ಕನ್ನಡಪ್ರಭವಾರ್ತೆ ಚಿಕ್ಕಮಗಳೂರುಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ಶಕ್ತಿಗಿಂತ ಯುಕ್ತಿ ಮನೋಸ್ಥೈರ್ಯ ಮುಖ್ಯವಾಗುತ್ತದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ಶಾಲಾ ಶಿಕ್ಷಣ ಇಲಾಖೆ ಮತ್ತು ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ನೇತೃತ್ವದಲ್ಲಿ ನಗರದ ಸಂತಜೋಸೆಫ್ ಪ.ಪೂ.ಕಾಲೇಜು ಆವರಣದಲ್ಲಿ ಆಯೋಜಿಸಿರುವ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಪ್ರಸಕ್ತ ಸಾಲಿನ ’ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಚುರುಕಿನ ಆಟವಾದ ಟಿ.ಟಿ. ಅತಿವೇಗದಲ್ಲಿ ಗಮನ ಸೆಳೆಯುತ್ತದೆ. ಗ್ರಾಮೀಣ ಭಾಗದಲ್ಲಿ ಸ್ವಲ್ಪ ಕಡಿಮೆ ಇದ್ದರೂ ನಗರ, ಪಟ್ಟಣ ಪ್ರದೇಶದಲ್ಲಿ ಹೆಚ್ಚು ಜನಪ್ರಿಯ. ಆಟಗಳ ಸರದಾರ ಇದು. ಖಾಸಗಿ ಕ್ಲಬ್ಗಳಲ್ಲಿ ಮನರಂಜನೆಗಾಗಿ ಆಡಲಾಗುತ್ತದೆ ಎಂದ ಶಾಸಕರು, ಶಕ್ತಿಗಿಂತ ಇಲ್ಲಿ ಯುಕ್ತಿ ಮುಖ್ಯ. ಆಟಗಾರ ಪಾದರಸದಂತೆ ಚಲಿಸಬೇಕಾಗುತ್ತದೆ, ಏಕಾಗ್ರತೆ ಕಲಿಸುತ್ತದೆ. ಆಯಾಸವಾದರೂ ದೇಹಕ್ಕೆ ಸಹಕಾರಿ, ಮಾನಸಿಕ ಒತ್ತಡ ನಿವಾರಣೆಯಲ್ಲಿ ಪರಿಣಾಮಕಾರಿ ಎಂದರು.
ಡಿಡಿಪಿಐ ಪುಟ್ಟಾನಾಯ್ಕ, ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷೆ ತಸ್ಲೀಮಾ ಫಾತೀಮಾ, ಕಾರ್ಯದರ್ಶಿ ತೇಜಸ್ವಿನಿ, ತೀರ್ಪುಗಾರ ಮೈಸೂರಿನ ಕಾಂತರಾಜ್, ಟ್ರೋಫಿ ದಾನಿ ಜಯಶ್ರೀ ಮಾತನಾಡಿದರು. ಸಂತಜೋಸೆಫರ ಶಿಕ್ಷಣ ಸಂಸ್ಥೆ ವ್ಯವಸ್ಥಾಪಕಿ ಸಿಸ್ಟರ್ ಆನಿ, ಪ್ರಾಂಶುಪಾಲೆ ಸಿಸ್ಟರ್ ಡಾ.ಸಿತಾರಾ ಜೋಸೆಫ್, ಪ.ಪೂ.ಶಿಕ್ಷಣ ಇಲಾಖೆಯ ವೀಕ್ಷಕರಾದ ನವೀನ್ ಮತ್ತು ಗುರುಪ್ರಸಾದ್ , ಪ್ರಾಚಾರ್ಯರ ಸಂಘದ ಖಜಾಂಚಿ ಎಚ್.ಎಂ.ನಾಗರಾಜರಾವ್, ಉಪಾಧ್ಯಕ್ಷ ವಿರೂಪಾಕ್ಷ , ತಾಲ್ಲೂಕು ಪ್ರತಿನಿಧಿ ಶಿವಕುಮಾರ್ ಇದ್ದರು.