ಉಳ್ಳಾಲ: ‘ವಿಕಸಿತ ಭಾರತ’ ಕೇವಲ ಘೋಷಣೆ ಅಥವಾ ರಾಜಕೀಯ ನುಡಿ ಅಲ್ಲ, ಅದು ದೇಶದ ಭವಿಷ್ಯವನ್ನು ರೂಪಿಸುವ ದೃಢ ಸಂಕಲ್ಪವಾಗಿದೆ. ಶಿಕ್ಷಣ, ಮಾನವೀಯತೆ ಮತ್ತು ಸಮಾಜ ಸೇವೆಯ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಅಪಾರ ಕೊಡುಗೆ ನೀಡಿದ ವಿನಯ್ ಹೆಗ್ಡೆ ಅವರ ಕಾರ್ಯಗಳು ಸಮಾಜದ ಮೇಲೆ ಮಹತ್ತರವಾದ ಪ್ರಭಾವ ಬೀರಿವೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.
ವಿನಯ್ ಹೆಗ್ಡೆ ಅವರ ಕೊಡುಗೆ ಮಾನವೀಯತೆಯ ಬಹುಮುಖ ರೂಪವಾಗಿದೆ. ಅವರು ಸಮಾಜಕ್ಕೆ ವಿವಿಧ ರೀತಿಯ ಶಿಕ್ಷಣ ನೀಡಿದ್ದು, ಅವರ ತಂದೆಯ ಮಾರ್ಗದರ್ಶನದಿಂದ ದೇಶ ಸೇವೆಯ ದಾರಿಯಲ್ಲಿ ಮುಂದುವರಿದಿದ್ದಾರೆ. ಒಬ್ಬ ಉತ್ತಮ ಭಾರತೀಯ ನಾಗರಿಕನು ಸಮಾಜದ ಅಗತ್ಯಗಳನ್ನು ಅರಿತು ಸೇವೆ ಸಲ್ಲಿಸಬೇಕು ಎಂಬುದನ್ನು ಅವರು ತೋರಿಸಿದ್ದಾರೆ ಎಂದರು. ಆತ್ಮನಿರ್ಭರ ಭಾರತದ ದಾರಿಯಲ್ಲಿ ಮಹಿಳೆಯರು ಮತ್ತು ಯುವಕರು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ‘ನಾರಿ ಶಕ್ತಿ’ ದೇಶದ ಅಭಿವೃದ್ಧಿಯ ಪ್ರಮುಖ ಶಕ್ತಿಯಾಗಿದೆ; ಎಲ್ಲರೂ ನಾಯಕತ್ವದ ಪಾತ್ರ ವಹಿಸಬೇಕು. ತಂತ್ರಜ್ಞಾನವನ್ನು ಕೇವಲ ಬಳಕೆಗೆ ಮಾತ್ರ ಸೀಮಿತಗೊಳಿಸದೆ, ಉದ್ಯೋಗ ಸೃಷ್ಟಿಗೆ ಬಳಸುವತ್ತ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟರು.
ವಿಧಾನಸಭಾಪತಿ ಯು.ಟಿ.ಖಾದರ್ ಮಾತನಾಡಿ, ನಾನು ನಿರ್ಮಲಾ ಸೀತಾರಾಮನ್ ಅವರ ಭಾಷಣವನ್ನು ಕೇಳಲು ಬಂದಿದ್ದೇನೆ. ವಿನಯ್ ಹೆಗ್ಡೆ ಅವರು ನಿಜವಾದ ಭಾರತೀಯರಿಗೆ ಉದಾಹರಣೆ. ಅವರ ಜ್ಞಾನ, ಶಿಕ್ಷಣ ಮತ್ತು ಮಾನವೀಯತೆ ಜೊತೆ ಸರಳತೆ ಅವರನ್ನು ಮಹಾನ್ ವ್ಯಕ್ತಿಯನ್ನಾಗಿ ಮಾಡಿದೆ. ವಿನಯ್ ಹೆಗ್ಡೆ ಅವರಂತಹ ವ್ಯಕ್ತಿಗಳಿಂದ ನಾವು ಉತ್ತಮ ಗುಣಗಳನ್ನು ಕಲಿಯಬೇಕು ಮತ್ತು ವಿಕಸಿತ ಭಾರತದ ದಿಶೆಯಲ್ಲಿ ಮುಂದೆ ಸಾಗಬೇಕು ಎಂದರು.ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಹ-ಕುಲಾಧಿಪತಿ ಡಾ. ಎಂ. ಶಾಂತರಾಮ್ ಶೆಟ್ಟಿ ಉಪಸ್ಥಿತರಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ನಿರ್ಮಲಾ ಸೀತಾರಾಮನ್ ಅವರ ಪರಿಚಯವನ್ನು ವಿವರಿಸಿದರು. ಡಾ. ಸಿದ್ದಾರ್ಥ ಶೆಟ್ಟಿ ನಿರೂಪಿಸಿದರು. ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ನಿಟ್ಟೆ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ವಿಶಾಲ್ ಹೆಗ್ಡೆ ಸ್ವಾಗತಿಸಿದರು. ಕುಲಪತಿ ಡಾ. ಎಂ. ಎಸ್. ಮೂಡಿತ್ತಾಯ ವಂದಿಸಿದರು.ಬದುಕಿದ್ದರೆ ಹೀಗೆಯೇ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟವರು ವಿನಯ್ ಹೆಗ್ಡೆ ಅವರ ವ್ಯಕ್ತಿತ್ವ ಅವರ ಸರಳತೆ ನಮ್ಮೆಲರಿಗೂ ದಾರಿದೀಪ ಬದುಕಿದರೆ ಅವರಂತೆ ಬದುಕಬೇಕು. ಮಂಗಳೂರು ಅನೇಕ ಅವಕಾಶಗಳ ನೆಲೆ. ಇಲ್ಲಿ ಶಿಕ್ಷಣಕ್ಕೆ ಮಹತ್ವ ಕೊಟ್ಟು ಇಷ್ಟು ದೊಡ್ಡ ಸಂಸ್ಥೆಯನ್ನು ಕಟ್ಟಿದ್ದಾರೆ. ವಿನಯ್ ಹೆಗ್ಡೆ ಅವರು ತುಳುನಾಡಿನ ಅಸ್ಮಿತೆಯನ್ನು ತೋರಿಸಿದ್ದಾರೆ.