಿದ್ದು ಬಿರುಗಾಳಿ ಸಹಿತ ಬಿದ್ದ ಮಳೆಗೆ ಮರದಲ್ಲಿರುವ ಮಾವಿನ ಕಾಯಿ ಉದುರಿ ಬೀಳುವ ಭೀತಿ ಎದುರಾಗಿದೆ.

ಕಳೆದ ಒಂದು ವಾರದಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಬಿಸಿಲಿನ ಉಷ್ಟತೆಗೆ ಕಾದು ಕೆಂಡವಾಗಿದ್ದ ಭೂಮಿ ಕೊಂಚ ತಂಪಾಗಿದೆ. ಇನ್ನು ಮಳೆಯಿಂದ ಕೆರೆ ಕುಂಟೆಗಳಿಗೆ ನೀರು ಹರಿದು ಬರುತ್ತಿದ್ದು ಜಿಲ್ಲೆಯ ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ಕೆಲವು ಭಾಗದಲ್ಲಿ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯಲು ರೈತರು ಭೂಮಿಯನ್ನು ಹದ ಮಾಡುವಲ್ಲಿ ನಿರತರಾಗಿದ್ದಾರೆ.

ನೆಲಕಚ್ಚಿದ ಬಾಳೆ ತೋಟ

ಜೋರು ಮಳೆಯಿಂದ ಕೋಲಾರ ತಾಲೂಕಿನ ಜಂಗಂಬಸಾಪುರ ಸರ್ವೆ ನಂಬರ್ ೭ ಮತ್ತು ೮ ರಲ್ಲಿ ಸುಮಾರು ಮೂರು ಎಕರೆಯಲ್ಲಿ ಬಸವರಾಜು ಎನ್ನುವ ರೈತ ಬೆಳೆದಿದ್ದ ಬಾಳೆ ಹಣ್ಣಿನ ಬೆಳೆ ಬಿರುಗಾಳಿ ಸಹಿತ ಬಿದ್ದ ಮಳೆಗೆ ಸಂಪೂರ್ಣ ನೆಲಕಚ್ಚಿದೆ. ಒಂದು ವಾರದ ನಂತರ ಕಟಾವು ಮಾಡಿಬೇಕಿದ್ದ ಬಾಳೆ ಹಣ್ಣಿನ ಬೆಳೆ ಬಾಳೆ ಕೊನೆಯ ಸಮೇತ ನೆಲಕಚ್ಚಿದ್ದು ಸುಮಾರು ೩ ಲಕ್ಷ ರುಪಾಯಿ ನಷ್ಟವಾಗಿರುವುದಾಗಿ ಅಂದಾಜು ಮಾಡಲಾಗಿದೆ.

ನೆಲಕಚ್ಚಿರುವ ಬಾಳೆ ಕೊನೆಗಳನ್ನು ಕಟಾವು ಮಾಡಿದರೂ ಸರಿಯಾಗಿ ಸರಿಯಾಗಿ ಹಣ್ಣಾಗುವ ಸಾಧ್ಯತೆ ಕಡಿಮೆ. ಮಾಗದೇ ಹಾಕಿದ ಬಂಡವಾಳವೂ ಸಹ ಕೈ ಸೇರುವ ನಿರೀಕ್ಷೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಜಿಲ್ಲಾಡಳಿತ ಬೆಳೆ ನಷ್ಟ ಪರಿಶೀಲಿಸಿ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!