ಗದಗ: ಸಂಗೀತಕ್ಕೆ ರೋಗಗಳನ್ನು ನಿಧಾನಗೊಳಿಸುವ ಶಕ್ತಿ ಇದೆ. ಸಂಗೀತದಿಂದ ಮಾನಸಿಕ ಒತ್ತಡ ಶಮನಗೊಂಡು ಪ್ರಸನ್ನತೆ ಮೂಡುವುದು ಎಂದು ನಿವೃತ್ತ ಅಧಿಕಾರಿ ಎಂ.ಜಿ. ಸಂತೋಜಿ ಹೇಳಿದರು.
ಸಂಗೀತ ಕ್ಷೇತ್ರಕ್ಕೆ ಗದುಗಿನ ಕೊಡುಗೆ ಅನುಪಮವಾದದ್ದು, ವೀರೇಶ್ವರ ಪುಣ್ಯಾಶ್ರಮದ ಮೂಲಕ ಪಂ. ಪಂಚಾಕ್ಷರ ಗವಾಯಿಗಳು, ಪಂ. ಪುಟ್ಟರಾಜ ಗವಾಯಿಗಳು ಸಾವಿರ ಸಾವಿರ ಕಲಾವಿದರಿಗೆ ಶಾಸ್ತ್ರೋಕ್ತ ಸಂಗೀತ ನೀಡಿದ್ದರ ಪರಿಣಾಮವಾಗಿ ಅವರಿಂದ ರಾಜ್ಯ ದೇಶ ವಿದೇಶಗಳಲ್ಲಿ ಖ್ಯಾತ ಕಲಾವಿದರಾಗಿದ್ದಾರೆ. ಅಂಧ ವಿಕಲಚೇತನರು ಸಂಗೀತದ ಮೂಲಕ ತಮ್ಮ ಭವ್ಯ ಭವಿಷ್ಯ ರೂಪಿಸಿಕೊಂಡಿದ್ದಾರೆ. ಸಂಗೀತವೇ ಅವರಿಗೆ ಉಸಿರು ಆಸ್ತಿಯಾಗಿದೆ ಎಂದರು.
ಕರ್ನಾಟಕ ಕೀರ್ತನ ಕಲಾ ವೇದಿಕೆಯ ಅಧ್ಯಕ್ಷ ಸಿದ್ಧೇಶ್ವರ ಶಾಸ್ತ್ರೀ ತೆಲ್ಲೂರ ಮಾತನಾಡಿ, ಡಾ. ಪಂ. ಪುಟ್ಟರಾಜ ಗವಾಯಿಗಳವರ ಹಾಗೂ ಡಾ. ಕಲ್ಲಯ್ಯಜ್ಜನವರ ಆಶೀರ್ವಾದದೊಂದಿಗೆ ಕರ್ನಾಟಕ ಕೀರ್ತನ ಕಲಾ ವೇದಿಕೆ ಸಂಗೀತ, ಸಾಹಿತ್ಯ, ಕೀರ್ತನ, ಜನಪದ ಕಾರ್ಯಕ್ರಮಗಳೊಂದಿಗೆ ವೈವಿಧ್ಯಮಯ ಕಾರ್ಯಕ್ರಮ ನೀಡುತ್ತಿದೆ. ಹಲವಾರು ಹಿರಿಯ ಕಿರಿಯ ಕಲಾವಿದರಿಗೆ ಕರ್ನಾಟಕ ಕೀರ್ತನ ಕಲಾ ವೇದಿಕೆ ಒದಗಿಸಿದೆ ಎಂದರು.ಈ ವೇಳೆ ಅಧ್ಯಕ್ಷತೆ ವಹಿಸಿದ್ದ ಬಸಯ್ಯ ಹಿರೇಮಠ ಮಾತನಾಡಿದರು. ಯಮನಪ್ಪ ತಳವಾರ, ಎಂ.ಎನ್. ಕುಬಸದ, ವಿ.ಡಿ. ಶಿವಸಿಂಪಿಗೇರ, ರಾಜಶೇಖರ ಕುನ್ನಿ, ವಿರುಪಾಕ್ಷಗೌಡ ಗೌಡರ, ನಿಜಲಿಂಗಪ್ಪ ಕಿತ್ತೂರ, ಶರಣಯ್ಯಸ್ವಾಮಿ ವೀರಕ್ತಮಠ ಇದ್ದರು. ಸಂಗೀತ ಕಲಾವಿದೆ ಗಾಯಕಿ ಅನ್ನಪೂರ್ಣ ಹುಬ್ಬಳ್ಳಿ ಅವರಿಂದ ಸುಗಮ ಸಂಗೀತ ಹಾಗೂ ಜನಪದೋತ್ಸವ ಜರುಗಿತು.