ಗದಗ: ಇತ್ತೀಚಿನ ದಿನಗಳಲ್ಲಿ ಪಾರ್ಶ್ವವಾಯು ಸಮಸ್ಯೆ ಸಮಾಜದಲ್ಲಿ ಹೆಚ್ಚಾಗುತ್ತಿದೆ. ಅದರಿಂದ ಕುಟುಂಬ, ಸಮಾಜ, ಆರ್ಥಿಕ, ಸಾಮಾಜಿಕವಾಗಿ ಹಿಂದೆ ಉಳಿಯುತ್ತಿದೆ. ಆ ನಿಟ್ಟಿನಲ್ಲಿ ಪಾರ್ಶ್ವವಾಯುವಿನ ಲಕ್ಷಣಗಳನ್ನು ಬೇಗನೆ ಗುರುತಿಸಿ, ಚಿಕಿತ್ಸೆ ಪಡೆಯುವಿಕೆ ಹಾಗೂ ತಡೆಗಟ್ಟುವುದು ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಡಾ. ರಾಜೇಂದ್ರ ಸಿ. ಬಸರಿಗಿಡದ ಹೇಳಿದರು.
ಅಸಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ. ಅರುಣಕುಮಾರ ಮಾತನಾಡಿ, ರೋಗಿಗಳಿಗೆ ಒಂದು ನಿಮಿಷ ಸಹ ಬಂಗಾರದಂತಹ ಸಮಯವಾಗಿದ್ದು, ಸಮಯವನ್ನು ಕಳೆಯದೆ ಚಿಕಿತ್ಸೆಗೆ ತುರ್ತಾಗಿ ಸ್ಪಂದಿಸುವುದು ಅತಿ ಅವಶ್ಯಕ ಎಂದು ಹೇಳಿದರು.
ಶ್ವಾಸಕೋಶ ತಜ್ಞ ಡಾ. ಇರ್ಫಾನ್ ಎಂ. ಮಾತನಾಡಿ, ಸಮಾಜದಲ್ಲಿ ಮೂಢನಂಬಿಕೆಗಳಿಂದ ಆಚರಣೆಯಲ್ಲಿರುವ ವಿವಿಧ ಚಿಕಿತ್ಸೆಗೆ ಒಳಗಾಗಿ ರೋಗವನ್ನು ಹೆಚ್ಚು ಮಾಡಿಕೊಳ್ಳದೆ ತಜ್ಞ ವೈದ್ಯರನ್ನು ಭೇಟಿ ಮಾಡಿ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಂಡು ಪಾರ್ಶ್ವವಾಯುವಿನಿಂದ ಮುಕ್ತರಾಗಿ ಎಂದರು.ಡಾ. ಅರ್ಪಿತಾ ಮಾತನಾಡಿದರು. ಡಾ. ಸಂಗಮೇಶ ಅಸೂಟಿ ಅಧ್ಯಕ್ಷತೆ ವಹಿಸಿದ್ದರು. ರೇಷ್ಮಾ ನದಾಫ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಇದ್ದರು. ಪ್ರವೀಣ ಎಸ್. ಕಾರ್ಯಕ್ರಮ ನಿರೂಪಿಸಿದರು. ರವಿ ನಂದ್ಯಾಳ ಸ್ವಾಗತಿಸಿದರು. ರೇವಣಸಿದ್ದಪ್ಪ ವಂದಿಸಿದರು.