ನಿಖರ ಮಾಹಿತಿ ನೀಡದಿದ್ದರೆ ಕಠಿಣ ಕ್ರಮ: ಸಚಿವ ಬಸವರಾಜ ರಾಯರಡ್ಡಿ

KannadaprabhaNewsNetwork |  
Published : Aug 08, 2026, 02:30 AM IST
ಸಭೆಯ ಅಧ್ಯಕ್ಷತೆ ವಹಿಸಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿದರು. | Kannada Prabha

ಸಾರಾಂಶ

ಎನ್‌ಡಿಆರ್‌ಎಫ್ ಹಾಗೂ ಸರ್ಕಾರದ ವಿವಿಧ ಮಾನದಂಡಗಳನ್ವಯ ತಾಲೂಕು ಬರಪೀಡಿತ ತಾಲೂಕೆಂದು ಘೋಷಣೆ ಹಾಗೂ ಪರಿಹಾರಕ್ಕೆ ಸಂಬಂಧಿಸಿದಂತೆ ತಾಲೂಕು ಅಧಿಕಾರಿಗಳು ಮುಂದಿನ ವಾರದೊಳಗೆ ನಿಖರ ವರದಿ ಸಿದ್ಧಪಡಿಸಬೇಕು.

ಮುಂಡರಗಿ: ಬರ ಪರಿಹಾರ, ಕುಡಿಯುವ ನೀರು ಹಾಗೂ ಬೆಳೆನಷ್ಟದ ಕುರಿತು ತಾಲೂಕು ಮಟ್ಟದ ಅಧಿಕಾರಿಗಳು ನೀಡಿದ ಅಪೂರ್ಣ ಮತ್ತು ಅಸ್ಪಷ್ಟ ಮಾಹಿತಿಯ ವಿರುದ್ಧ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ವಾರದೊಳಗೆ ಸರಿಯಾದ ವರದಿ ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಬಸವರಾಜ ರಾಯರಡ್ಡಿ ಅವರು ಕೃಷಿ, ತೋಟಗಾರಿಕೆ, ಗ್ರಾಮೀಣ ನೀರು ಸರಬರಾಜು ಹಾಗೂ ಪುರಸಭೆ ಅಧಿಕಾರಿಗಳಿಗೆ ಎಚ್ಚರಿಸಿದರು.ಶುಕ್ರವಾರ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕಿನ ಬರ ಪರಿಸ್ಥಿತಿ ಪರಿಶೀಲನೆ ನಡೆಸಿ ನಂತರ ಜರುಗಿದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎನ್‌ಡಿಆರ್‌ಎಫ್ ಹಾಗೂ ಸರ್ಕಾರದ ವಿವಿಧ ಮಾನದಂಡಗಳನ್ವಯ ತಾಲೂಕು ಬರಪೀಡಿತ ತಾಲೂಕೆಂದು ಘೋಷಣೆ ಹಾಗೂ ಪರಿಹಾರಕ್ಕೆ ಸಂಬಂಧಿಸಿದಂತೆ ತಾಲೂಕು ಅಧಿಕಾರಿಗಳು ಮುಂದಿನ ವಾರದೊಳಗೆ ನಿಖರ ವರದಿ ಸಿದ್ಧಪಡಿಸಬೇಕು. ತೋಟಗಾರಿಕೆ ಬೆಳೆಗಳಾದ ಮೆಣಸಿನಕಾಯಿ, ಈರುಳ್ಳಿ ಇತ್ಯಾದಿ ಹಾಗೂ ಕೃಷಿ ಬೆಳೆಗಳು ಎಷ್ಟೆಷ್ಟು ಎಕರೆ ಹಾನಿಯಾಗಿವೆ ಮತ್ತು ಎಕರೆಗೆ ಎಷ್ಟು ಪರಿಹಾರ ನೀಡಬೇಕೆಂಬ ಸ್ಪಷ್ಟ ಅಂಕಿಸಂಖ್ಯೆಗಳ ಮಾಹಿತಿಯನ್ನು ಅಧಿಕಾರಿಗಳು ತಕ್ಷಣವೇ ಸಿದ್ಧಪಡಿಸಬೇಕು.ಬೆಳೆವಿಮೆ ಯೋಜನೆಯಡಿ ರೈತರು ಪಾವತಿಸಿರುವ ಮೊತ್ತ ಮತ್ತು ವಿಮಾ ಕಂಪನಿಗಳಿಂದ ಬರಬೇಕಾದ ಪರಿಹಾರದ ವಿವರಗಳನ್ನು ಸಮರ್ಪಕವಾಗಿ ಕೋಆರ್ಡಿನೇಟ್ ಮಾಡಬೇಕು. ಇದರಲ್ಲಿ ಶೇ. 50ರಷ್ಟು ರಾಜ್ಯ ಸರ್ಕಾರ ಹಾಗೂ ಶೇ. 50ರಷ್ಟು ಕೇಂದ್ರ ಸರ್ಕಾರದ ಅನುದಾನವಿದ್ದು, ನಿಯಮಾನುಸಾರ ಎಸ್‌ಡಿಆರ್‌ಎಫ್ ನಿಧಿಯಿಂದ ಹೆಕ್ಟೇರ್‌ಗೆ ನಿಗದಿತ ಹಣ ತಲುಪುವಂತೆ ನೋಡಿಕೊಳ್ಳಬೇಕು. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಆರ್‌ಡಿಪಿಆರ್ ಇಲಾಖೆಯ ಅನುದಾನ ಬಳಸಿ ಸಮಸ್ಯ ಪರಿಹರಿಸಲು ಕ್ರಮ ವಹಿಸಬೇಕು. ಮುಂಬರುವ 8- 9 ತಿಂಗಳಿಗೆ ಸರಿಹೊಂದುವಂತೆ ಮೇವಿನ ಲಭ್ಯತೆ ಮತ್ತು ವಿತರಣೆಯ ಪೂರ್ಣ ಮಾಹಿತಿ ಇರಬೇಕು ಎಂದರು.ತಾಲೂಕು ಮಟ್ಟದ ಅಧಿಕಾರಿಗಳಿಗೆ ಕೆಲಸ ಮಾಡುವ ಸಾಮರ್ಥ್ಯವಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಶ್ರಮಿಸುತ್ತಿಲ್ಲ. ಸದ್ಯ ಅಧಿಕಾರಿಗಳ ಬಳಿ ಇರುವ ಮಾಹಿತಿ ಅಪೂರ್ಣವಾಗಿದೆ. ಹೀಗಾಗಿ ಮುಂದಿನ ವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಳಗ್ಗೆ 10.30ರಿಂದ ಸತತ 8ರಿಂದ 10 ಗಂಟೆಗಳ ಕಾಲ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮಗ್ರ ಸಭೆ ನಡೆಸಲಾಗುವುದು. ಆ ವೇಳೆಗೆ ಸರಿಯಾದ ಮಾಹಿತಿ ನೀಡದಿದ್ದರೆ ಜವಾಬ್ದಾರಿ ಇಲ್ಲದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಉಪವಿಭಾಗಾಧಿಕಾರಿ ಗಂಗಪ್ಪ, ಸಿ.ಆರ್. ಮುಂಡರಗಿ, ಚೇತನಾ ಪಾಟೀಲ, ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್., ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಸೇರಿದಂತೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಜಿಲ್ಲೆಯಲ್ಲಿ ಶೇ. 32 ಮಳೆ ಕೊರತೆ: ರಾಯರಡ್ಡಿ

ಡಂಬಳ: ಮಳೆ ಅಭಾವದಿಂದ ಬೆಳೆ ಹಾನಿಗೊಳಗಾದ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮಗಳ ರೈತರ ಜಮೀನುಗಳಿಗೆ ನೂತನ ಸಚಿವ ಬಸವರಾಜ ರಾಯರಡ್ಡಿ ಶುಕ್ರವಾರ ಭೇಟಿ ನೀಡಿ ಬರ ಪರಿಸ್ಥಿತಿ ಹಾಗೂ ಬೆಳೆಹಾನಿ ಪರಿಶೀಲಿಸಿದರು.ಬಳಿಕ ಸಚಿವರು ಮಾತನಾಡಿ, ರಾಜ್ಯದಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಉಂಟಾಗಿದ್ದು, ಹಾಳಾದ ಬೆಳೆ ಖುದ್ದಾಗಿ ವೀಕ್ಷಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಸರಾಸರಿ ಶೇ. 32ರಷ್ಟು ಮಳೆ ಆಗಿಲ್ಲ ಎನ್ನುವ ಮಾಹಿತಿ ಇದ್ದು, ಇನ್ನೂ ಸೂಕ್ತ ಪರಿಶೀಲನೆ ನಡೆಸಲಾಗುವುದು. ಪ್ರತಿಯೊಬ್ಬ ರೈತರಿಗೂ ಪರಿಹಾರ ದೊರೆಯಬೇಕು. ಕೃಷಿ ಇಲಾಖೆ ಅಧಿಕಾರಿಗಳು ಹಾನಿಯ ಸಮಗ್ರ ವರದಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕು. ಯಾವುದೇ ರೈತರು ಪರಿಹಾರದಿಂದ ವಂಚಿತರಾಗದಂತೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.ರಾಜ್ಯ ಸರ್ಕಾರ ರೈತರ ಪರವಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ. ಮಾರ್ಗಸೂಚಿಗಳ ಪ್ರಕಾರವೇ ಬೆಳೆ ಪರಿಹಾರ ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು. ನಾನು ರೈತರಿಗೆ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಸುಜಾತಾ ದೊಡ್ಡಮನಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್., ಕೃಷಿ ಜಂಟಿ ಕೃಷಿ ನಿರ್ದೇಶಕರಾದ ಚೇತನಾ ಪಾಟೀಲ, ತೋಟಗಾರಿಕಾ ಜಂಟಿ ನಿರ್ದೇಶಕರು ಚಿದಾನಂದ, ಗದಗ ಜಿಲ್ಲೆಯ ಮತ್ತು ಮುಂಡರಗಿ ತಾಲೂಕಿನ ಹಿರಿಯ ಅಧಿಕಾರಿಗಳು, ರೈತ ಸಂಘಟನೆಗಳು, ರೈತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

3 ವರ್ಷದಿಂದ ಶುದ್ಧ ಕುಡಿವ ನೀರಿನ ಘಟಕ ಬಂದ್
ಜೀವಭಯದಲ್ಲೇ ಬಸ್‌ನಲ್ಲಿ ವಿದ್ಯಾರ್ಥಿಗಳ ಪ್ರಯಾಣ