ಹೊನ್ನಾವರ: ಒತ್ತಡ ರಹಿತ ಕಲಿಕೆಯಿಂದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಾಧ್ಯ ಎಂದು ಪಪಂ ಮಾಜಿ ಸದಸ್ಯೆ ಜೊಸ್ಮಿನ್ ಡಯಾಸ್ ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ ವಕೀಲೆ ವೈಶಾಲಿ ನಾಯ್ಕ ಮಾತನಾಡಿ, ಹದಿನಾಲ್ಕು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿಗೆ ತರಲಾಗಿದೆ. ಯಾರು ಶಿಕ್ಷಣದಿಂದ ವಂಚಿತರಾಗದೇ ಎಲ್ಲರೂ ಶಿಕ್ಷಣ ಪಡೆಯಬೇಕು ಎಂದು ಕರೆ ನೀಡಿದರು. ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣಾ ನೀತಿ, ಬಾಲಾಪರಾಧಗಳಾದ ಬಾಲ್ಯ ವಿವಾಹ, ಬಾಲ ಕಾರ್ಮಿಕ ನಿಷೇಧ, ಲೈಂಗಿಕ ದೌರ್ಜನ್ಯ, ಅಪ್ರಾಪ್ತ ವಯಸ್ಸಿನಲ್ಲಿ ವಾಹನ ಚಾಲನೆ ಮುಂತಾದ ವಿಷಯಗಳ ಕುರಿತು ಮಾತನಾಡಿದರು.
ಹಳೆಯ ವಿದ್ಯಾರ್ಥಿ, ಸಮಾಜ ಸೇವಕ ನೀಲನ್ ಮಿರಾಂಡ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂದಿನ ಮಕ್ಕಳಿಗೆ ಪ್ರೀತಿಯೊಂದೇ ಸಾಲದು. ಪ್ರೀತಿಯ ಜತೆಗೆ ಅವರಿಗರಿಯದೆ ಶಿಕ್ಷೆ ನೀಡಿದರೆ ಮಕ್ಕಳು ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದರು. ನಮ್ಮ ಬದುಕಿನಲ್ಲಿ ನಮಗಿಂತಲೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ಬದುಕು ಸಾರ್ಥಕ ಎಂದರು. ಎಸ್ಡಿಎಂಸಿ ಅಧ್ಯಕ್ಷೆ ನೇತ್ರಾವತಿ ತಾಂಡಲ್ ಅಧ್ಯಕ್ಷತೆ ವಹಿಸಿದ್ದರು.ಪಪಂ ಉಪಾಧ್ಯಕ್ಷರಾದ ಲೋಲಾಸ್ ಪುಡ್ತಾಡೊ, ದಾನಿಗಳಾದ ಎಂ.ಪಿ. ಭಟ್, ವಕೀಲರಾದ ವಿ.ವಿ. ನಾಯ್ಕ, ಎಂಜಿನಿಯರ್ ಬಾಲ್ತಿದಾರ್ ಫರ್ನಾಂಡಿಸ್ ಮಾತನಾಡಿದರು.
ದಾನಿಗಳಾದ ಎಂ.ಪಿ. ಭಟ್ ಅವರು ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸಿದರು. ಶಾಲೆಯ ಪರವಾಗಿ ಹಳೆಯ ವಿದ್ಯಾರ್ಥಿ ನೀಲನ್ ಮಿರಾಂಡ್ ಮತ್ತು ದಾನಿಗಳಾದ ಎಂ.ಪಿ. ಭಟ್ ಅವರನ್ನು ಸನ್ಮಾನಿಸಲಾಯಿತು.ಐದನೇ ತರಗತಿಯ ನಿಶ್ಮಿತಾ ಪಟಗಾರ ಸಂವಿಧಾನ ಪೀಠಿಕೆ ಓದಿದರು. ಮುಖ್ಯಾಧ್ಯಾಪಕಿ ಲುವೇಜಿನ ಪಿಂಟೋ ಸ್ವಾಗತಿಸಿದರು. ಶಿಕ್ಷಕ ಪಿ.ಆರ್. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಪ್ಲಾವೀಯಾ ಮೆಂಡೋಸ್ ಕಾರ್ಯಕ್ರಮ ನಿರೂಪಿಸಿದರು.
: