ಬೀದಿನಾಟಕಗಳಿಂದ ಜನಸಾಮಾನ್ಯರಿಗೆ ಅರಿವು ಮೂಡಿಸಲು ಸಾಧ್ಯ: ಸಾಂಬಶಿವ ದಳವಾಯಿ

KannadaprabhaNewsNetwork | Updated : Jun 28 2025, 12:20 AM IST

ಬೀದಿನಾಟಕಗಳು ಜನಸಾಮಾನ್ಯರಿಗೆ ಅರಿವು ಮೂಡಿಸಲು ಪರಿಣಾಮಕಾರಿ ಮಾಧ್ಯಮವಾಗಿದ್ದು, ಇಂದು ಬೀದಿನಾಟಕಗಳು, ರಂಗಗೀತೆಗಳಿಗೆ ಉತ್ತಮ ಅವಕಾಶ ನೀಡುವುದರ ಮೂಲಕ ಕಲಾವಿದರ ಬದುಕಿಗೆ ಆಸರೆಯಾಗುವ ಕಾರ್ಯ ಸರ್ಕಾರ, ಅಕಾಡೆಮಿಗಳಿಂದ ಆಗಬೇಕಿದೆ.

ಕರ್ನಾಟಕ ಬೀದಿನಾಟಕ ಅಕಾಡೆಮಿಯಿಂದ ಸಿಜಿಕೆ ಬೀದಿ ರಂಗದಿನ ಆಚರಣೆಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಬೀದಿನಾಟಕಗಳು ಜನಸಾಮಾನ್ಯರಿಗೆ ಅರಿವು ಮೂಡಿಸಲು ಪರಿಣಾಮಕಾರಿ ಮಾಧ್ಯಮವಾಗಿದ್ದು, ಇಂದು ಬೀದಿನಾಟಕಗಳು, ರಂಗಗೀತೆಗಳಿಗೆ ಉತ್ತಮ ಅವಕಾಶ ನೀಡುವುದರ ಮೂಲಕ ಕಲಾವಿದರ ಬದುಕಿಗೆ ಆಸರೆಯಾಗುವ ಕಾರ್ಯ ಸರ್ಕಾರ, ಅಕಾಡೆಮಿಗಳಿಂದ ಆಗಬೇಕಿದೆ ಎಂದು ಕರ್ನಾಟಕ ಬೀದಿನಾಟಕ ಅಕಾಡೆಮಿಯ ಅಧ್ಯಕ್ಷ ಸಾಂಬಶಿವ ದಳವಾಯಿ ತಿಳಿಸಿದರು.

ಪಟ್ಟಣದ ಹೊರವಲಯದ ಜ್ಞಾನಮಂಟಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ಬೀದಿನಾಟಕ ಅಕಾಡೆಮಿ, ಹಗರಿಬೊಮ್ಮನಹಳ್ಳಿಯ ಪುನೀತ್ ರಾಜ್ ಕುಮಾರ್ ಕಲಾ ಟ್ರಸ್ಟ್ ಸಿಜಿಕೆ ಬೀದಿರಂಗದಿನದ ಪ್ರಯುಕ್ತ ಆಯೋಜಿಸಿದ್ದ ರಂಗಗೀತೆಗಳು, ಉಪನ್ಯಾಸ, ಗೌರವ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸಂಗೀತಕ್ಕಿರುವ ಶಕ್ತಿ, ಪ್ರಶಿಕ್ಷಣಾರ್ಥಿಗಳಿಗೆ ನಾಟಕಗಳಿಂದಾಗುವ ಪ್ರಯೋಜನಗಳನ್ನು ವಿವರವಾಗಿ ತಿಳಿಸಿದರು. ರಂಗಗೀತೆಗಳು, ಮಾನವೀಯ ಮೌಲ್ಯಗಳ ಗೀತೆಗಳನ್ನು ಹಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಮನೋರಂಜನೆ ಮೂಲಕ ನಾಟಕರಂಗವನ್ನು ಪರಿಚಯಿಸಿದರು. ತಾವೇ ರಚಿಸಿದ ಜೀವ ಜೀವದ ಈ ಮಣ್ಣ ಗೀತೆಯನ್ನು ಸುಶ್ರಾವ್ಯವಾಗಿ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು.

ವಿಶೇಷ ಉಪನ್ಯಾಸಕರಾಗಿದ್ದ ಡಾ. ನಾಗರಾಜ ತಂಬ್ರಹಳ್ಳಿ ಮಾತನಾಡಿ, ಸಿಜಿಕೆ ಉಪನ್ಯಾಸಕರಾಗಿದ್ದರೂ ಅವರಿಗಿರುವ ರಂಗಾಸಕ್ತಿ, ಅವರು ನಾಟಕರಂಗಕ್ಕೆ ಮಾಡಿದ ಸೇವೆ ಅನನ್ಯ, ಅಂತವರ ಹೆಸರಿನಲ್ಲಿ ಬೀದಿರಂಗದಿನ ಆಚರಣೆ ಮಾಡುುತ್ತಿರುವುದು ಅವರಿಗೆ ನೀಡುವ ಗೌರವವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನಾಟಕ ಉಪನ್ಯಾಸಕ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಅವರಿಗೆ ಸಿಜಿಕೆ ರಂಗಪುರಸ್ಕಾರ ನೀಡಿ ಗೌರವಿಸಲಾಯಿತು. ಜ್ಞಾನಮಂಟಪ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ವಾಣಿ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಹಿತಿ ಭೀಮಣ್ಣ ಗಜಾಪುರ, ಜ್ಞಾನಮಂಟಪ ಬಿಇಡಿ ಕಾಲೇಜಿನ ಪ್ರಾಂಶುಪಾಲರಾದ ಎಸ್. ಚಾರೇಶ್, ಅಸೂಟಿ ಸಂತೋಷ್, ಅಸೂಟಿ ಶ್ರೀನಿವಾಸ್ ಉಪಸ್ಥಿತರಿದ್ದರು.