ಅಳ್ನಾವರ:
ಗ್ರಾಮದ ಸರ್ವೇ ನಂಬರ್ 118ಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಸಾಗುವಳಿ ಕುರಿತು ವ್ಯಾಜ್ಯ ಉಂಟಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಜತೆಗೆ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದರಿಂದ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಪ್ರಭಾವತಿ, ಭೂಮಿಯ ಅಕ್ರಮ ಸಾಗುವಳಿ ಸಕ್ರಮಗೊಳಿಸಲು ನೀವು ಅರ್ಜಿ ಸಲ್ಲಿಸಿದ್ದು ಬಗರ್ಹುಕುಂ ಸಾಗುವಳಿ ಜಮೀನು ಮಂಜೂರಾತಿಗೆ ಸಮಿತಿ ಮುಂದೇ ಇಡಲಾಗಿದೆ. ಅಲ್ಲಿ ನಿರ್ಣಯವಾಗುವ ವರೆಗೂ ಭೂಮಿ ಸರ್ಕಾರಕ್ಕೆ ಸೇರಿರುತ್ತದೆ ಎಂದು ತಿಳಿಸಿದರು.
ಸಾಗುವಳಿದಾರರು ಒದಗಿಸುವ ದಾಖಲಾತಿಗಳ ಆಧಾರದ ಮೇಲೆ ಜಮೀನು ಮಂಜೂರ ಮಾಡಲಾಗುವುದು. ತಮ್ಮ ತಮ್ಮಲ್ಲಿ ಗೊಂದಲ ಸೃಷ್ಠಿಸಿಕೊಳ್ಳದೆ ಸರ್ಕಾರ ಕೇಳುವ ಮಾಹಿತಿಯನ್ನು ಸಕಾಲದಲ್ಲಿ ಒದಗಿಸುವ ಜವಾಬ್ದಾರಿ ನಿಮ್ಮದು. ಇದನ್ನೇ ಮುಂದಿಟ್ಟುಕೊಂಡು ಶಾಂತಿ ಭಂಗಕ್ಕೆ ಯತ್ನಿಸಿದರೆ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಅರ್ಹ ಸಾಗುವಳಿದಾರರಿಗೆ ಅನ್ಯಾಯವಾಗುವುದನ್ನು ತಡೆಯಲು ಇಲಾಖೆ ಅಗತ್ಯ ಮಾಹಿತಿ ಕಲೆ ಹಾಕುತ್ತಿದೆ. ಗೊಂದಲಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಿ ಕ್ರಮ ವಹಿಸಲಾಗುವುದು. ಜಾತಿ ನಿಂದನೆಯಂತಹ ಪ್ರಕರಣ ದಾಖಲಾದರೆ ಆಯಾ ಸಮಾಜದ ನಡುವೆ ಒಡಕನ್ನು ಸೃಷ್ಟಿಸಲಿದೆ. ಹೀಗಾಗಿ ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.ಡಿವೈಎಸ್ಪಿ ವಿನೋದ ಮುಕ್ತೇದಾರ ಮಾತನಾಡಿ, ಗ್ರಾಮಸ್ಥರು ಸೌಹಾರ್ದತೆ ಮತ್ತು ಶಾಂತಿಯಿಂದ ಬದುಕಬೇಕು. ಅದನ್ನು ಬಿಟ್ಟು ಜಮೀನಿನ ವಿಷಯದಲ್ಲಿ ಅನವಶ್ಯಕವಾಗಿ ಶಾಂತಿ ವಾತಾವರಣ ಹಾಳು ಮಾಡಿದರೆ ಕ್ರಮಕೈಕೊಳ್ಳಲು ಹಿಂಜರಿಯುವುದಿಲ್ಲ. ಪೊಲೀಸರ ತಾಳ್ಮೆ ಪರೀಕ್ಷಿಸಬೇಡಿ ಎಂದು ಹೇಳಿದರು.
ಸಚಿವರ ಆಪ್ತ ಕಾರ್ಯದರ್ಶಿ ಶ್ರೀಕಾಂತ ಗಾಯಕವಾಡ, ಸಿಪಿಐ ರಫೀಕ್ ತಹಶೀಲದಾರ, ತಾಪಂ ಇಒ ಪ್ರಶಾಂತ ತುರಕಾಣಿ, ಪಿಎಸ್ಐ ಬಸವರಾಜ ಯದ್ದಲಗುಡ್ಡ, ಆರ್ಎಫ್ಒ ಬಸವಂತಪ್ಪ, ಸಮಾಜ ಕಲ್ಯಾಣ ಇಲಾಖೆಯ ಗೀತಾ ಕುಂಚನೂರ ಇದ್ದರು.ಪೊಲೀಸರು-ಅಧಿಕಾರಿಗಳಿಗೆ ತಲೆನೋವು