ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಮಹಿಳಾ ಸರ್ಕಾರಿ ಕಾಲೇಜಿನ ವನರಂಗದಲ್ಲಿ ಕರ್ನಾಟಕ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಂಡ್ಯದ ಕರ್ನಾಟಕ ಸಂಘ ಪ್ರವರ್ಧಮಾನಕ್ಕೆ ಬೆಳೆದು ನಿಂತು ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಸೇವೆಯಲ್ಲಿ ಅವಿರತವಾಗಿ ತೊಡಗಿಸಿಕೊಂಡಿದೆ. ನಿರಂತರ ಚಟುವಟಿಕೆಗಳಿಂದ ಸದೃಢವಾಗಿ ಬೆಳವಣಿಗೆ ಕಾಣುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ಹಸಿರು ನಾಡು, ರೈತರ ನಾಡೆಂದು ಮಂಡ್ಯ ಹೆಸರುವಾಸಿಯಾಗಿದೆ. ಜನಪದ ಸಂಸ್ಕೃತಿಯ ತವರೂರೆನಿಸಿದೆ. ಈ ನೆಲದಲ್ಲಿರುವ ಕರ್ನಾಟಕ ಸಂಘ ನಿರಂತರವಾಗಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡುತ್ತಾ ತಲಾ ೧೫ ಸಾವಿರ ನಗದು ಹಣವನ್ನು ನೀಡುತ್ತಾ ವರ್ಷದಿಂದ ವರ್ಷಕ್ಕೆ ಪ್ರಶಸ್ತಿ ಪುರಸ್ಕೃತರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಅದರ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ.ಒಂದು ಸಂಘವನ್ನು ಕಟ್ಟಿ ಬೆಳೆಸುವುದು ಇಂದು ಸುಲಭದ ಮಾತಲ್ಲ. ಆದರೆ, ಪ್ರೊ.ಬಿ.ಜಯಪ್ರಕಾಶಗೌಡರು ಕರ್ನಾಟಕ ಸಂಘದ ಸಾರಥಿಯಾಗಿರುವಂತೆ ಸಾಂಸ್ಕೃತಿಕ ರಾಯಭಾರಿಯೂ ಆಗಿದ್ದಾರೆ. ಕನ್ನಡ, ಕನ್ನಡ ಸಾಹಿತ್ಯದ ಕೆಲಸವೆಂದರೆ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇಂತಹ ಸಂಘ ಇನ್ನಷ್ಟು ಕ್ರಿಯಾಶೀಲವಾಗಿ ಬೆಳವಣಿಗೆ ಸಾಧಿಸಲಿ ಎಂದು ಆಶಿಸಿದರು.
ಲಯನ್ಸ್ ಸಂಸ್ಥೆಯ ಕೆ.ದೇವೇಗೌಡ ಮಾತನಾಡಿ, ಜನತಾ ಶಿಕ್ಷಣ ಕಟ್ಟಿದ ಕೆ.ವಿ.ಶಂಕರಗೌಡರು ಅವರ ಕುಟುಂಬಕ್ಕೆ ಸಂಸ್ಥೆಯನ್ನು ಬಿಟ್ಟುಕೊಡಲಿಲ್ಲ, ಅದೇ ರೀತಿ ಎಚ್.ಡಿ.ಚೌಡಯ್ಯನವರು ಕೂಡ ಅವರ ಕುಟುಂಬಕ್ಕೆ ಟ್ರಸ್ಟ್ ನೀಡದೆ ಕೆ.ವಿ.ಶಂಕರಗೌಡರ ಮೊಮ್ಮಗನಿಗೆ ಜವಾಬ್ದಾರಿ ಒಪ್ಪಿಸಿದರು. ಇದೇ ಸಂಸ್ಕಾರ. ಕುಟುಂಬದವರ ಏಳಿಗೆ ಬಗ್ಗೆ ಚಿಂತಿಸದೆ ಸಮಾಜದ ಬಗ್ಗೆ ಕಳಕಳಿಯನ್ನಿಟ್ಟುಕೊಂಡು ಕಾರ್ಯನಿರ್ವಹಿಸಿದರೆ ಆ ಸಂಸ್ಥೆ ಯಾವ ರೀತಿ ಬೆಳವಣಿಗೆ ಕಾಣುತ್ತದೆ ಎನ್ನುವುದಕ್ಕೆ ಜನತಾ ಶಿಕ್ಷಣ ಟ್ರಸ್ಟ್, ಕರ್ನಾಟಕ ಸಂಘ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ೪೨ ಜನರಿಗೆ ೧೫ ಸಾವಿರ ರು. ನಗದು, ಪ್ರಶಸ್ತಿ ಫಲಕವನ್ನು ನೀಡಲಾಯಿತು. ೨೦೨೩ರಿಂದ ಜಿಲ್ಲೆಯ ಹಿರಿಯ ಹಾಗೂ ಕಿರಿಯ ಸಾಧಕರಿಗೆ ಮೀಸಲಾಗಿರಿಸಿ ೨೫ ಜನ ಸಾಧಕರಿಗೆ ಪ್ರಶಸ್ತಿ ನೀಡಲಾಯಿತು. ಎರಡನೇ ವರ್ಷ ೩೫ ಜನ ಸಾಧಕರಿಗೆ ಪ್ರಶಸ್ತಿಗಳ ಸಂಖ್ಯೆ ೩೫ ಕ್ಕೇರಿತು. ಈ ವರ್ಷ ೪೨ಕ್ಕೇರಿದೆ. ಇದು ಜಿಲ್ಲೆಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಎಂದರು.