ಕನ್ನಡಪ್ರಭ ವಾರ್ತೆ ಇಳಕಲ್ಲ
ಛತ್ರಪತಿ ಶಿವಾಜಿ ಮಹಾರಾಜರು ನಮ್ಮವರಲ್ಲ ಅವರು ಮರಾಠಿಗರು ಎಂದು ತಾರತಮ್ಯ ಮಾಡುತ್ತಿರುವ ಕಾಂಗ್ರೆಸ್ಸಿಗರು ಕನ್ನಡ ಆಡಳಿತ ಭಾಷೆಯ ಬದಲಿಗೆ ಪರ್ಸಿಯನ್ ಭಾಷೆ ಹೇರಿ ಕನ್ನಡ ಕೊಲೆ ಮಾಡಿದ ಕನ್ನಡದ್ರೋಹಿ ಟಿಪ್ಪುವನ್ನು ಕೇವಲ ಒಂದು ಸಮುದಾಯದ ಓಲೈಸುವುದಕ್ಕಾಗಿ ನಮ್ಮವ ಎನ್ನುವುದು ಯಾವ ನ್ಯಾಯ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯರು ಸಿ.ಟಿ.ರವಿ ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರು.ನಗರದ ಎಸ್.ಆರ್. ಕಂಠಿ ವೃತ್ತದಲ್ಲಿ ದಿ.ನಾರಾಯಣಪ್ಪ ಚಿಲ್ಲಾಳ ವೇದಿಕೆಯಲ್ಲಿ ನಗರದ ಹಿಂದೂ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಛತ್ರಪತಿ ಶಿವಾಜಿ ಮಹಾರಾಜರು ತಮ್ಮ 42ನೇ ವಯಸ್ಸಿನಲ್ಲಿ ಮರಾಠಾ ಸಾಮ್ರಾಜ್ಯ ಸ್ಥಾಪಿಸಲಿಲ್ಲ ಅವರು ಸ್ಥಾಪಿಸಿದ್ದು ಹಿಂದವೀ ಸಾಮ್ರಾಜ್ಯ. ಹಿಂದವೀ ಸಾಮ್ರಾಜ್ಯ ಸ್ಥಾಪನೆಯಿಂದಾಗಿ ನಮ್ಮ ತಾಯಂದಿರ, ಸಹೋದರಿಯರ ಸಿಂಧೂರ ಉಳಿಯಿತು. ಸರ್ವೇ ಜನ ಸುಖಿನೋಭವಂತು ಇದು ನಮ್ಮ ಮಂತ್ರ. ನಮ್ಮದು ಲವ್ ಜಿಹಾದ್ ಅಲ್ಲ. ಸಪ್ತಪದಿ ತುಳಿದು ಜೀವನದುದ್ದಕ್ಕೂ ಒಬ್ಬಳೊಂದಿಗೆ ಬಾಳುವ ಧರ್ಮ. ನಮಗೆ ಇರುವುದು ಒಂದೇ ರಾಷ್ಟ್ರ ಅದುವೇ ಹಿಂದು ರಾಷ್ಟ್ರ. ನಾವೆಲ್ಲ ಹಿಂದು ನಾವೆಲ್ಲ ಒಂದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹುನಗುಂದ ಮತಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಜಿ. ಪಾಟೀಲ, ಹಿಂದುಗಳನ್ನು ಒಗ್ಗೂಡಿಸಿ ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತ ಬಂದಿರುವ ಹಿಂದು ಸೇವಾ ಟ್ರಸ್ಟ್ ಕಾರ್ಯ ಶ್ಲಾಘನೀಯ. ಇಂತಹ ಹಲವಾರು ಹಿಂದುಪರ ಸಂಘಟನೆಗಳನ್ನು ಹುಟ್ಟು ಹಾಕಿ ಅವುಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರುವ ಏಕೈಕ ಸಂಸ್ಥೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಇದರ ನಿಸ್ವಾರ್ಥ ಸೇವೆ ಸಂಘಟನಾ ಚಾತುರ್ಯ ಕಂಡ ಬ್ರಿಟಿಷ್ ಸರಕಾರ ಅಂದೇ ಬ್ಯಾನ್ ಮಾಡಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ, ಈಗ ಶತಮಾನ ಕಂಡ ಈ ಸಂಸ್ಥೆಯನ್ನು ಕೆಲವರು ಬ್ಯಾನ್ ಮಾಡಬೇಕು ಎಂದು ಹಾರಾಡುತ್ತಿದ್ದಾರೆ. ಹಿಂದುಗಳನ್ನು ಒಗ್ಗೂಡಿಸಿ ಹಿಂದು ಪರ ಕಾರ್ಯ ಮಾಡುತ್ತಿರುವ ಈ ಸಂಸ್ಥೆಯನ್ನು ಯಾರೇ ಬಂದರೂ ಆರೆಸ್ಸೆಸ್ ನಿಷೇಧಿಸಲು ಸಾಧ್ಯವಿಲ್ಲ ಎಂದರು.ಯುವಕರನ್ನು ಹಾಗೂ ಯುವತಿಯರನ್ನು ದಾರಿ ತಪ್ಪಿಸುವಂತ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ. ದುಶ್ಚಟ ಹಾಗೂಹೈಪಿಎಲ್ ಹೆಸರಿನಲ್ಲಿ ನಡೆಯುವ ಜೂಜಾಟದಿಂದ ಎಚ್ಚರ ವಹಿಸಬೇಕಾದ ಅವಶ್ಯವಾಗಿದೆ. ಇಂದು ಜಯಂತ್ಯೋತ್ಸವಗಳೆಲ್ಲ ಕೇವಲ ಒಂದು ಜಾತಿಗೆ ಸೀಮಿತಗೊಂಡಿರುವುದು ವಿಷಾದಕರ ಸಂಗತಿಯಾಗಿದೆ. ಅವರು ಯಾವುದೇ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಕುಷ್ಟಗಿ ಪಂಚದಶನಂ ಜುನಾ ಅಖಾಡ ಕಾರ್ಯದರ್ಶಿ, ಅಮರನಾಥೇಶ್ವರ ಮಹಾದೇವ ಮಠದ ಪೀಠಾಧೀಶ್ವರ ಮಹಾಂತ ಸಹದೇವಾನಂದಗಿರಿ, ಗುಳೇದಗುಡ್ಡದ ಶ್ರೀ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ವಕ್ತಾರರಾಗಿ ಯುವವಾಗ್ಮಿ ಹಾಗೂ ಲೇಖಕ ಅಮೋಘ ಹಿರೇಮಠ ಮಾತನಾಡಿದರು.